ಬದ್ರ್ ಹುತಾತ್ಮರ ಸ್ಮರಣೆಯ ಹಾದಿಯಲ್ಲಿ
✍🏼 *ಜುನೈದ್ ಸಖಾಫಿ ಜೀರ್ಮುಕ್ಕಿ*
ಇಸ್ಲಾಮಿಕ್ ಚರಿತ್ರೆಯಲ್ಲಿ ಸವಿಶೇಷ ಪದವಿಯಿರುವ ಮಹಾನ್ ಪುರುಷರುಗಳಾಗಿದ್ದಾರೆ ಬದ್ರಿಯ್ಯೀನ್ ಗಳು. ತಮ್ಮ ಹೃದಯದಲ್ಲಿ ಕಾಪಿಟ್ಟಿದ್ದ ವಿಶ್ವಾಸದೀಪ್ತಿಯನ್ನು ನಂದಿಸಲು ತಲುಪಿದ ಶತ್ರುವ್ಯೂಹವನ್ನು ದೃಢ ಮನಸ್ಸು ಹಾಗೂ ಶರೀರದಿಂದ ಎದುರಿಸಿದವರವರು. ಕೇವಲ ಯುದ್ಧದಲ್ಲಿ ಗೆಲುವು ತಂದುಕೊಟ್ಟದ್ದು ಮಾತ್ರವಾಗಿರಲಿಲ್ಲ ಅವರು ಜಗತ್ತಿಗೆ ನೀಡಿದ ಕೊಡುಗೆ. ಬದಲಾಗಿ ಅಧರ್ಮದ ಸರ್ವವಿಧ ಯತ್ನಗಳನ್ನೂ ವಿರೋಧಿಸಿ ಸೋಲಿಸುವುದಕ್ಕಿರುವ ಆತ್ಮಧೈರ್ಯವನ್ನಾಗಿದೆ ಬದ್ರ್ ವಿಶ್ವಾಸಿಗಳಿಗೆ ಸಮ್ಮಾನಿಸಿರುವುದು. ಸಮಸ್ಯೆ-ಸಂಕಷ್ಟ ಗಳ ಮುಂದೆ ಬಿದ್ದು ಒಡೆದುಹೋಗಬೇಕಾದದ್ದಲ್ಲ ವಿಶ್ವಾಸವೆಂಬುದು. ಅಧರ್ಮವು ಬಿರುಗಾಳಿಯಂತೆ ಬೀಸಿ ಬಂದರೂ ಸತ್ಯಮತದ ಬೆಳಕನ್ನು ನಂದಿಹೋಗದಂತೆ ಕಾಪಾಡಬೇಕು. ಉದಾತ್ತವಾದ ಅಂತಹ ಮೌಲ್ಯಗಳನ್ನು ಎತ್ತಿಹಿಡಿದು ರಣರಂಗದಲ್ಲಿ ಹೋರಾಟಮಾಡಿದ ಬದ್ರಿಯ್ಯೀನ್ ಗಳು ಚರಿತ್ರೆಯ ಹೊಳೆಯುವ ತಾರೆಗಳಾಗಿದ್ದಾರೆ. ಅವರ ಆ ದೀಪ್ತಸ್ಮರಣೆಗಳನ್ನು ಜೀವಂತವಿರಿಸುವುದು ವಿಶ್ವಾಸಿಗಳ ಬದುಕಿನ ಭಾಗವೂ ಕೂಡಾ ಆಗಿದೆ.
ಬದ್ರಿಯ್ಯೀನ್ ಗಳು ಸ್ವರ್ಗೀಯಪ್ರಾಪ್ತಿ ಲಭಿಸಿದವರೆಂದು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹಲವು ಬಾರಿ ಘೋಷಿಸಿದ್ದಾರೆ. ಅನಸ್ (ರ) ಹೇಳುತ್ತಾರೆ: ಬದ್ರ್ ಹುತಾತ್ಮರಲ್ಲೊಬ್ಬರಾದ ಹಾರಿಸತ್(ರ) ರವರ ತಾಯಿಯು ಪುಣ್ಯನಬಿಯವರನ್ನು ಸಮೀಪಿಸಿ ಹೇಳುತ್ತಾರೆ. 'ಪುಣ್ಯ ರಸೂಲರೇ, ಹಾರಿಸತ್ ನಿಗೆ ನಾನು ನೀಡುತ್ತಿದ್ದ ಪ್ರೀತಿ,ವಾತ್ಸಲ್ಯ,ಪರಿಪಾಲನೆ ತಮಗೆ ಗೊತ್ತಿದೆಯಲ್ಲವೇ? ಅವನು ಸ್ವರ್ಗದಲ್ಲಾದರೆ ನಾನು ಸಹಿಸುವೆ.ಇಲ್ಲದಿದ್ದಲ್ಲಿ ನನ್ನ ಬಾಕಿಯಿರುವ ಬದುಕನ್ನು ಅಳುತ್ತಾ ಮುಗಿಸುವೆ'. ಇದು ಕೇಳಿದ ನಬಿ(ಸ) ಪ್ರತಿಕ್ರಿಯಿಸಿದರು: 'ಉಮ್ಮಾ, ಸ್ವರ್ಗೀಯಲೋಕದಲ್ಲಿ ಹಲವಾರು ಹೂದೋಟಗಳಿವೆ.ನಿಮ್ಮ ಮಗ ಅವುಗಳ ಪೈಕಿ ಅತ್ಯಂತ ಪವಿತ್ರವಾದ ಜನ್ನಾತುಲ್ ಫಿರ್ದೌಸಿನಲ್ಲಾಗಿದ್ದಾನೆ'.(ಬುಖಾರೀ). ಬದ್ರ್ ಯುದ್ಧದ ವೇಳೆಯಲ್ಲಿ ಹೊರಗೆ ಶತ್ರುಚಲನೆಗಳನ್ನು ಗಮನಿಸುವ ಡ್ಯೂಟಿಯಾಗಿತ್ತು ಹಾರಿಸತ್ ನಿಗೆ. ಆ ಸಂದರ್ಭ ನೀರಡಿಕೆಗಾಗಿ ಹೌಳಿನ ಬಳಿ ತಲುಪಿದಾಗ ಹೃದಯಕ್ಕೆ ಬಾಣ ತಾಕಿ ಹಾರಿಸತ್ ಹುತಾತ್ಮರಾಗಿದ್ದರು. ಹಾಗಿದ್ದೂ ಕೂಡಾ ಅತ್ಯುನ್ನತ ಪದವಿ ಅಲಂಕರಿಸಲು ಅವರಿಗೆ ಸೌಭಾಗ್ಯ ಲಭಿಸಿದ್ದರೆ ರಣರಂಗದಲ್ಲಿ ಸೆಟೆದು ನಿಂತು ಹೋರಾಡಿ ಜೀವತ್ಯಾಗ ಮಾಡಿದವರ ಪದವಿಗಳು ಎಷ್ಟು ಮಹೋನ್ನತವಾಗಿರಬಹುದು?!. ಬದರಿನಲ್ಲೋ,ಹುದೈಬಿಯದಲ್ಲೋ ಭಾಗವಹಿಸಿದ ಒಬ್ಬರೂ ಕೂಡಾ ನರಕಾಗ್ನಿಗೆ ಆಹುತಿಯಾಗಲಿಕ್ಕಿಲ್ಲವೆಂಬ ಹದೀಸ್ ಕೂಡಾ ಇದರ ಜೊತೆಗೆ ಸೇರಿಸಿ ವಾಚಿಸಬಹುದು.
ಬದರ್ ಸ್ಮರಣೆಯನ್ನು ಸ್ವಹಾಬಿಗಳು ಪವಿತ್ರಕಾರ್ಯವಾಗಿ ಮನಗಂಡಿದ್ದರು. ಒಂದುದಿನ ಅವರೆಲ್ಲರೂ ಬದ್ರ್ ಹುತಾತ್ಮರುಗಳನ್ನು ಸ್ಮರಿಸಿ ಕವಿತೆಗಳನ್ನು ಆಲಾಪಿಸುತ್ತಿದ್ದರು. ಆ ಹೊತ್ತು ಅಲ್ಲಿಗೆ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಆಗಮನವಾಯಿತು. ತಕ್ಷಣ ಅವರೆಲ್ಲರೂ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕುರಿತಾದ ಪ್ರಕೀರ್ತನೆಗಳನ್ನು ಆಲಾಪಿಸತೊಡಗಿದರು. ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: 'ನೀವು ಈ ತನಕ ಮಹತ್ವ ಹೇಳುತ್ತಿದ್ದವರ ಬಗ್ಗೆಯೇ ಮುಂದುವರಿಸಿ ಹೇಳಿ'.(ಬುಖಾರಿ,ಮುಸ್ಲಿಂ)
ಪ್ರವಾದಿವರ್ಯರ ಕಾಲದಲ್ಲೂ ನಂತರವೂ ಮದೀನಾದಲ್ಲಿ ಜರಗುತ್ತಿದ್ದ ಎಲ್ಲಾ ಸಂಗಮಗಳಲ್ಲೂ ಬದ್ರ್ ಶುಹದಾಗಳಿಗೆ ಪ್ರತ್ಯೇಕ ಪರಿಗಣನೆಗಳು ಲಭಿಸುತ್ತಿತ್ತು. ವಿಶ್ವಾಸಿಗಳಿಗಾಗಿ ವಿತರಣೆ ಮಾಡಲು ಲಭಿಸುವ ಸಂಪತ್ತಿನಿಂದ ಒಂದಂಶವನ್ನು ಅವರಿಗಾಗಿ ಮೀಸಲಿಡುವುದು ಉಮರ್(ರ) ಹವ್ಯಾಸವಾಗಿತ್ತು. ಒಮ್ಮೆ ಅಬೂಬಕರ್(ರ) ಹಾಗೂ ಉಮರ್(ರ) ಜೊತೆಗೂಡಿ ಅನ್ಸಾರ್ ಗಳನ್ನು ಸಂದರ್ಶಿಸಲು ತೆರಳುತ್ತಿದ್ದರು. ದಾರಿಮಧ್ಯೆ ಅವರು ಇಬ್ಬರು ಸ್ವಹಾಬಿಗಳನ್ನು ಭೇಟಿಯಾದರು. 'ಬದ್ರಿನಲ್ಲಿ ಪಾಲ್ಗೊಂಡ ಇಬ್ಬರು ಮಹಾತ್ಮರನ್ನು ನಾವು ಕಂಡೆವು' ಎಂದಾಗಿತ್ತು ಈ ಅನುಭವವನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಉಮರ್(ರ) ವಿವರಿಸಿದ್ದು. ಈ ರೀತಿ ಸ್ವಹಾಬಿಗಳೂ,ತಾಬಿಈನ್ ಗಳೂ ಬದ್ರಿಯ್ಯೀನ್ ಗಳನ್ನು ಪ್ರತ್ಯೇಕ ಗೌರವಾದರಗಳೊಂದಿಗಾಗಿತ್ತು ಕಾಣುತ್ತಿದ್ದದ್ದು.
ಒಮ್ಮೆ ಹಾತ್ವಿಬ್(ರ) ರವರ ದಾಸ ಪ್ರವಾದಿಸನ್ನಿಧಿಗೆ ಬಂದು ತನ್ನ ಯಜಮಾನನ ಬಗ್ಗೆ ಕೆಲವೊಂದು ದೂರುಗಳನ್ನು ಸಲ್ಲಿಸಿದರು. 'ನಿಶ್ಚಯ,ಹಾತ್ವಿಬ್ ನರಕವಾಸಿ' ಎಂಬ ಪದಪ್ರಯೋಗವನ್ನೂ ಆ ಪೈಕಿ ದಾಸ ಮಾಡಿದ್ದ. 'ಬದ್ರಿನಲ್ಲೂ,ಉಹ್ದಿನಲ್ಲೂ ಪಾಲ್ಗೊಂಡವರು ನರಕ ಪ್ರವೇಶಿಸುವುದೇ? ಇಲ್ಲ, ಒಮ್ಮೆಯೂ ಹಾತ್ವಿಬ್ ನರಕ ಪ್ರವೇಶಿಸಲಾರರು' ಎಂದಾಗಿತ್ತು ಅದಕ್ಕೆ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ನೀಡಿದ ಪ್ರತಿಕ್ರಿಯೆ.
