Skip to main content

ಉಳ್ಳಾಲದ ಮೊದಲ ಸೂಫಿ ಸಂತ ಅಚ್ಚೀ ಸಾಹಿಬ್ ವಲಿಯುಲ್ಲಾಹ್...!


ಉಳ್ಳಾಲದ ಅಳೇಕಲ ಎಂಬ ಊರಿನಲ್ಲಿ ಸಮಾಧಿಸ್ಥರಾಗಿರುವ ಸೂಫಿ ಸಂತ ಅಚ್ಚೀ ಸಾಹಿಬ್ ವಲಿಯುಲ್ಲಾಹ್ ಉಳ್ಳಾಲದಲ್ಲಿ ಪ್ರಸಿದ್ಧಿಗೆ ಬಂದ ಮೊದಲ ಸೂಫಿ ಸಂತ. ನಮ್ಮಲ್ಲನೇಕರು ಹೇಳುವಂತೆ ಮದೀನಾ ನಗರಿಯಿಂದ ಕಡಲ ತೆರೆಗಳ ದಾಟಿ ಬಂದ ಸೂಫಿ ಸಂತ ಸಯ್ಯದ್ ಮದನಿಯವರು ಬರುವುದಕ್ಕಿಂತ ಮುಂಚೆ ಉಳ್ಳಾಲದಲ್ಲಿ ಇಸ್ಲಾಮ್ ಧರ್ಮದ ಆಚಾರ ವಿಚಾರಗಳೇ ಇರಲಿಲ್ಲ ಎನ್ನುವುದು ಒಂದು ಕಪೋಲ ಕಲ್ಪಿತ ವಿಚಾರ.ಸಯ್ಯದ್ ಮದನಿ‌(ಖ.ಸಿ) ಅವರು ಬರುವುದಕ್ಕಿಂತ ಮುಂಚೆ ಉಳ್ಳಾಲದಲ್ಲಿ ಎರಡು ಮಸೀದಿಗಳಿದ್ದವು. 
-ಒಂದು ಈಗ  ಮದನಿ ಮಸೀದಿ ಎಂದು ಪ್ರಸಿದ್ಧಿಯಾಗಿರುವ ಮಸೀದಿ. ಅದನ್ನು ಹಿಂದೆ ಕೂಡಂಕಾರೆ ಪಳ್ಳಿ ಎನ್ನುತ್ತಿದ್ದರು.ಸಯ್ಯದ್ ಮದನಿಯವರು ಬಂದು ಅಲ್ಲೇ ಧ್ಯಾನ ನಿರತರಾಗಿದ್ದು ಜನರ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸುತ್ತಿದ್ದರು. ಅವರ ಕಾಲಾನಂತರ ಅವರು ಧ್ಯಾನನಿರತರಾಗುತ್ತಿದ್ದ ಕೂಡಂಕಾರೆ ಪಳ್ಳಿಗೆ ಮದನಿ ಮಸೀದಿ ಎಂದು ಹೆಸರಾಯಿತು. ಸರಕಾರಿ ದಾಖಲೆಗಳಲ್ಲಿ ಅದು ಇಂದಿಗೂ ಸಯ್ಯದ್ ಮದನಿ ಗುಡಿ ಎಂದೇ ಇದೆ.

-ಎರಡನೆಯ ಮಸೀದಿ ಉಳ್ಳಾಲದ ಅಳೇಕಲ ಮಸೀದಿ. ಈ ಮಸೀದಿಗೊಂದು ರಾಜಕೀಯ ಐತಿಹ್ಯವಿದೆ. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಡುತ್ತಿದ್ದ ಕಾಲವದು. ಮೊದಲ ಬಾರಿ ಪೋರ್ಚುಗೀಸರ ವಿರುದ್ಧ ಬಂಡೆದ್ದ ಅಬ್ಬಕ್ಕ ತನ್ನ ಸ್ಥಳೀಯ ಸೇನೆಯ ಬಲದಿಂದ ಅವರನ್ನು ಹಿಮ್ಮೆಟಿಸಿದ್ದಳು. ಕೆಲ ಸಮಯದ ಬಳಿಕ ಯಾವುದೇ ಪೂರ್ವ ಸೂಚನೆ ನೀಡದೇ ಏಕಾ ಏಕಿಯಾಗಿ ಸುಸಜ್ಜಿತ ಸೈನ್ಯ ಕಟ್ಟಿ ಅಬ್ಬಕ್ಕಳ ವಿರುದ್ದ ಸೇಡು ತೀರಿಸಲೆಂದು ಬಂದಾಗ ಅಬ್ಬಕ್ಕ ಅಳೇಕಲದ ಬೆಲಿಯಗ ಎಂಬ ಕೂಡು ಕುಟುಂಬದ ತರವಾಡು ಮನೆಯಲ್ಲಿ ಅಡಗಿ ಕೂತಳು. ಅಲ್ಲಿನ ಮಹಿಳೆಯರು ಅಬ್ಬಕ್ಕಳನ್ನು ಬ್ಯಾರಿ ಮಹಿಳೆಯರ ವೇಷಭೂಷಣದಲ್ಲಿರಿಸಿ ರಕ್ಷಿಸಿದರು. ಅಲ್ಲಿಯೇ ಅಡಗಿ ಕೂತು ಅಲ್ಲಿಂದಲೇ ಮತ್ತೆ ತನ್ನ ಸೇನೆಯನ್ನು ಕಟ್ಟಿ ಮತ್ತೆ ಯುದ್ಧಕ್ಕೆ ದುಮುಕಿದಳು. ಆ ಯುದ್ಧದಲ್ಲಿ ಅಬ್ಬಕ್ಕ ಮತ್ತೆ ಪೋರ್ಚುಗೀಸರನ್ನು ಮಣ್ಣು ಮುಕ್ಕಿಸಿದಳು. ತನ್ನ ಅಡಗಿಸಿಟ್ಟು ರಕ್ಷಣೆ ನೀಡಿದ ಬ್ಯಾರಿಗಳಿಗೆ ಮಸೀದಿ ನಿರ್ಮಿಸಲು ಅಬ್ಬಕ್ಕ ಉದಾರ ಧನ ಸಹಾಯ ಮಾಡಿದಳು.ಹಾಗೆ ಅಬ್ಬಕ್ಕಳ ಸಹಾಯದಿಂದ ಅಳೇಕಲದಲ್ಲೊಂದು ಮಸೀದಿ ನಿರ್ಮಿಸಲಾಯಿತು ಎನ್ನುವುದು ಇತಿಹಾಸ. ಇದಾಗಿದೆ ಉಳ್ಳಾಲದ ಎರಡನೇ ಮಸೀದಿ.

ಇನ್ನೊಂದು ಅಭಿಪ್ರಾಯದ ಪ್ರಕಾರ ಅಳೇಕಲದಲ್ಲಿ ಅಬ್ಬಕ್ಕಳ ಕಾಲಕ್ಕಿಂತಲೂ ಹಿಂದೆಯೇ ಮಸೀದಿಯಿತ್ತು. ಅಬ್ಬಕ್ಕಳ ಧನಸಹಾಯದಿಂದ ಆ ಮಸೀದಿಯನ್ನು ಹಿಂದಿಗಿಂತ ದೊಡ್ಡದಾಗಿ ಪುನರ್ನಿರ್ಮಾಣ ಮಾಡಲಾಯಿತು.

