ಕಾಲಚಕ್ರವು ಅತ್ಯಂತ ವೇಗವಾಗಿ ಸಾಗುತ್ತಿದೆ. ಅದರೊಂದಿಗೆ ಆಯುಸ್ಸಿನ ಪ್ರತೀ ನಿಮಿಷವೂ ಮಂಜುಗಡ್ಡೆಯಂತೆ ಕರಗುತ್ತಿದೆ. ತುಸು ನೆಮ್ಮದಿಗಾಗಿ ಮಾನವ ಹಾತೊರೆಯುತ್ತಿದ್ದಾನೆ. ಆದರೆ, ಎಲ್ಲೂ ಆತನಿಗೆ ನೆಮ್ಮದಿ ಸಿಗುತ್ತಿಲ್ಲ. ಆತ ಕಾಲಿಟ್ಟಲ್ಲೆಲ್ಲಾ ಅಸಮಾಧಾನದ ಹೊಗೆಯಾಡುತ್ತಿದೆ. ಕುಟುಂಬ, ಸಮಾಜ, ವ್ಯವಹಾರ ಹೀಗೆ ಪ್ರತಿಯೊಂದು ಕಡೆಯಲ್ಲೂ ಆತನಿಗೆ ನೆಮ್ಮದಿಯಿಲ್ಲ! ಸಮಾಧಾನವಿಲ್ಲ. ಸುಖವಿಲ್ಲ. ಶಾಂತಿಯಿಲ್ಲ. ಯಾಕೆ ಹೀಗೆ? ಮನುಷ್ಯನ ಈ ದುಃಖಕ್ಕೆ, ಅಸಮಾಧಾನಕ್ಕೆ ಕಾರಣ ಏನು
ಆಧ್ಯಾತ್ಮಿಕತೆಯ ಕೊರತೆ
ಅದೊಂದೇ ಮನುಷ್ಯನ ಇಂದಿನ ಈ ಸ್ಥಿತಿಗೆ ಕಾರಣ. ಮನುಷ್ಯ ಆಧ್ಯಾತ್ಮಿಕತೆಯನ್ನು ಮರೆತು ಲೌಕಿಕತೆಯ ಹಿಂದೆ ಎಂದು ಓಡಲಾರಂಭಿಸಿದನೋ ಅಂದೇ ಆತನ ನೆಮ್ಮದಿಯೂ ಆತನನ್ನು ಬಿಟ್ಟು ಓಡಲಾರಂಭಿಸಿತು. ಮನೆಯಲ್ಲಿ ಸುಖವಿಲ್ಲ, ವ್ಯವಹಾರದಲ್ಲೂ ಸುಖವಿಲ್ಲ. ಸಂತಾನಗಳಿಂದಲೂ ಸುಖವಿಲ್ಲ. ಎಲ್ಲಿಗೆ ಹೋದಾರೂ ಏನಾದರೊಂದು ಚಿಂತೆ ನಮ್ಮನ್ನು ಹಿಂಬಾಲಿಸಿಕೊಂಡೇ ಬರುತ್ತದೆ. ನಾವು ನಮ್ಮ ನೆಮ್ಮದಿಯನ್ನು ಕಳೆದುಕೊಂಡಿರುವುದೆಲ್ಲಿ?
ದೈವಸ್ಮರಣೆಯ ಅಭಾವದಲ್ಲಿ
ನಿಜ. ನೆಮ್ಮದಿಯು ದೈವಸ್ಮರಣೆಯಲ್ಲಿ ಅಡಗಿಕೊಂಡಿದೆ. ದೈವಸ್ಮರಣೆಯಾದರೋ ಧಾರ್ಮಿಕತೆ ಎಂಬ ಮುತ್ತು ಮಣಿಗಳಿಂದ ಪೋಣಿಸಲ್ಪಟ್ಟಿದೆ. ದೈವಸ್ಮರಣೆ ನಮಗೆ ಅಭ್ಯಾಸವಾಗಬೇಕಾದರೆ ನಾವು ಧಾರ್ಮಿಕತೆಯನ್ನು ಪ್ರವೇಶಿಸಲೇಬೇಕು. ನಮ್ಮ ಜೀವನದ ಪ್ರತೀ ಕ್ಷಣವೂ ಧಾರ್ಮಿಕವಾಗಿದ್ದಾಗ ಮಾತ್ರ ನಮಗೆ ಶುದ್ಧ ಮನಸಿನಿಂದ ದೈವಸ್ಮರಣೆ ಮಾಡಲು ಸಾಧ್ಯ. ದೈವಸ್ಮರಣೆಯಿರುವ ಮನಸು ನೆಮ್ಮದಿಯಿಂದ ಕೂಡಿರುತ್ತದೆ. ಸಕಲ ಚಿಂತೆಗಳೂ ಕಾಲಕಸವಾಗುತ್ತದೆ. ದೈವಸ್ಮರಣೆಯಿರುವ ಮನಸಿನಲ್ಲಿ ಭಯಾತಂಕಗಳಿರುವುದಿಲ್ಲ. ಚಿಂತೆಗಳಿರುವುದಿಲ್ಲ. ಗೊಂದಲಗಳಿರುವುದಿಲ್ಲ. ಅದು ಶುದ್ಧವಾಗಿರುತ್ತದೆ. ಸ್ವಚ್ಛವಾಗಿರುತ್ತದೆ. ಚಿಂತೆಗಳಿಲ್ಲದ ಮನಸು ನೆಮ್ಮದಿಯಿಂದ ಕೂಡಿರುತ್ತದೆ.