ಮಹಾತ್ಮರಾದ ಇಬ್ನು ಹಜರ್(ರ) ಹೇಳುತ್ತಾರೆ. "ನನ್ನ ತಂದೆಯ ಸಹೋದರನ ಮಗನನ್ನು ರೋಮನ್ನರು ಬಂಧಿಸಿದರು. ಬಿಡುಗಡೆಗಾಗಿ ಅವರು ದೊಡ್ಡ ಮೊತ್ತವೊಂದರ ಬೇಡಿಕೆಯಿಟ್ಟರು. ನಾವು ಬಡತನದ ಬೇಗೆಯಲ್ಲಿರುವವರು. ಅವರು ಬೇಡಿಕೆಯಿಟ್ಟ ಮೊತ್ತವನ್ನು ಭರಿಸಲು ಸಾಧ್ಯವಾಗದೆ ಮಾನಸಿಕವಾಗಿ ಕುಗ್ಗಿ ಹೋದಾಗ ಒಂದು ಐಡಿಯಾ ಮನಸ್ಸಿಗೆ ಹೊಳೆಯಿತು. ತಕ್ಷಣ ಬದ್ರಿಯ್ಯೀನ್ ಗಳ ನಾಮವಿರುವ ಪತ್ರವನ್ನು ಅವರಿಗೆ ಕಳುಹಿಸಿಕೊಟ್ಟು ಅದು ದಿನನಿತ್ಯ ಪಠಿಸಿ ಪ್ರಾರ್ಥಿಸುವಂತೆ ತಿಳಿಸಲಾಯಿತು. ಕೆಲವೇ ಕೆಲವು ದಿನಗಳಾಗುವಾಗ ಅವರು ಬಂಧನದಿಂದ ಬಿಡುಗಡೆಗೊಂಡು ಮನೆಗೆ ತಲುಪಿದರು. ಆಶ್ಚರ್ಯದೊಂದಿಗೆ ಅವರೊಂದಿಗೆ ವಿಷಯ ಕೇಳಿದಾಗ, 'ಪತ್ರದಲ್ಲಿದ್ದ ನಿರ್ದೇಶನದಂತೆ ಬದ್ರಿಯ್ಯೀನ್ ಗಳನ್ನು ತವಸ್ಸುಲ್ ಮಾಡಿ ಪ್ರಾರ್ಥಿಸತೊಡಗಿದ ಬಳಿಕವಾಗಿತ್ತು ತನಗೆ ಬಿಡುಗಡೆಯ ಬಾಗಿಲುಗಳು ತೆರೆಯಲ್ಪಟ್ಟದ್ದು. ನನ್ನನ್ನು ಗುಲಾಮನಾಗಿ ಖರೀದಿಸುವವರಿಗೆಲ್ಲರಿಗೂ ಏನಾದರೊಂದು ದುರಂತಗಳು ಅವರ ಬದುಕಿನಲ್ಲಿ ಎರಗತೊಡಗಿದವು. ನಾನಿರುವುದರಿಂದಾಗಿತ್ತು ಅದು ಬಂದೆರಗುತ್ತಿರುವುದು ಎಂದಾಗಿತ್ತು ಅವರ ಭಾವನೆ. ಕೊನೆಗೆ ಮರಳಿಬರುವುದಕ್ಕೆ ಅನಿವಾರ್ಯವಾದ ನೂರು ದೀನಾರ್ ಗಳನ್ನು ನೀಡಿ ನನ್ನನ್ನು ಬಂಧನದಿಂದ ಅವರು ಮುಕ್ತಗೊಳಿಸಿದರು' ಎಂದು ಆ ವ್ಯಕ್ತಿ ತಿಳಿಸಿದರು.
ಈ ರೀತಿ ಮಹಾತ್ಮರಾದ ಬದ್ರಿಯ್ಯೀನ್ ಗಳೊಂದಿಗೆ ಸಹಾಯಯಾಚನೆ ನಡೆಸಿ ಬೇಡಿಕೆಗಳನ್ನು ಈಡೇರಿಸಿದ ಹಲವಾರು ಚಾರಿತ್ರಿಕ ಘಟನೆಗಳನ್ನು ವಿದ್ವಾಂಸರು ವಿವರಿಸಿದ್ದನ್ನು ಕಾಣಬಹುದು. ಪ್ರತ್ಯೇಕವಾಗಿ ಅಸ್ಮಾಉಲ್ ಬದ್ರ್ ಪಾರಾಯಣ ನಡೆಸಿ ಪ್ರಾರ್ಥಿಸಿದರೆ ಬೇಡಿಕೆ ಈಡೇರುವುದು ಸುನಿಶ್ಚಿತವೆಂಬ ಇಮಾಂ ದಾರಾನೀ(ರ) ರವರ ಅಭಿಪ್ರಾಯ ಪ್ರಸಕ್ತವಾಗಿದೆ. ಹಲವಾರು ಸಾತ್ವಿಕರಿಗೆ ವಿಲಾಯತ್ತಿನ ಪದವಿ ಲಭಿಸಲು ನಿಮಿತ್ತವಾದದ್ದು ಕೂಡಾ ಅಸ್ಮಾಉಲ್ ಬದರ್ ಆಗಿತ್ತು. ಆದ್ದರಿಂದಲೇ ಆ ಬದರಿನ ಬತ್ತದ ನೆನಪುಗಳನ್ನು ಯಾವತ್ತೂ ನೆಲೆನಿಲ್ಲಿಸಬೇಕಾದದ್ದು ವಿಶ್ವಾಸಿಗಳ ಕರ್ತವ್ಯವಾಗಿದೆ.
ಮೂಲ: ಸಿರಾಜ್ ದೈನಿಕ(ಮಲಯಾಳಂ)
Comments