ಬಿಮಾಪಳ್ಳಿ ಮಖಾಂ ಶರೀಫ್ ಪೂಂತ್ತುರ
ತಿರುವನಂತಪುರಂ
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪
✍ _ಗಫೂರ್ ಬಾಯಾರ್_
**********************
ಶಹೀದ್ ಅಥವಾ ಶುಹದಾ (ಹುತಾತ್ಮ) ಎಂಬ ಪದವಿಗೆ ಅಲ್ಲಾಹನ ಬಳಿ ಅಪರಿಮಿತವಾದ ಮಹತ್ವವಿದೆ. ಎಲ್ಲರಿಗೂ ಈ ಪದವಿ ಲಭಿಸಲಾರದಾದರೂ ಮಹತ್ವಪೂರ್ಣವಾದ ಆ ಪದವಿಗೆ ಭಾಜನರಾದ ಶುಹದಾಗಳಿಗೆ ಅಲ್ಲಾಹನಿಂದ ಲಭಿಸುವ ಸೌಭಾಗ್ಯಗಳಿಗೆ ಮಿತಿಯೆಂಬುದೇ ಇಲ್ಲ.
ಸೃಷ್ಟಿಕರ್ತನಾದ ಅಲ್ಲಾಹನ ಔದಾರ್ಯ ಲಭಿಸಿದವರ ಹೊರತು ಎಲ್ಲರಿಗೂ ಶಹೀದಾಗುವ ಭಾಗ್ಯ ಲಭಿಸಲಾರದಾದರೂ ಅಲ್ಲಾಹನ ತೃಪ್ತಿಯೊಂದಿಗೆ ಶಹೀದಾಗಲು ಅಥವಾ ಶಹೀದ್ನ ಪ್ರತಿಫಲವನ್ನು ಅಲ್ಲಾಹನಿಂದ ಪಡೆಯಲು ಹಾತೊರೆಯದ ಮುಅ್ಮಿನ್ಗಳೇ ಇರಲಾರರು. ಆದರೆ ಅಲ್ಲಾಹನ ಪ್ರಪ್ರಥಮ ಸೃಷ್ಟಿಯೂ, ಅಂತ್ಯ ಪ್ರವಾದಿಯೂ, ಅಂಬಿಯಾಗಳ ನೇತಾರರೂ, ವಿಶ್ವ ಪ್ರವಾದಿಯೂ, ವಿಶ್ವಾಸಿ ಹೃದಯದ ಉಜ್ವಲ ತಾರೆಯೂ ಆದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ﷺِ ರಿಂದ ಒಬ್ಬ ವ್ಯಕ್ತಿಗೆ "ಶಹಾದತ್ ಪದವಿ ನಿಮ್ಮನ್ನು ನಿರೀಕ್ಷಿಸುತ್ತಿದೆ" ಎಂಬ ಸಂದೇಶ ಲಭಿಸಿದರೆ ಆ ವ್ಯಕ್ತಿಯ ಸೌಭಾಗ್ಯಕ್ಕೆ ಎಣೆಯುಂಟೇ...?
ಸುಮಾರು ಐದು ಶತಮಾನಗಳ ಹಿಂದೆ ಅಲ್ಲಾಹನ ಹಬೀಬರಾದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ﷺِ ರವರ ಸಲಹೆಯ ಮೇರೆಗೆ ಸಯ್ಯಿದ್ ಅಬ್ದುಲ್ ಗಫಾರಿ (ರ)ರವರು ಪತ್ನಿ ಸಯ್ಯಿದತ್ ಬಿಮಾ ಬೀವಿ (ರ.ಅ) ಹಾಗೂ ಪುತ್ರ ಸಯ್ಯಿದ್ ಮಾಹಿನ್ ಅಬೂಬಕರ್ (ರ.ಅ)ರೊಂದಿಗೆ ಅರೇಬಿಯಾದಿಂದ ಹೊರಟು ತಮಿಳುನಾಡಿಗೆ ಆಗಮಿಸಿ ದೀನೀ ಪ್ರಬೋಧನೆ ನಡೆಸಲಾರಂಭಿಸಿದರು.
ತಮಿಳುನಾಡಿನ ತಿರುವೆಲ್ಲ ಎಂಬಲ್ಲಿ ವಾಸಿಸುತ್ತಾ ದೀನೀ ದಅ್ವಾ ನಡೆಸುತ್ತಿದ್ದ ಸಯ್ಯಿದ್ ಅಬ್ದುಲ್ ಗಫಾರಿ (ರ) ರವರ ವಿಯೋಗಾ ನಂತರ ಅವರ ಪತ್ನಿಯಾದ ಮಹದಿ ಬಿಮಾ ಬೀವಿ (ರ)ರವರು ತಮಿಳುನಾಡಿನಿಂದ ಕೇರಳದ ಈಗಿನ ತಿರುವನಂತಪುರಂ ಜಿಲ್ಲೆಗೆ ವಾಸ ಬದಲಿಸಿದರು. (ಕ್ರಿಸ್ತಶಕ 1478-1528. ಕೇರಳವನ್ನು ರಾಜ ಮಾರ್ತಾಂಡ ವರ್ಮ ಆಳುತ್ತಿದ್ದ ಕಾಲ)
ಅದಾಗಲೇ ವಿಲಾಯತಿನ ಪದವಿಗೇರಿದ್ದ ಆ ಮಹದಿ ಬಿಮಾ ಬೀವಿ ಮತ್ತು ಪುತ್ರ ಮಾಹಿನ್ ಅಬೂಬಕರ್ (ರ) ರವರು ಇಖ್ಲಾಸ್ ಮತ್ತು ತಖ್ವಾದಿಂದ ಕಳಂಕರಹಿತವಾದ ಜೀವನ ನಡೆಸುತ್ತಾ ಅಲ್ಲಾಹನು ದಯಪಾಲಿಸಿದ ಕರಾಮತ್ಗಳ ಮೂಲಕ ಪ್ರತಿಫಲಾಪೇಕ್ಷೆಯಿಲ್ಲದೆ ಕೇರಳದಲ್ಲಿ ಸಮಾಜಸೇವೆ ಮಾಡುತ್ತಾ ದೀನೀ ಪ್ರಬೋಧನೆ ನಡೆಸಲಾರಂಭಿಸಿದರು.
ಮಹದಿ ಮತ್ತು ಅವರ ಪುತ್ರರ ಪ್ರಾರ್ಥನೆಯ ಮಹತ್ವದ ಅರಿವಾದ ನಂತರ ಜನಸಾಮಾನ್ಯರು ತಮ್ಮ ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕಾಗಿ ಜಾತಿ ಮತ ಭೇದವಿಲ್ಲದೆ ಸಂದರ್ಶಿಸುತ್ತಿದ್ದುದಷ್ಟೇ ಅಲ್ಲದೆ ಅವರ ಪ್ರಬೋಧನೆಯಿಂದ ಜನತೆಗೆ ಇಸ್ಲಾಮಿನ ತತ್ವ ಮತ್ತು ಆದರ್ಶಗಳ ಅರಿವಾಗತೊಡಗಿತು.
ಪತಿ ಅಬ್ದುಲ್ ಗಫಾರಿ (ರ)ರವರ ಮರಣಾನಂತರ ಬಿಮಾ ಬೀವಿ(ರ) ರವರು ಪುತ್ರ ಸಯ್ಯಿದ್ ಮಾಹಿನ್ ಅಬೂಬಕರ್ (ರ) ರೊಂದಿಗೆ ತಮಿಳುನಾಡಿನಿಂದ ಕೇರಳಕ್ಕೆ ವಲಸೆ ಹೋಗಿ ದೀನೀ ದಅ್ವಾ ನಡೆಸಲಾರಂಭಿಸಿದರು.
ಅಸ್ಪ್ರಶ್ಯತೆಯಂತಹ ಅನಾಚಾರಗಳಿಂದ ಕಂಗೆಟಿದ್ದ ಜನತೆಗೆ ಈ ಮಹಾತ್ಮರ ಪ್ರಬೋಧನೆ ಮತ್ತು ಪ್ರತಿಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆಯಿಂದ ಸಾಂತ್ವಾನ ಲಭಿಸಲಾರಂಭಿಸಿದ್ದಷ್ಟೇ ಅಲ್ಲದೆ ಇಸ್ಲಾಮ್ ಎಂಬುದು ಸೃಷ್ಟಿಕರ್ತನಾದ ಅಲ್ಲಾಹನ ದೀನ್ ಎಂಬುದು ಸ್ಪಷ್ಪವಾಗಿ ಮನವರಿಕೆಯಾಯಿತು ಹಾಗಾಗಿ ಹಲವರು ಇಸ್ಲಾಂ ಸ್ವೀಕರಿಸಿದರು.
