ಆಧ್ಯಾತ್ಮ ಘಟನೆಗಳು
*"ನಾನು ಶವಭಕ್ಷಕನೇ?"*
_ಮಹಾತ್ಮರಾದ ಹಝ್ರತ್ ಜುನೈದ್ (ರ)ರವರು ಒಮ್ಮೆ ಪೇಟೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಆರೋಗ್ಯವಂತ ಫಕೀರರೊಬ್ಬರು ಜನರಲ್ಲಿ ಯಾಚಿಸುತ್ತಿರುವುದನ್ನು ಕಂಡರು. ನೋಡಲು ಎಷ್ಟು ಗಟ್ಟಿ ಮುಟ್ಟಾಗಿದ್ದಾರೆ; ಆದರೂ ಜನರ ಮುಂದೆ ಕೈ ಚಾಚುತ್ತಿದ್ದಾರಲ್ಲಾ? ಏನಾದರೂ ಕೆಲಸ ಮಾಡಿ ಸ್ವಾವಲಂಬಿಯಾಗಿ ಜೀವಿಸಬಾರದೇ? ಎಂದು ಮನದಲ್ಲೇ ಯೋಚಿಸುತ್ತಾ ಜುನೈದ್(ರ) ಪೇಟೆಯತ್ತ ಹೆಜ್ಜೆ ಹಾಕಿದರು._
_ಅಂದು ರಾತ್ರಿ ಅವರಿಗೊಂದು ಕನಸು ಬಿತ್ತು. ಕನಸಿನಲ್ಲಿ, ಬಟ್ಟೆಯಿಂದ ಮುಚ್ಚಿದ ದೊಡ್ಡ ಪಾತ್ರೆಯೊಂದನ್ನು ಅವರ ಮುಂದಿಡಲಾಯಿತು. ಸುತ್ತಮುತ್ತಲಿದ್ದ ಜನರು ಅವರೊಂದಿಗೆ *'ಇದನ್ನು ತಿನ್ನಿರಿ'* ಎಂದರು. ಜುನೈದ್ (ರ)ರವರು ಪಾತ್ರೆಗೆ ಹೊದಿಸಿದ್ದ ಬಟ್ಟೆಯನ್ನು ಸರಿಸಿದರು. ಆಗ ಆ ಪಾತ್ರೆಯಲ್ಲಿದ್ದ ವಸ್ತುವನ್ನು ಕಂಡು ಒಂದು ಕ್ಷಣ ಬೆಚ್ಚಿಬಿದ್ದರು. ದಾರಿಯಲ್ಲಿ ಸಾಗುವಾಗ ಕಂಡ ಫಕೀರರ ಶವವನ್ನು ಅದರಲ್ಲಿ ಇಡಲಾಗಿತ್ತು._
_ಜುನೈದ್ (ರ)ರವರು ತಳಮಳಗೊಳ್ಳುತ್ತಾ ಮುಂದೆ ನಿಂತ ಜನರಲ್ಲಿ ಕೇಳಿದರು, *"ಇದನ್ಯಾಕೆ ನನ್ನ ಮುಂದಿಟ್ಟಿರಿ? ನಾನು ಶವಭಕ್ಷಕನೆಂದು ಭಾವಿಸಿದ್ದೀರಾ?"*_
_ಆಗ ಜನರು ಕೇಳಿದರು; *"ಹಗಲು ವೇಳೆಯಲ್ಲಿ ಅವರ ಮಾಂಸವನ್ನು ತಿಂದು ಬಿಟ್ಟಿದ್ದೀರಲ್ಲ.ಈಗ ಯಾಕೆ ತಿನ್ನಬಾರದು?"*_
