📖 ಮದ್ರಸ ಮತ್ತೆ ಶುಭಾರಂಭ 📖 ಮಕ್ಕಳು ಪಾರತ್ರಿಕ ಲೋಕದ ಸಂಪತ್ತು ✍ *ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ* *ಸಹಕಾರ : ವಿ ಎ ಮುಹಮ್ಮದ್ ಸಖಾಫಿ ವಳವೂರು* ಮಾನವ ಸಮೂಹದ ಅತ್ಯಂತ ಅಮೂಲ್ಯವಾದ ಕಾಲ ಬಾಲ್ಯವಾಗಿದೆ. ಅತ್ಯಂತ ವರ್ಣನಾತೀತ ಸಮಯವಾಗಿದೆ ಅದು. ಶರೀರದ ಸುರಕ್ಷೆ, ಅಪಾಯಗಳ ಬಗ್ಗೆ ಚಿಂತಿಸದೆ ಹಾಯಾಗಿ ವಿಹರಿಸುವ ಕಾಲವದು. ತೊದಲು ಮಾತು, ನಗು ಹಾಗು ತುಂಟಾಟಗಳ ಮೂಲಕ ಇಡೀ ಕುಟುಂಬ ಹರ್ಷಗೊಳ್ಳುವ ಕಾಲವದು. ಬಾಲ್ಯವನ್ನು ಕಳೆದು ದೊಡ್ಡವನಾದ ಯಾವನೇ ಒಬ್ಬನು ಬಾಲ್ಯದ ಸವಿ ನೆನಪುಗಳ ಕನಸು ಕಾಣುತ್ತಾ ಮಗದೊಮ್ಮೆ ಬಾಲ್ಯ ಕಾಲ ಮರುಕಳಿಸಿದರೆ ಉತ್ತಮವಾಗಿತ್ತು ಎಂದು ಆಶೆಪಡದೇ ಇರಲಾರ. ಬಾಲ್ಯದಲ್ಲಿ ಪ್ರತಿಯೊಂದು ಜೀವಿಯು ಪ್ರೀತಿ, ಮಮತೆ, ವಾತ್ಸಲ್ಯ, ಅನುಕಂಪವನ್ನು ಬಯಸುತ್ತದೆ. ಮನುಷ್ಯನ ಸುದೀರ್ಘವಾದ ಬಾಲ್ಯ ಕಾಲವು ಹೆಚ್ಚು ಮಹತ್ವಪೂರ್ಣವಾದುದಾಗಿದೆ. ಮನುಷ್ಯನ ಸರ್ವತೋಮುಖ ಅಭಿವ್ರದ್ಧಿ, ಏಳಿಗೆ ಹಾಗು ಭವಿಷ್ಯದಲ್ಲಿ ಉದ್ಭವಿಸುವ ಸರ್ವ ಎಡರು ತೊಡರುಗಳಿಂದ ಪಾರಾಗಿ ಯಶಸ್ವೀ ಜೀವನ ಸಾಗಿಸಲು ಇರುವ ತರಬೇತಿಯ ಸಮಯವಾಗಿದೆ. ಬಾಲ್ಯ ಕಾಲದಲ್ಲಿ ಮಗುವಿಗೆ ಲಭಿಸುವ ಅನುಭವ, ಜ್ಞಾನ, ತರಬೇತಿಗಳು ಆ ಮಗುವಿನ ಮುಂದಿನ ಬದುಕಿನ ಪ್ರಯಾಣಕ್ಕೆ ಸುಖಕರವಾಗಿರುತ್ತದೆ. ಅಲ್ಲಾಹನು ನಹ್ಲ್ ಅಧ್ಯಾಯದ 78 ನೇ ಸೂಕ್ತದಲ್ಲಿ ಹೇಳುತ್ತಾನೆ : ""ಅಲ್ಲಾಹನು ನಿಮ್ಮನ್ನು ನಿಮ್ಮ ತಾಯಿಯ ಉದರದಿಂದ ಏನೆಂದೂ ತಿಳಿಯದ ಸ್ಥಿತಿಯಲ್ಲಿ ಹೊರ ಬರುವಂತೆ ಮಾಡಿದನು...