ಧಾರ್ಮಿಕತೆ ಹಾಗೆ ಸುಮ್ಮನೆ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಅದಕ್ಕೊಂದು ಪೂರಕ ವಾತಾವರಣ ಬೇಕು. ಮನೆಯೇ ಅದಕ್ಕೆ ಸೂಕ್ತ ಸ್ಥಳ. ಮನೆಯೊಳಗೆ ಧಾರ್ಮಿಕತೆ ತುಂಬಿ ತುಳುಕಬೇಕಾದರೆ ಮನೆಯ ಹೆಣ್ಣು ಮಕ್ಕಳು ಧಾರ್ಮಿಕ ಶಿಕ್ಷಣ ಪಡೆದಿರಬೇಕು. ಮನೆಯ ಹೆಣ್ಣು ಮಕ್ಕಳು ಉತ್ತಮ ಧಾರ್ಮಿಕ ಪ್ರಜ್ಞೆಯಿರುವವರಾದರೆ ಆ ಮನೆಯಲ್ಲಿ ಚಿಂತೆಗಳಿರುವುದಿಲ್ಲ. ಅಸಮಾಧಾನದ ಹೊಗೆಯಾಡುವುದಿಲ್ಲ. ಅಲ್ಲಿ ನೆಮ್ಮದಿಯಿರುತ್ತವೆ. ಸುಖ, ಶಾಂತಿಯಿರುತ್ತವೆ. ಸಂತಾನಗಳಲ್ಲಿ ಸಮೃದ್ಧಿಯಿರುತ್ತವೆ.
ನಮ್ಮ ದೇಶದಲ್ಲಿ ಇಂದು ಮುಸ್ಲಿಮ್ ಯುವಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಅಪರಾಧಿ ಪ್ರಕರಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಜೈಲಿನಲ್ಲೇ ಅದೆಷ್ಟೋ ಮುಸ್ಲಿಮ್ ಯುವಕರಿದ್ದಾರೆ. ಇವರೆಲ್ಲಾ ಹೀಗೆ ದಾರಿ ತಪ್ಪಲು ಮುಖ್ಯ ಕಾರಣ ಮನೆಯೊಳಗೆ ಇವರಿಗೆ ಸರಿಯಾದ ಧಾರ್ಮಿಕ ವಾತಾವರಣ ಲಭಿಸಿರಲಿಲ್ಲ. ಧರ್ಮ ಎಂದರೇನೆಂದೇ ಈ ಯುವಕರಿಗೆ ತಿಳಿದಿರಲಿಲ್ಲ. ಕಂಡು, ಕೇಳಿ ಕಲಿಯುವ ವಾತಾವರಣ ಮನೆಯಲ್ಲಿರಲಿಲ್ಲ.
