ನಾಳೆ ಪ್ರಳಯವಾದರೂ ಇಂದು ಗಿಡ ನೆಡು
ಇಸ್ಲಾಂ ಮತ್ತು ಪರಿಸರ
ನಾವಿಂದು ವಿಶ್ವ ಪರಿಸರ ದಿನ ಆಚರಿಸುತ್ತಿದ್ದೇವೆ. ಪರಿಸರ ಹಾಗೂ ಪ್ರಕೃತಿಯ ಸಂರಕ್ಷಣೆಗೆ ಇಸ್ಲಾಂ ಧರ್ಮ 1400 ವರ್ಷಗಳ ಹಿಂದೆಯೇ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಇದನ್ನು ನಾವು ಕುರ್ಆನ್ ಮತ್ತು ಪ್ರವಾದಿ ಮುಹಮ್ಮದ್ ಬೋಧನೆಯಲ್ಲಿ ಕಾಣಬಹುದಾಗಿದೆ.
‘ನಾಳೆಯೇ ಜಗತ್ತಿಗೆ ಪ್ರಳಯ ಎಂದು ಗೊತ್ತಾಗಿ, ಮನುಷ್ಯ ತನ್ನ ಎಲ್ಲ ಆಸೆ, ಆಕಾಂಕ್ಷೆಗಳನ್ನು ತೊರೆದು ಹತಾಶನಾದರೂ ಭೂಮಿಯಲ್ಲಿ ಒಂದು ಸಸ್ಯವನ್ನು ನೆಡಬೇಕು’. ಅಂದರೆ ಪ್ರಕೃತಿಯ ಉಳಿವಿಗೆ ತನ್ನ ಕೊಡುಗೆ ನೀಡಬೇಕು. ಬಂಜರು ಭೂಮಿಯನ್ನು ಹಸಿರು ವನವನ್ನಾಗಿ ಪರಿವರ್ತಿಸಬೇಕು ಎಂದು ಪ್ರವಾದಿ ಮುಹಮ್ಮದ್ ಒಂದೆಡೆ ಸಾರಿದ್ದಾರೆ.
‘ಒಬ್ಬ ವ್ಯಕ್ತಿಯು ಒಂದು ಗಿಡ ನೆಟ್ಟರೆ ಅಥವಾ ಬೇಸಾಯ ಮಾಡಿದ್ದರೆ, ಅದರ ಪೂರ್ಣ ಪ್ರತಿಫಲ ಆತನಿಗೆ ಸಿಗುತ್ತದೆ. ಜತೆಗೆ, ಆ ಗಿಡ ಅಥವಾ ಬೇಸಾಯದಿಂದ ಬರುವ ಹಣ್ಣು ಇಲ್ಲವೇ ಫಸಲನ್ನು ಯಾರಾದರೂ ಕದ್ದರೂ, ಪ್ರಾಣಿ, ಪಕ್ಷಿಗಳು ತಿಂದರೂ, ಅದರಿಂದ ಗಾಳಿ ಬೀಸಿದರೂ ಅವೆಲ್ಲವೂ ನೆಟ್ಟವನ ಪಾಲಿಗೆ ದಾನವಾಗಿ ಪರಿಗಣಿಸಲ್ಪಡುತ್ತದೆ’ ಎಂದು ಪ್ರವಾದಿ ಹೇಳಿರುವರು. ಇಸ್ಲಾಮಿನಲ್ಲಿ ದಾನ, ಧರ್ಮಕ್ಕೆ ಅತ್ಯಂತ ಪವಿತ್ರ ಸ್ಥಾನ ಹಾಗೂ ಮಹತ್ವ ಇರುವುದನ್ನು ಗಮನಿಸಬಹುದು.
ನೀರು, ಉಪ್ಪು ಮತ್ತು ಮಣ್ಣಿನ ವಿಚಾರದಲ್ಲಿ ಎಂದೂ, ಅದು ತನ್ನದು ಎಂದು ತಕರಾರು ಮಾಡಬಾರದು. ಈ ಮೂರು ವಸ್ತುಗಳನ್ನು ಯಾರು ಕೇಳಿದರೂ ಕೊಡಬೇಕು ಎಂದಿರುವರು. ಬೀಸುವ ಗಾಳಿಯನ್ನು ತಡೆಯಬಾರದು ಎಂದು ಪ್ರವಾದಿ ಮುಹಮ್ಮದ್ ಹೇಳಿರುವರು.
ಇಸ್ಲಾಮಿನ ಕಾಲದಲ್ಲಿ ನಡೆದಿರುವ ಯುದ್ಧ ಸಂದರ್ಭದಲ್ಲೂ ವಯೋವೃದ್ಧ ಹಿರಿಯರು, ಮಹಿಳೆಯರು, ಅಶಕ್ತರು, ಮಕ್ಕಳ ಮೇಲೆ ಕೈ ಮಾಡಬಾರದು ಎಂಬ ನಿಯಮದ ಜತೆಗೆ, ಯಾವ ಕಾರಣಕ್ಕೂ ಕೃಷಿ, ಬೆಳೆ, ಬೇಸಾಯವನ್ನು ಹಾಳು ಮಾಡಬಾರದು ಎಂಬ ನಿಯಮವೂ ಚಾಲ್ತಿಯಲ್ಲಿತ್ತು ಎಂಬುದು ಉಲ್ಲೇಖನೀಯ.
ಒಮ್ಮೆ ಪ್ರವಾದಿ ಮುಹಮ್ಮದ್ ತಮ್ಮ ಅನುಯಾಯಿಗಳ ಜತೆಗೆ ನಡೆದುಕೊಂಡು ಮಸೀದಿಗೆ ಹೋಗುತ್ತಿದ್ದರು. ಆಗ, ಮುಂದೆ ಇದ್ದ ಸಹಾಬಿಯೊಬ್ಬರು ಗಿಡದ ಎಲೆಗಳನ್ನು ಎಳೆದು ಹಾಕಿದರು. ಇದನ್ನು ಕಂಡ ಪ್ರವಾದಿ ಇದೇನು ಮಾಡುತ್ತೀರಿ ಎಂದು ಪ್ರಶ್ನಿಸಿ, ನೋಡಿ, ