Skip to main content

ಸೂಫಿಯ ಸೇವಕನ ಸ್ಥಾನ



🌵 ಸೂಫಿ ಕಥೆಗಳು-೧
    ಸಿ.ಯಂ ಹನೀಫ್ ಬೆಳ್ಳಾರೆ

ಸೂಫಿಯ ಸೇವಕನ ಸ್ಥಾನ

ಸೂಫಿ ಸಂತ ಅಬ್ದುಲ್ ಖಾದಿರ್ ಜೀಲಾನಿ ಅವರ ಬಳಿ ಹಲವರು ಬಂದು ಹೋಗುತ್ತಿದ್ದರು. ಅವರಲ್ಲಿ ಹೆಚ್ಚಿನವರು ಪಾಪಿಯಾಗಿ ಬಂದು ಸಂತರಾಗಿ ಮರಳುತ್ತಿದ್ದರು. ಕೇವಲ ಒಂದು ಸಂದರ್ಶನದಲ್ಲಿ ಹೀಗೆ ಬದಲಾಗುವುದನ್ನು ಕಂಡು ಅವರ ಬಳಿ ಬರುವವರ ಸೇವೆ ಮಾಡುತ್ತಿದ್ದ ವ್ಯಕ್ತಿಗೆ ಆಶ್ಚರ್ಯವಾಗುತ್ತಿತ್ತು. ಎಲಾ, ನಾನು ಇಷ್ಟು ವರ್ಷ ಅವರ ಬಳಿ ಸೇವೆಯಲ್ಲಿ ನಿರತನಾಗಿದ್ದು ಕೂಡ ನನಗೇನೂ ಆ ರೀತಿಯ ಅನುಭವ ಆಗಿಲ್ಲವಲ್ಲ. ಹೀಗೆ ಆಲೋಚನೆ ಮಾಡಿದ ಆ ಸೇವಕ ಒಂದು ದಿನ ಜೀಲಾನಿ ಅವರಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ. ಜೀಲಾನಿ ಏನೂ ಹೇಳದೆ ನಕ್ಕು ಸುಮ್ಮನಾದರು. ಆದರೆ ಸೇವಕ ಪಟ್ಟು ಬಿಡಲಿಲ್ಲ, ಕೊನೆಗೆ ಜೀಲಾನಿ ಅವರು ಅವನನ್ನು ಇಂತಿಂತಹ ಕಡೆ ಹೋಗುವಂತೆ ನಿರ್ದೇಶಿಸಿದರು.
ಹಾಗೆ ಅವರ ಅನುಮತಿ ಪಡೆದು ಅವರು ನಿರ್ದೇಶಿಸಿದ ಕಡೆಗೆ ಹೊರಟ ಸೇವಕ ಅಲ್ಲಿ ಇಬ್ಬರು ವ್ಯಕ್ತಿಗಳು ಅಲ್ಲಾಹನ ಧ್ಯಾನದಲ್ಲಿ ಮಗ್ನರಾಗಿರುವುದನ್ನು ಕಂಡ. ಅಲ್ಲೇ ತಾನೂ ಕುಳಿತು ಸ್ವಲ್ಪ ಹೊತ್ತು ಧ್ಯಾನ ಮಾಡಿ ಮತ್ತೆ ಅದರಿಂದ ವಿರಮಿಸಿದ. ಅಲ್ಲಿದ್ದ ಇಬ್ಬರೂ ಇನ್ನೂ ಧ್ಯಾನ ಮಗ್ನರಾಗಿದ್ದರು. ತುಂಬಾ ಹೊತ್ತು ಕಳೆದ ಮೇಲೆ ಸೇವಕನಿಗೆ ಹಸಿವಾಗತೊಡಗಿತು. ಅವರನ್ನು ಎಬ್ಬಿಸಿ ಹಸಿವಾಗುತ್ತಿದೆ ಏನಾದರೂ ತಿನ್ನೋಣ ಎಂದ. ಅವರು ಧ್ಯಾನದಿಂದ ವಿರಮಿಸಿ ಊಟಕ್ಕೆ ಕುಳಿತರು. ಅವರಲ್ಲಿ ಒಬ್ಬ ಕಣ್ಣು ಮುಚ್ಚಿ ಪ್ರಾರ್ಥಿಸತೊಡಗಿದರು. ಆಗ ಆಕಾಶದಿಂದ ಒಂದು ದೊಡ್ಡ ಊಟದ ತಟ್ಟೆ ಇಳಿಯಿತು. ಅದರಲ್ಲಿ ಮೂವರೂ ಉಣ್ಣುವಷ್ಟು ಊಟ ಹಣ್ಣು ಹಂಪಲು ಪಾನೀಯ ಇತ್ತು. ಅವರು ಹೊಟ್ಟೆ ತುಂಬ ಉಂಡರು. ಸೇವಕ ನಿದ್ದೆಗೆ ಜಾರಿದ. ಉಳಿದ ಇಬ್ಬರು ಮತ್ತೆ ಧ್ಯಾನದಲ್ಲಿ ತೊಡಗಿದರು.
ಮರುದಿನ ಮತ್ತೆ ಸೇವಕನಿಗೆ ಹಸಿವಾಗತೊಡಗಿತು. ಅವರನ್ನು ಎಬ್ಬಿಸಿ ಊಟಕ್ಕೆ ಪ್ರಾರ್ಥಿಸಲು ಕೇಳಿಕೊಂಡ. ಎಲ್ಲರೂ ಕುಳಿತರು. ಈ ದಿನ ಇನ್ನೊಬ್ಬರು ಪ್ರಾರ್ಥಿಸಿದರು. ಆಕಾಶದಿಂದ ತಟ್ಟೆ ಇಳಿಯಿತು. ಊಟ ಮಾಡಿದರು. ಸೇವಕ ಎಂದಿನಂತೆ ಮಲಗಿದ. ಉಳಿದವರು ಧ್ಯಾನಸ್ಥರಾದರು.
ಮೂರನೆಯ ದಿನ ಮತ್ತೆ ಸೇವಕನಿಗೆ ಹಸಿವಾಯಿತು. ಆತ ಅವರನ್ನು ಎಬ್ಬಿಸಿ ಊಟಕ್ಕೆ ಕುಳಿತ. ಅವರೂ ಕುಳಿತರು. ಅವರಿಬ್ಬರೂ ಸೇವಕನತ್ತ ತಿರುಗಿ ಪ್ರಾರ್ಥಿಸಲು ಹೇಳಿದರು. ಸೇವಕ ತನಗೆ ಪ್ರಾರ್ಥಿಸುವುದು ಹೇಗೆಂದೇ ಗೊತ್ತಿಲ್ಲ ಎಂದು ನಿರಾಕರಿಸಿದ. ಆದರೆ ಅವರು ಇವತ್ತು ನಿಮ್ಮ ಸರದಿ, ನೀವು ಪ್ರಾರ್ಥಿಸಿದರೆ ಊಟ ಮಾಡೋಣ. ಇಲ್ಲದಿದ್ದರೆ ಮತ್ತೆ ಧ್ಯಾನಕ್ಕೆ ಹೋಗುತ್ತೇವೆ ಎಂದರು. ಇದನ್ನು ಕೇಳಿ ಸೇವಕನಿಗೆ ಕಸಿವಿಸಿಯಾಯಿತು. ಆದರೂ ತೋರಗೊಡದೆ ಕಣ್ಣು ಮುಚ್ಚಿ ಪ್ರಾರ್ಥಿಸಿದ. ಆಗ ಆಕಾಶದಿಂದ ಒಂದು ತಟ್ಟೆ ಇಳಿದು ಬಂತು. ಅವನು ಅಬ್ಬಾ, ಬಚಾವಾದೆ ಎಂದು ನಿಟ್ಟುಸಿರು ಬಿಟ್ಟ.