ಅದೇ ರೀತಿ ನಮ್ಮ ಯುವತಿಯರು ಅಡ್ಡ ಹಾದಿ ಹಿಡಿಯಲು. ಪ್ರೀತಿ, ಪ್ರೇಮವೆಂದು ಕುಟುಂಬವನ್ನು ಮರೆತು ಬಿಡಲು, ಅದುವೇ ಸರ್ವಸ್ವವೆಂದು ನಂಬಿ, ದುರಂತಗಳಿಗೆ ಬಲಿಯಾಗಲು ಧಾರ್ಮಿಕ ಪ್ರಜ್ಞೆಯ ಕೊರತೆಯೇ ಕಾರಣ. ದೈವಸ್ಮರಣೆಯನ್ನು ಬದುಕಿನ ಭಾಗವಾಗಿಸಿಕೊಳ್ಳುವ ಸೂಕ್ತ ವಾತಾವರಣವೊಂದು, ಅವುಗಳನ್ನು ಕಲಿಯುವ ಅವಕಾಶವೊಂದು ಈ ಹೆಣ್ಣು ಮಕ್ಕಳಿಗೆ ಲಭಿಸಿದ್ದರೆ ಖಂಡಿತ ಇವರು ಅಡ್ಡಹಾದಿ ಹಿಡಿಯುತ್ತಿರಲಿಲ್ಲ.
ಮನೆಯನ್ನು ಧಾರ್ಮಿಕತೆಯಿಂದ ಬೆಳಗಿಸುವುದು ಮಹಿಳೆಯರ ಕರ್ತವ್ಯವಾಗಿದೆ. ಅದು ಸಾಧ್ಯವಾಗಬೇಕಾದರೆ ಅವರಿಗೆ ಧರ್ಮದ ಕುರಿತು ಅರಿವಿರಬೇಕು. ಅದಕ್ಕಾಗಿಯೇ ಪ್ರತೀ ವಾರ ಮಂಗಳವಾರದಂದು ಮಹಿಳೆಯರಿಗೆ ವಿಶೇಷ ತರಬೇತಿಯನ್ನು ಮಸೀದಿ ಆಡಳಿ ಕಮಿಟಿ ಹಮ್ಮಿಕೊಂಡಿದೆ. ಈ ತರಗತಿಗೆ ಮುಸ್ಲಿಮ್ ಮಹಿಳೆಯರೆಲ್ಲರೂ ಆಗಮಿಸಿ, ಅಲ್ಲಿ ಲಭಿಸುವ ತರಬೇತಿಯನ್ನು ಮನೆಯಲ್ಲಿ ಕಾರ್ಯರೂಪಕ್ಕೆ ತರಬೇಕು. ಇದು ಪ್ರೀತಿಯ ಸಹೋದರಿಯರ ಜವಾಬ್ದಾರಿಯೂ ಕೂಡ ಹೌದು.
ಮನೆಯಲ್ಲಿ ಎಷ್ಟು ಮಂದಿ ಸರಿಯಾದ ಸಮಯಕ್ಕೆ ನಮಾಜ್ ಮಾಡುತ್ತಾರೆ? ಮಕ್ಕಳು ಏನು ಮಾಡುತ್ತಿದ್ದಾರೆ? ಅವರ ನಡೆ ನುಡಿ ಹೇಗಿದೆ? ಅವರು ಯಾರೊಂದಿಗೆ ಸೇರುತ್ತಿದ್ದಾರೆ? ನಮಾಜ್ ಮಾಡವರು, ಖುರ್ಆನ್ ಓದದವರು, ಮಸೀದಿಗೆ ಹೋಗದವರು ನಮ್ಮ ಮನೆಯಲ್ಲಿದ್ದರೆ ಅದು ಮನೆಗೆ ಆಪತ್ತಲ್ಲವೇ? ಮನೆಯ ಬರ್ಕತ್ ನಷ್ಟಹೊಂದಲು ಅದು ಕಾರಣವಾಗುತ್ತದೆಯಲ್ಲವೇ? ಸಂತಾನಗಳು ಅಡ್ಡ ಹಾದಿ ಹಿಡಿದರೆ ಅದು ಮನೆಗೆ ಮಾತ್ರವಲ್ಲ ಇಡೀ ಸಮುದಾಯಕ್ಕೇ ಕೆಟ್ಟ ಹೆಸರು ತರುತ್ತದೆಯಲ್ಲವೇ? ಇತ್ಯಾದಿ ಯೋಚನೆಗಳು ನಮ್ಮ ಸಹೋದರಿಯರಿಗೆ ಇರಬೇಕು. ಆದರೆ, ಅಂತ ಪ್ರಜ್ಞೆ ಹುಟ್ಟಿಕೊಳ್ಳಬೇಕಾದರೆ ಧಾರ್ಮಿಕ ಟ್ರೈನಿಂಗ್ ಅತ್ಯಗತ್ಯವಾಗಿ ಬೇಕು.
- ಬಶೀರ್ ಅಹ್ಸನಿ ತೋಡಾರ್
Comments