ಅಳೇಕಲ ಮಸೀದಿ ಸನಿಹ ಕೊಳವೊಂದಿದೆ. ಸುಮಾರು ಆರುನೂರು ವರ್ಷಗಳ ಹಿಂದೆಯೇ ಅಂದರೆ ಉಳ್ಳಾಲದ ಮೊದಲ ಸೂಫಿ ಸಂತರಾದ ವಲಿಯುಲ್ಲಾಹಿ ಅಚ್ಚಿಸಾಹಿಬ್ ಖ.ಸಿ ರವರ ಕಾಲದಲ್ಲೇ ಕೊಳವಿತ್ತು ಎಂದೂ ಅಲ್ಲ ಅವರ ಕಾಲದ ನಂತರ ಕೊಳ ನಿರ್ಮಾಣವಾದದ್ದು ಎಂದು ಎರಡಭಿಪ್ರಾಯವಿದೆ. ಏನೇ ಆದರೂ ಸಯ್ಯಿದ್ ಮದನಿ ಖ.ಸಿ ರವರ ಕಾಲದಲ್ಲಿ ಅಳೇಕಲದ ಕೊಳ ಪ್ರಸಿದ್ಧಿ ಪಡೆಯಿತು.
ಒಂದು ದಿನ ಸಯ್ಯಿದ್ ಮದನಿ ತಂಗಳ್ ಖ.ಸಿ ತನ್ನ ಪತ್ನಿಯ ಊರಾದ ಈ ಅಳೇಕಲದ ಮಸೀದಿ ಸಮೀಪದ ಇದೇ ಕೊಳದಲ್ಲಿ ನಮಾಝ್ ಗಾಗಿ ವುಲೂ ನಿರ್ವಹಿಸುತ್ತಿದ್ದರು.
ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಒಂದೇ ಸಮನೆ ತನ್ನ ಎರಡು ಕೈಗಳಿಂದ ನೀರನ್ನೆತ್ತಿ ಮೇಲಕ್ಕೆ ಚಿಮ್ಮುತ್ತಲಿದ್ದರು. ಸನಿಹವಿದ್ದವರು ಮೂಕ ಪ್ರೇಕ್ಷಕರಾಗಿ ಇದನ್ನೇ ನೋಡುತ್ತಿದ್ದರು. ನೀರು ಚಿಮ್ಮಿಸುವುದನ್ನು ನಿಲ್ಲಿಸಿದಾಗ ಸನಿಹವಿದ್ದವರು ಆಶ್ಚರ್ಯದಿಂದ ಕೇಳಿದರು. ಮದನಿ ತಂಗಳರೇ. ತಾವು ಯಾಕೆ ವುಲೂವಿನ ಮಧ್ಯೆ ನೀರನ್ನು ಮೇಲಕ್ಕೆ ಚಿಮ್ಮಿಸಿದಿರಿ. ಮದನಿ ತಂಗಳ್ ಹೇಳಿದರು.ನಾನು ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಪವಿತ್ರ ಮಕ್ಕಾದ ಹರಂ ಶರೀಫ್ ನಲ್ಲಿ ಬೆಂಕಿ ಅನಾಹುತ ಸಂಭವಿಸುವುದನ್ನು ಕಂಡೆನು. ಅಲ್ಲಾಹನ ಆಜ್ಞೆಯಂತೆ ಆ ಬೆಂಕಿಯನ್ನು ನಂದಿಸಲು ನೀರನ್ನು ಚಿಮ್ಮಿಸಿದೆ. ಅಲ್ಲಾಹನ ಅನುಗ್ರಹದಿಂದ ಬೆಂಕಿ ನಂದಿತು ಎಂದರು. ಸಯ್ಯಿದ್ ಮದನಿ ತಂಗಳ್ ರವರ ಈ ಅದ್ಬುತದಿಂದ ಜನರು ಭಾರೀ ಅನಾಹುತದಿಂದ ರಕ್ಷೆ ಪಡೆದರು. ಆ ವರ್ಷ ಪವಿತ್ರ ಹಜ್ ಗೆ ಹೋದ ಸ್ಥಳೀಯ ಕೆಲ ಹಜ್ಜಾಜ್ ಗಳು ಹಜ್ ಕರ್ಮ ನಿರ್ವಹಿಸಿ ಮರಳಿ ಬಂದಾಗ ಈ ಘಟನೆಯ ಬಗ್ಗೆ ಅವರೊಂದಿಗೆ ಕೇಳಲಾಯಿತು.ಅವರು ಅಲ್ಲಿಯ ಘಟನೆಯನ್ನು ವಿವರಿಸಿದ್ದು ಹೀಗೆ. ಮಕ್ಕಾದಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿತು. ನಾವು ಸಯ್ಯಿದ್ ಮದನಿ ತಂಗಳ್ ರವರನ್ನು ತವಸ್ಸುಲ್ ಮಾಡಿ, ಅವರನ್ನು ನೆನೆದು ಅಲ್ಲಾಹನಲ್ಲಿ ಪ್ರಾರ್ಥಿಸಿದೆವು. ಏನದ್ಭುತ, ಮೇಲಿನಿಂದ ಎಲ್ಲಿಂದಲೋ ನೀರು ಎಸೆಯಲ್ಪಟ್ಟು ಬೆಂಕಿ ನಂದಿತು. ಭಾರೀ ಅನಾಹುತ ಸಂಭವಿಸುವುದು ತಪ್ಪಿತು ಎಂದರು.
ಈ ಘಟನೆಯ ಬಳಿಕ ಅಳೇಕಲದ ಕೊಳ ಮುನ್ನೆಲೆಗೆ ಬಂತು ಮತ್ತು ಪ್ರಸಿದ್ಧಿಯಾಯಿತು. ಈ ಕೊಳದ ಮಹತ್ವ ತಿಳಿದ ಅನೇಕರು ಈಗಲೂ ಈ ಪ್ರಸಿದ್ಧ ಕೊಳ ವೀಕ್ಷಣೆಗೆಂದು ಅಳೇಕಲಕ್ಕೆ ಬರುತ್ತಾರೆ.
Comments