ಅನಂತರ ದಿನದಿಂದ ದಿನಕ್ಕೆ ಇಸ್ಲಾಮ್ ಸ್ವೀಕರಿಸುವವರ ಸಂಖ್ಯೆ ಹೆಚ್ಚಿದಾಗ ಹಲವರಿಗೆ ಇದು ಪತ್ಯವಾಗಲಿಲ್ಲ. ಅಂಥವರು ಅಸೂಯೆಯಿಂದ ಒಳಗೊಳಗೆ ಕುದಿಯುತ್ತಿದ್ದರು.
ಕಾಲಕ್ರಮೇಣ ಆ ಅಸೂಯೆಯು ದ್ವೇಷವಾಗಿ ಬದಲಾಯಿತಲ್ಲದೆ ಬೀವಿ ಮತ್ತು ಅವರ ಮಗನನ್ನು ಅರೇಬಿಕ್ ಗೂಢಚರ್ಯರೆಂದು ಆರೋಪಿಸುವುದರ ಜೊತೆಗೆ ರಾಜನಿಧಿಗೆ ಕಪ್ಪ (ತೆರಿಗೆ) ನೀಡುತ್ತಿಲ್ಲವೆಂದು ಆಳರಸನಾದ ಮಾರ್ತಾಂಡ ವರ್ಮನಲ್ಲಿ ಆರೋಪಿಸಿದರು.
ಕುತಂತ್ರಿಗಳ ಈ ಕುಟಿಲತೆಯನ್ನು ಸತ್ಯವೆಂದು ಭಾವಿಸಿದ ರಾಜ ಮಾರ್ತಾಂಡ ವರ್ಮನು ಸಯ್ಯಿದತ್ ಬಿಮಾ ಬೀವಿ (ರ) ಮತ್ತು ಅವರ ಪುತ್ರನನ್ನು ಬಂಧಿಸಲು ಆಜ್ಞಾಪಿಸಿದನು.
ಮಾರ್ತಾಂಡ ವರ್ಮನ ಸೈನಿಕರು ಬೀವಿಯವರ ಮನೆಗೆ ತೆರಳಿ ವಿಷಯ ತಿಳಿಸಿದಾಗ ಮಹದಿಯವರು, ತಮ್ಮ ಪುತ್ರ ಹಜ್ ನಿರ್ವಹಿಸಲು ಮಕ್ಕಾಕ್ಕೆ ತೆರಳಿರುವುದರಿಂದ ಅವರು ಹಿಂದಿರುಗುವ ತನಕ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ ಕಾರಣ ಸೈನಿಕರು ಹಿಂದಿರುಗಿದರು.
ಇತ್ತ ಹಜ್ ಯಾತ್ರೆಗೆ ತೆರಳಿದ್ದ ಸಯ್ಯಿದ್ ಮಾಹಿನ್ ಅಬೂಬಕರ್ (ರ) ರವರು ಮೊದಲಿಗೆ ಹಜ್ಜ್ ನಿರ್ವಹಿಸಿ ತಮ್ಮ ಪಿತಾಮಹರಾದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ﷺِ ಮರ ರೌಳ ಸಂದರ್ಶನಕ್ಕಾಗಿ ಮದೀನಾಕ್ಕೆ ತೆರಳಿ ಝಿಯಾರತ್ನ ನಂತರ ಅಂದು ರಾತ್ರಿ ಮಸ್ಜಿದುನ್ನಬವಿಯಲ್ಲೇ ಮಲಗಿದ್ದರು.
*ಮದೀನಾದ ಮಸ್ಜಿದುನ್ನಬವಿಯಲ್ಲಿ ಮಲಗಿದ್ದ ಸಯ್ಯಿದ್ ಮಾಹಿನ್ ಅಬೂಬಕರ್ (ರ)ರವರನ್ನು ಅಂದು ರಾತ್ರಿ ಕನಸಿನಲ್ಲಿ ಸಂದರ್ಶಿಸಿದ ಮುತ್ತು ಮುಹಮ್ಮದ್ ಮುಸ್ತಫಾ ﷺِ ಆದಷ್ಟು ಬೇಗನೆ ಹಜ್ಜ್ ನಿರ್ವಹಿಸಿ ಕೇರಳಕ್ಕೆ ಹಿಂದಿರುಗಬೇಕೆಂದೂ ಅಲ್ಲಿ ಶಹಾದತ್ ಎಂಬ ಪದವಿಯು ತಮಗಾಗಿ ನಿರೀಕ್ಷಿಸುತ್ತಿದೆ ಎಂಬ ಸಂದೇಶ ನೀಡಿದರು.*
ಮುತ್ತು ನಬಿ ﷺِ ಯವರು ನೀಡಿದ ಸಂದೇಶದಿಂದ ಆನಂದತುಂದಿಲರಾದ ಸಯ್ಯಿದ್ ಮಾಹಿನ್ ಅಬೂಬಕರ್ (ರ) ಮರುದಿನವೇ ಹಜ್ಜ್ ನಿರ್ವಹಿಸಿ ಕೇರಳಕ್ಕೆ ಹಿಂದಿರುಗಿದರು.