ಇದೇ ಅಳೇಕಲ  ಪರಿಸರದಲ್ಲಿ ಸುಮಾರು ಆರುನೂರು ವರ್ಷಗಳ ಹಿಂದೆ ಬಾಳಿ ಬದುಕಿದ ಸೂಫಿ ಸಂತ ಅಚ್ಚೀ ಸಾಹಿಬ್ ವಲಿಯುಲ್ಲಾಹ್.ಅವರು ಅದಾಗಲೇ ಚಿಕ್ಕ ಮಟ್ಟದಲ್ಲಿದ್ದ ಅಳೇಕಲ ಮಸೀದಿಯಲ್ಲಿ ಧ್ಯಾನನಿರತರಾಗಿರುತ್ತಿದ್ದರು ಎನ್ನುವುದು ತಲೆ ತಲಾಂತರಗಳಿಂದ ಬಾಯಿಂದ ಬಾಯಿಗೆ ಹರಡುತ್ತಾ ಬಂದ ಜನಪದರ ಮೌಖಿಕ ಇತಿಹಾಸ.ಅವರು ಜನರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಸೂಚಿಸುತ್ತಾ  ಬಾಳಿ ಬದುಕಿದ್ದರು. ಸೂಫಿ ಸಂತ ಅಚ್ಚೀ ಸಾಹಿಬ್ ವಲಿಯುಲ್ಲಾಹ್ ಅವರು ಅವಿವಾಹಿತರಾಗಿದ್ದರು, ಅವರ ತನ್ನ ಬದುಕನ್ನು ಸಂಪೂರ್ಣವಾಗಿ ಇಲಾಹನಿಗೆ ಸಮರ್ಪಿಸಿ, ಜನರ ದುಃಖ ದುಮ್ಮಾನಗಳಿಗೆ ಸಾಂತ್ವನ ನೀಡುವುದರಲ್ಲೇ ಬದುಕಿನ ಪಾರಮಾರ್ಥಿಕ ಸುಖ ಪಡೆಯುತ್ತಿದ್ದರು ಎನ್ನುವುದು ಜನಪದರ ಅಭಿಮತ.ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ, ಆದುದರಿಂದ ಸದಾ ತನ್ನ ಜೋಳಿಗೆಯಲ್ಲಿ ಅಚ್ಚಿ ಚಕ್ಕರೆ ( ಅಚ್ಚು ಬೆಲ್ಲ) ಇಟ್ಕೊಂಡು ಮಕ್ಕಳಿಗೆ ಹಂಚುತ್ತಿದ್ದರು.ಖಾಯಿಲೆ ಕಸಾಲೆಯೆಂದು ಅವರ ಬಳಿಗೆ ಹೋದವರಿಗೆಲ್ಲಾ ಅಚ್ಚಿ ಚಕ್ಕರೆ ನೀಡುತ್ತಿದ್ದರು.ಆದುದರಿಂದ ಅವರಿಗೆ ಅಚ್ಚಿ ಬೋಬ ಎಂದು ಹೆಸರಾಯಿತು. ಅವರು ಕಾಲವಾಗಿ ಕೆಲ ತಲೆಮಾರುಗಳ  ಬಳಿಕ ಅವರ ಅಸಲೀ ಹೆಸರು ಕಾಲನ ಮರೆ ಸೇರಿ ಜನಪ್ರೀತಿಯ ಹೆಸರಾದ ಅಚ್ಚೀ ಬೋಬ ಮಾತ್ರ ಉಳಿದು ಮುಂದೆ ಅದೇ ಅಚ್ಚೀ ಸಾಹಿಬ್ ವಲಿಯುಲ್ಲಾಹ್ ಆಯಿತು ಎಂದೂ ಹಿರಿಯರಿಂದ ಕೇಳಿ ಬಲ್ಲೆ.ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಾಳಿ ಬದುಕಿದ್ದ ಈ ಸೂಫಿ ಸಂತ ಹಝ್ರತ್ ಸಯ್ಯದ್ ಮದನಿಯವರಿಗಿಂತ ಸುಮಾರು ನೂರು ವರ್ಷ ಹಿಂದಿನವರಾದುದರಿಂದ ಅವರನ್ನು ಉಳ್ಳಾಲದ ಮಣ್ಣಲ್ಲಿ ಪ್ರಸಿದ್ಧಿಗೆ ಬಂದ ಮೊದಲ ಸೂಫಿ ಸಂತ ಎನ್ನಲಾಗುತ್ತದೆ.

