ಸಯ್ಯಿದ್ ಮದನಿ ತಂಙಲ್ ಖ.ಸಿ ರವರ ವಫಾತಿನ ಬಳಿಕ ಪ್ರಿಯ ಪತ್ನಿಯ ಬದುಕು ನಿರ್ವಹಣೆಗೆ ಬೆಳ್ಳಿ ನಾಣ್ಯ
ಸಯ್ಯಿದ್ ಮದನಿ ಖ.ಸಿ ರವರ ವಿವಾಹ ಅಳೇಕಲದ ಉತ್ತಮ ಮನೆತನದ ದೀನೀ ಜ್ಞಾನವಿರುವ ಸ್ತ್ರೀಯೊಂದಿಗೆ ನಡೆದಿತ್ತು. ಮದನಿ ತಂಗಳ್ ರವರ ಆಗಮನಕ್ಕಿಂತ ಮುಂಚೆಯೇ ಅಳೇಕಲ, ಸುತ್ತ ಮುತ್ತ ಇಸ್ಲಾಮಿನ ಜ್ಞಾನ, ಧಾರ್ಮಿಕತೆ ಇದ್ದುದರಿಂದ ಮತ್ತು ಅಧಿಕ ಸಂಖ್ಯೆಯ ಸಾದಾತುಗಳ ವಾಸ ಸ್ಥಳ ಅಳೇಕಲವಾದುದರಿಂದ ಇಲ್ಲಿನ ಸ್ತ್ರೀಯೊಂದಿಗೆ ವಿವಾಹವಾಗಿರಬಹುದು. ಸಯ್ಯಿದ್ ಪುತ್ತುಕೋಯ ತಂಙಲ್ ಇವರ ನಿಕಾಹ್ ನೆರವೇರಿಸಿಕೊಟ್ಟಿದ್ದರೆಂಬುದು ಹೆಚ್ಚಿನ ಜನರ ಅಭಿಮತ. ಸಯ್ಯಿದ್ ಪುತ್ತುಕೋಯ ತಂಗಲ್ ರವರ ಮಖ್ಬರ ಕೂಡಾ ಅಳೇಕಲದಲ್ಲಿ ಕಾಣಬಹುದು. ಮದನಿ ತಂಗಲ್ ರವರ ವಿವಾಹ ನಡೆದ ಪೊಲ್ಕರೆಯಲ್ಲಿರುವ ಮನೆ ಈಗಲೂ ಇದೆ. ಆ ಮನೆಯ ಹಿಸ್ಟರಿಯೇ ಬಲು ಅದ್ಭುತ. ಅದು ಮೊದಲು ಬ್ರಾಹ್ಮಣ ಕುಟುಂಬದ ಮನೆಯಾಗಿತ್ತು. ಆ ಮನೆಯಲ್ಲಿ ಮದನಿ ತಂಗಲ್ ರವರ ಪತ್ನಿ ಮತ್ತು ಪತ್ನಿಯ ಹಿರಿಯ ಸಹೋದರಿ ವಾಸಿಸುತ್ತಿದ್ಥರು. ಒಂದು ದಿನ ಸಯ್ಯಿದ್ ಮದನಿ ತಂಙಲ್ ಖ.ಸಿ ಮನೆಗೆ ಬಂದಾಗ ಪತ್ನಿ ಮತ್ತು ಹಿರಿಯ ಸಹೋದರಿ ಬೇಸರದಲ್ಲಿದ್ದರು. ವಿಷಯ ಏನು ಅಂತ ಕೇಳಿದಾಗ ಪತ್ನಿ ಹೇಳಿದರು. ಮನೆಯ ಯಜಮಾನ ಬಂದು ನಮ್ಮೊಂದಿಗೆ ಮನೆ ಖಾಲಿ ಮಾಡಲು ತಿಳಿಸಿದ್ಜಾನೆ. ಆಗ ಮದನಿ ತಂಙಲ್ ಹೇಳಿದರು. ನೀವು ಬೇಸರಪಡದಿರಿ. ಏನೂ ಆಗಲ್ಲ ಅಂತ ಹೇಳಿದರು. ಅಂದು ರಾತ್ರಿ ಮನೆಯ ಯಜಮಾನನಿಗೆ ಯಾರೋ ಬಂದು ಹೊಡೆಯುತ್ತಿರುವ ಕನಸು. ಸಹಿಸಲಸಾಧ್ಯವಾದ ನೋವು. ಮಾತ್ರವಲ್ಲ ಕನಸಿನಲ್ಲಿ ಬಂದ ವ್ಯಕ್ತಿ ಯಜಮಾನನೊಂದಿಗೆ ಹೇಳಿದನು. ನಿನ್ನ ಮನೆಯಲ್ಲಿ ಈಗ ವಾಸಿಸುತ್ತಿರುವುದು ಅಲ್ಲಾಹನ ಇಷ್ಟದಾಸರಲ್ಲೋರ್ವರಾದ ಮದನಿ ತಂಙಲ್ ರವರು ಮತ್ತು ಅವರ ಕುಟುಂಬವಾಗಿದೆ. ಅವರನ್ನು ಮನೆಯಿಂದ ಒಕ್ಕಲೆಬ್ಬಿಸಿದರೆ ಅಥವಾ ಅದಕ್ಕಾಗಿ ಪ್ರಯತ್ನ ಪಟ್ಟರೆ ನಿನಗೆ ನಾಶ ನಷ್ಟಗಳು ಖಂಡಿತ ಸಂಭವಿಸಬಹುದು. ಆದ್ದರಿಂದ ಆ ಮನೆಯನ್ನು ಅವರಿಗೇನೇ ಬಿಟ್ಟು ಕೊಡಬೇಕು. ಬೆಳಿಗ್ಗೆ ಎಚ್ಚರವಾದಾಗ ರಾತ್ರಿಯ ಹೊಡೆತದ ನೋವು ಮಾಸಿರಲಿಲ್ಲ. ಎದ್ದವನೇ ಸೀದಾ ಮದನಿ ತಂಙಲ್ ಬಳಿ ಹೋಗಿ ಕ್ಷಮೆಯಾಚಿಸಿ ತನ್ನ ಮನೆಯನ್ನು ಮದನಿ ತಂಙಲ್ ರವರಿಗೇನೇ ಬಿಟ್ಟು ಕೊಟ್ಟನು. ವಿಷಯಕ್ಕೆ ಬರೋಣ. ಮದನಿ ತಂಙಲ್ ರವರ ದಾಂಪತ್ಯ ಜೀವನ ಸುಖ ನೆಮ್ಮದಿಯಿಂದ ಕೂಡಿತ್ತು.
ಸಯ್ಯಿದ್ ಮದನಿ ತಂಗಳ್ ಖ.ಸಿ ರವರ ವಫಾತ್ ಸಮೀಪಿಸಿದಾಗ ತನ್ನ ಪ್ರಿಯ ಪತ್ನಿಯನ್ನು ಸಮೀಪಕ್ಕೆ ಕರೆದು ಪತ್ನಿಯೊಂದಿಗಿನ ಸಂಪೂರ್ಣ ಸಂತ್ರಪ್ತಿ, ಸಂತೋಷ ವ್ಯಕ್ತಪಡಿಸುತ್ತಾ ವಸಿಯ್ಯತ್, ಅಂತಿಮೋಪದೇಶವನ್ನು ನೀಡಿದರು. ತನ್ನ ವಫಾತಿನ ನಂತರ ಪತ್ನಿಯ ನಿತ್ಯ ಜೀವನ ನಿರ್ವಹಣೆಯ ದುಃಖ, ಕೊರಗನ್ನು ನಿವಾರಿಸಲು ಸಯ್ಯಿದ್ ಮದನಿ ತಂಙಲ್ ಹೇಳಿದರು. ನೀವು ಆತಂಕ, ನಿರಾಶೆಯಾಗುವ ಅಗತ್ಯವಿಲ್ಲ. ಸಹನಾಶೀಲಳಾಗು.
ಅಲ್ಲಾಹನ ಅನುಗ್ರಹದಿಂದ ನಿಮ್ಮ ದೈನಂದಿನ ಖರ್ಚು ನಿಭಾಯಿಸಲು ಬೇಕಾಗುವಷ್ಟು ಹಣ ನಿಮಗೆ ಸಿಗಲಿದೆ.ನನ್ನ ಮರಣದ ಬಳಿಕ ಪ್ರತೀದಿನ ಬೆಳಿಗ್ಗೆ ನನ್ನ ಖಬರಿನ ಕಾಲುಭಾಗದಲ್ಲಿ ನಿಮಗೆ ದೈನಂದಿನ ಖರ್ಚಿಗೆ ಬೇಕಾಗುವಷ್ಟು ಹಣ ಸಿಗಲಿರುವುದು ಇಂಶಾ ಅಲ್ಲಾಹ್...