ಸಯ್ಯಿದ್ ಮಾಹಿನ್ ಅಬೂಬಕರ್ (ರ) ರವರು ಮಕ್ಕಾದಿಂದ ಹಿಂದಿರುಗಿದ ವಿಷಯ ತಿಳಿದೊಡನೆ ಶತ್ರುಗಳು ಮಹಾನರ ಮೇಲೆ ಮುಗಿಬಿದ್ದರು.
ತಮ್ಮ ಮೇಲೆ ಮುಗಿಬಿದ್ದ ಶತ್ರುಗಳೊಂದಿಗೆ ವೀರಾವೇಶದಿಂದ ಹೋರಾಡಿದ ಆ ಮಹಾನರು ಅಲ್ಲಾಹನ ವಿಧಿಲಿಖಿತದಂತೆ ಕೊನೆಗೆ ಹುತಾತ್ಮರಾಗುವುದರೊಂದಿಗೆ ಸೃಷ್ಟಿಕರ್ತನಾದ ಅಲ್ಲಾಹನ ರಹ್ಮತ್ತಿಗೆ ಯಾತ್ರೆಯಾದರು.
ಪುತ್ರ ಶಹೀದಾದನಂತರ ಮಾನಸಿಕವಾಗಿ ಕುಗ್ಗಿ ಹೋದ ಮಾಹಿನ್ ಅಬೂಬಕರ್ (ರ)ರವರ ತಾಯಿ ಮಹದಿ ಸಯ್ಯಿದತ್ ಬಿಮಾ ಬೀವಿ (ರ)ರವರೂ ಸಹ ಅಲ್ಪಕಾಲದಲ್ಲೇ ಇಹಲೋಕಕ್ಕೆ ವಿದಾಯ ಹೇಳಿದರು.
ಮಹದಿ ಸಯ್ಯಿದತ್ ಬಿಮಾ ಬೀವಿ (ರ) ಮತ್ತು ಸಯ್ಯಿದ್ ಮಾಹಿನ್ ಅಬೂಬಕರ್ (ರ) ಅಂತ್ಯವಿಶ್ರಮ ಪಡೆಯುತ್ತಿರುವ ಬಿಮಾಪಳ್ಳಿಯು ಹಲವಾರು ಕಶ್ಫ್ ಕರಾಮತ್ತುಗಳ ಮೂಲಕ ದಕ್ಷಿಣ ಭಾರತದಲ್ಲೇ ಹೆಸರಾಂತ ಝಿಯಾರತ್ ಕೇಂದ್ರಗಳಲ್ಲಿ ಒಂದಾಗಿದೆ.
*ಸಯ್ಯಿದ್ ಮಾಹಿನ್ ಅಬೂಬಕರ್ (ರ)ರವರು ಶಹೀದಾದ ಸ್ಥಳದಲ್ಲೊಂದು ಬಾವಿ ಇದ್ದು ಆ ಬಾವಿಯ ನೀರನ್ನು ಕುಡಿಯುವುದರಿಂದ ಹಾಗೂ ಅದರಲ್ಲಿ ಸ್ನಾನ ಮಾಡುವುದರಿಂದ ಹಲವು ರೋಗಗಳಿಗೆ ಶಮನ ಲಭಿಸಿದೆ. ಹಾಗಾಗಿ ಈ ಬಾವಿಯು (ಮರುನ್ನು ಕಿಣರ್) "ಔಷಧಿಯ ಬಾವಿ" ಎಂದೇ ಅರಿಯಲ್ಪಡುತ್ತದೆ.*
ಬಿಮಾಪಳ್ಳಿಯಲ್ಲಿ ಪ್ರತಿವರ್ಷ ಜಮಾದಿಲ್ ಆಖಿರ್ ಒಂದರಿಂದ ಹತ್ತಿರ ತನಕ ಉರೂಸ್ ನಡೆಯುತ್ತದೆ.
_ದಾರಿ: ಬಿಮಾಪಳ್ಳಿಯು ಕೇರಳದ ರಾಜಧಾನಿಯಾದ ತಿರುವನಂತಪುರಂ ನಗರದಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ._
♻♻♻♻♻♻♻♻
Comments