ಅಳೇಕಲ ಎಂಬ ಪುಟ್ಟ ಊರಿಗೆ ಬ್ಯಾರಿ ಭಾಷೆಯಲ್ಲಿ ಆಲಲ ಎನ್ನಲಾಗುತ್ತದೆ. ಖಾಝಿ ತಲಪಾಡಿ ಬಾಪುಕುಂಞಿ ಮುಸ್ಲಿಯಾರ್ ಬರೆದ ಸಯ್ಯದ್ ಮದನಿ ಮಾಲೆಯಲ್ಲೂ ಆಲಲದ ಪ್ರಸ್ತಾಪ ಬರುತ್ತದೆ.ಆಲಲ ಎಂಬ ಊರಿನ ಇನ್ನೊಂದು ವಿಶೇಷವೇನೆಂದರೆ ಕರ್ನಾಟಕದಲ್ಲಿ ಅತೀ ಹೆಚ್ಚು ಸಯ್ಯದರು ( ಪ್ರವಾದಿ (ಸ)ರ ಕುಟುಂಬ ಪರಂಪರೆಯವರು ಇರುವ ಊರು.
ಮದೀನಾದಿಂದ ಬಂದ ಸೂಫಿ ಸಂತ ಹಝ್ರತ್ ಸಯ್ಯದ್ ಮದನಿಯವರಿಗೆ ಹೆಣ್ಣು ಕೊಟ್ಟ ಊರು ಕೂಡಾ ಇದೇ ಆಲಲ. ಸಯ್ಯದ್ ಮದನಿಯವರಿಗೆ ನಿಕಾಹ್ ಮಾಡಿ ಕೊಟ್ಟದ್ದು ಇದೇ ಆಲಲದಲ್ಲಿ. ಅವರ ನಿಕಾಹ್ ಕಾರ್ಯ ನೆರವೇರಿಸಿಕೊಟ್ಟ ಪುತ್ತು ಕೋಯ ತಂಙಳ್‌ರ ಸಮಾಧಿಯಿರುವುದೂ ಇದೇ ಆಲಲದಲ್ಲಿ. ಸಯ್ಯದ್ ಮದನಿಯವರು ಮದುವೆಯ ನಂತರ ಇದೇ ಆಲಲದ ಪೊಲ್ಕರೆ ಮನೆಯಲ್ಲಿ ವಾಸಿಸುತ್ತಿದ್ದರು. ಇಂದಿಗೂ ಉಳ್ಳಾಲ ಉರೂಸಿನ ಮೊದಲ ತಬರ್ರುಕ್ ಆಲಲದ ಪೊಲ್ಕರೆ ತರವಾಡು ಮನೆಗೆ ಮೊಟ್ಟ ಮೊದಲು ನೀಡಲಾಗುತ್ತದೆ.‌ಸಯ್ಯದ್ ಮದನಿಯವರ ಉರೂಸಿನ ಸಂದಲ್ ಆಲಲಕ್ಕೆ ಬಂದು ಮತ್ತೆ ಇಲ್ಲಿಂದ ಹೊರಟು ಉಳ್ಳಾಲ ಕೇಂದ್ರ ಮಸೀದಿ ಪರಿಸರಕ್ಕೆ ಹೊರಟು ಹೋಗುತ್ತದೆ.
ಸಯ್ಯದ್ ಮದನಿಯವರು ಮನೆಯಲ್ಲಿದ್ದಂತಹ ಸಂದರ್ಭದಲ್ಲೆಲ್ಲಾ ಆಲಲದ ಮಸೀದಿಗೆ ಆರಾಧನೆಗೆಂದು ಬರುತ್ತಿದ್ದರು. ಅವರು ತನ್ನ ಅದ್ಭುತ ಸಿದ್ದಿಯೊಂದನ್ನು ತೋರಿಸಿದ ಐತಿಹಾಸಿಕ ಕೊಳವೂ ಇದೇ ಆಲಲದ ಮಸೀದಿ ಪರಿಸರದಲ್ಲಿದೆ.
ಹೀಗೆ ಹತ್ತು ಹಲವು ಕಾರಣಗಳಿಗಾಗಿ ಆಲಲಕ್ಕೆ ಚರಿತ್ರೆಯಲ್ಲಿ ಒಂದು ವಿಶಿಷ್ಟ ಸ್ಥಾನವಿದೆ.ಉಳ್ಳಾಲದ ಮುಸ್ಲಿಮರಿಗೆ ಚರಿತ್ರೆಯಲ್ಲಿ ಮೊಟ್ಟ ಮೊದಲು ಒಂದು ವಿಶಿಷ್ಠವಾದ ಸ್ಥಾನವನ್ನು ತಂದು ಕೊಟ್ಟವರು ಅಚ್ಚೀ ಸಾಹಿಬ್ ವಲಿಯುಲ್ಲಾಹ್.

-ಇಸ್ಮತ್ ಪಜೀರ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...