ಸಯ್ಯಿದರು ವಫಾತಾದರು. ಮಯ್ಯಿತ್ ಪರಿಪಾಲನೆ ಎಲ್ಲವೂ ಸುಸೂತ್ರವಾಗಿ ನೆರವೇರಿತು. ಮದನಿ ತಂಗಳ್ ರವರ ಅದ್ಭುತ ಕರಾಮತು ಪ್ರತ್ಯಕ್ಷವಾಯಿತು. ಪತ್ನಿಯವರ ಜೀವನ ನಿರ್ವಹಣೆಗೆ ಒಂದು ಬೆಳ್ಳಿ ನಾಣ್ಯ ಖಬರ್ ಬಳಿ ಇತ್ತು. ( 400 ವರ್ಷಗಳ ಹಿಂದಿನ ಚರಿತ್ರೆಯಾಗಿದೆ. ಅಂದಿನ ಒಂದು ಬೆಳ್ಳಿ ನಾಣ್ಯ ಇಂದಿನ ಎಷ್ಟು ರೂಪಾಯಿಗಳಿಗೆ ಸಮಾನವಾಗಬಹುದು ಎಂದು ನೀವೇ ಊಹಿಸಿ ನೋಡಿ ) ಹೀಗೆ ಪ್ರತಿನಿತ್ಯವೂ ಖರ್ಚಿಗೆ ಒಂದು ಬೆಳ್ಳಿ ನಾಣ್ಯ ಸಿಗುತ್ತಿತ್ತು. ಹೀಗಿರಲು ಒಂದು ದಿನ ಊರಿನ ತನ್ನ ಮನೆಯ ಹತ್ತಿರದ ಸ್ತ್ರೀ ಮದನಿ ತಂಙಲ್ ರವರ ಪತ್ನಿಯಲ್ಲಿ ಹೇಳಿದರು.ನಿನಗೆ ದೈನಂದಿನ ಸಿಗುವ ಒಂದು ನಾಣ್ಯ ಪೂರ್ತಿ ಯಾಕೆ ಖರ್ಚು ಮಾಡುತ್ತಿರುವೆ. ಅದರಲ್ಲಿ ಅರ್ಧ ತೆಗೆದಿಡು. ನಿನಗೆ ಮುಂದಕ್ಕೆ ಉಪಯೋಗಕ್ಕೆ ಬರಬಹುದು. ತನ್ನ ಮನೆಯ ಹತ್ತಿರದ ಮಹಿಳೆಯ ಮಾತನ್ನು ಕೇಳಿ ಪತ್ನಿ ಅಂದು ಅರ್ಧದಷ್ಟನ್ನು ಖರ್ಚು ಮಾಡಿ ಅರ್ಧದಷ್ಟನ್ನು ತೆಗೆದಿರಿಸಿದರು. ಮರುದಿನದಿಂದ ಅರ್ಧ ಬೆಳ್ಳಿ ನಾಣ್ಯ ಮಾತ್ರವೇ ಖಬರ್ ಬಳಿ ಲಭಿಸಿತು. ನೆರೆಮನೆ ಸ್ತ್ರೀಯ ಮಾತು ಕೇಳಿ ಮುಂದಿನ ದಿನಗಳಲ್ಲಿ ಖಬರ್ ಬಳಿ ಅರ್ಧ ಹಣವೇ ಪತ್ನಿಗೆ ಸಿಗುವಂತಾಯಿತು. ಈ ಒಂದು ಕರಾಮತು ಇಂದು ನಾವೂ ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ. ಸಯ್ಯಿದ್ ಮದನಿ ತಂಗಳ್ ಖ.ಸಿ ರವರ ದರ್ಬಾರಿನ ಮೂಲಕವೇ ಎಷ್ಟೋ ಮಸೀದಿ ಮದ್ರಸ, ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ. ಇವೆಲ್ಲದರ ಖರ್ಚು ವೆಚ್ಚಗಳಿಗೆ ಬೇಕಾಗುವಷ್ಟು ಸಾವಿರಾರು ರೂಪಾಯಿಗಳು ಮದನಿ ತಂಗಳ್ ಖ.ಸಿ ರವರ ಕರಾಮತ್ ಮೂಲಕವೇ ಹರಿದು ಬರುತಿದೆ.
Comments