ಅದರಿಂದ ಮೂವರೂ ಹೊಟ್ಟೆ ತುಂಬ ಊಟ ಮಾಡಿದರು. ಮತ್ತೆ ಅವರು ಧ್ಯಾನಕ್ಕೆ ಹೋಗಲಣಿಯಾದಾಗ ಸೇವಕ; "ನಾನು ತುಂಬಾ ಹೆದರಿದ್ದೆ. ನೀವು ಪ್ರಾರ್ಥಿಸಿದಾಗ ಊಟ ಬಂದಿತ್ತು. ನನಗೆ ನಿಮ್ಮಷ್ಟು ಜ್ಞಾನ ಇಲ್ಲ. ನಾನು ಇದುವರೆಗೆ ಅಲ್ಲಾಹನಿಗೆ ನಿಮ್ಮ ಹಾಗೆ ತುಂಬಾ ಹೊತ್ತು ಧ್ಯಾನ ಮಾಡಿದವನಲ್ಲ. ಆದರೂ ನನ್ನ ಬಳಿ ಇರುವ ಈ ಎರಡು ಮಹಾ ಸಂತರ ಹೆಸರಿನಲ್ಲಿ ನಾನು ಬೇಡುತ್ತಿರುವೆ, ಅವರ ಕಾರಣದಿಂದ ನನ್ನ ಪ್ರಾರ್ಥನೆ ಸ್ವೀಕರಿಸಿ ನಮಗೆ ಊಟ ಕೊಡು ಎಂದು ಬೇಡಿದ್ದೆ. ಆಗ ಊಟ ಬಂತು. ಆದರೆ ನೀವು ಏನೆಂದು ಪ್ರಾರ್ಥಿಸಿದಿರಿ. ನನಗೂ ಅದನ್ನು ಹೇಳಿಕೊಡಿ, ಅಗತ್ಯದ ಸಂದರ್ಭದಲ್ಲಿ ಪ್ರಯೋಜನವಾದೀತು" ಎಂದು ಹೇಳಿದ.
ಇದನ್ನು ಕೇಳಿ ಇಬ್ಬರೂ ನಗತೊಡಗಿದರು. "ನೀವು ನಮ್ಮಿಬ್ಬರ ಹೆಸರಿನಲ್ಲಿ ಬೇಡಿದಾಗ ಒಂದು ತಟ್ಟೆ ಬಂತು. ನಾವು ಬೇಡಿದ್ದು ಏನು ಗೊತ್ತಾ?"
"ಗೊತ್ತಿಲ್ಲ"
"ನಾವು ಪ್ರಾರ್ಥಿಸಿದ್ದು ಹೀಗೆ. ಅಲ್ಲಾಹನೇ, ಸೂಫಿ ಸಂತ ಜೀಲಾನಿ ಅವರ ಬಳಿ ಸೇವೆ ಮಾಡುವ ಒಬ್ಬ ವ್ಯಕ್ತಿ ನಮ್ಮ ಬಳಿ ಇದ್ದಾರೆ. ಅವರ ಕಾರಣದಿಂದ ನಮಗೆ ಊಟ ಕೊಡು" ಎಂದು ಹೇಳಿದಾಗ ಸೇವಕನಿಗೆ ದಿಗಿಲು.
ಅವರ ಹೆಸರು ಹೇಳಿದಾಗ ಒಂದು ತಟ್ಟೆ ಇಳಿಯಿತು. ನನ್ನ ಹೆಸರು ಹೇಳಿದಾಗ ಎರಡು ತಟ್ಟೆ ಇಳಿಯಿತು. ನನಗೇ ಗೊತ್ತಿಲ್ಲದೆ ನಾನೇನೋ ಆಗಿರುವೆ ಎಂದು ಯೋಚಿಸತೊಡಗಿದ ಸೇವಕ ಒಂದು ಕ್ಷಣವೂ ಅಲ್ಲಿ ನಿಲ್ಲದೆ ನೇರ ಜೀಲಾನಿ ಅವರ ಬಳಿ ಮತ್ತೆ ಸೇವಕನಾಗಿ ಸೇರಿಕೊಂಡ.


Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...