_ಹಗಲು ವೇಳೆಯಲ್ಲಿ ಯಾರ ಮಾಂಸ ಭಕ್ಷಿಸಿದ್ದೆಂದು ಈಗವರಿಗೆ ಮನವರಿಕೆಯಾಯಿತು. ಆರೋಗ್ಯವಂತರಾಗಿರುವ ಇವರು ಯಾಚಿಸುವುದಕ್ಕಿಂತ ದುಡಿದು ತಿನ್ನಬಾರದೇ? ಎಂದು ಮನದಲ್ಲಿ ಭಾವಿಸಿದ್ದನ್ನು ನೆನಪಿಗೆ ತಂದರು._
_ಕೂಡಲೇ ಅವರು ಭಯದಿಂದ ತತ್ತರಿಸಿ ನಿದ್ದೆಯಿಂದ ಎಚ್ಚೆತ್ತು ಕುಳಿತರು. ಭೀತಿಯಿಂದ ಅವರ ಹಣೆಯಲ್ಲಿ ನೀರು ಜಿನುಗುತ್ತಿತ್ತು. ಜುನೈದ್ (ರ)ರವರು ಎದ್ದು ಅಂಗಸ್ನಾನ ಮಾಡಿ, ಎರಡು ರಕ್ಅತ್ ನಮಾಜ್ ನಿರ್ವಹಿಸಿ, ಪ್ರಾರ್ಥಿಸಿ, ಅಲ್ಲಿಂದ ಆ ಫಕೀರರನ್ನು ಹುಡುಕುತ್ತಾ ಸಾಗಿದರು._
_ಸ್ವಲ್ಪ ಹೊತ್ತು ಹುಡುಕಾಡಿದ ಬಳಿಕ ನದಿಯ ದಡದಲ್ಲಿ ಆ ಫಕೀರರು ಒಂಟಿಯಾಗಿ ಕುಳಿತಿರುವುದು ಕಾಣಿಸಿತು.ಜುನೈದ್ (ರ)ರವರಿಗೆ ಪರಮಾನಂದವಾಯಿತು. ಅವರ ಹತ್ತಿರ ಹೋಗಿ ನಿಂತರು. ಫಕೀರರು ತಲೆಯೆತ್ತಿ ಅವರನ್ನೊಮ್ಮೆ ದಿಟ್ಟಿಸಿ ನೋಡಿ, *"ಜುನೈದ್!* ನನ್ನ ಬಗ್ಗೆ ತಾವು ಮನದಲ್ಲಿ ಭಾವಿಸಿದ್ದ ದುರಾಲೋಚನೆಯ ಬಗ್ಗೆ *ಅಲ್ಲಾಹನಲ್ಲಿ ಕ್ಷಮೆ ಯಾಚಿಸಿದ್ದೀರಾ?”* ಎಂದು ಕೇಳಿದರು. ಜುನೈದ್ (ರ)ರವರು 'ಹೌದು' ಎಂದರು._
_"ಹಾಗಾದರೆ ತಾವಿನ್ನು ಹೋಗಬಹುದು. *ಅಲ್ಲಾಹನು ತನ್ನ ದಾಸರ ತೌಬಾವನ್ನು ಸ್ವೀಕರಿಸುವನಾಗಿದ್ದಾನೆ. ನಾನೂ ತಮಗೆ ಕ್ಷಮಿಸಿದ್ದೇನೆ.* ನೀವು ಸದಾ ನಿಮ್ಮ ಹೃದಯದಲ್ಲಿ ಉದ್ಭವಿಸುವ ಕೆಟ್ಟ ಯೋಚನೆಗಳ ಬಗ್ಗೆ ಜಾಗೃತರಾಗಿರಿ" ಎಂದು ಹೇಳಿ ಮುಗುಳ್ನಗುತ್ತಾ ಅವರನ್ನು ಕಳುಹಿಸಿಕೊಟ್ಟರು._
*📗(ತದ್ಸ್_ಕಿರತುಲ್ ಔಲಿಯಾ)*
*_ಲೇಖಕ:ಎಂ.ಎ ಇಸ್ಮಾಯಿಲ್ ನ'ಈಮಿ,ಮಂಗಳಪೇಟೆ._*
🌼🌼🌼🌼🌼🌼🌼🌼🌼🌼
Comments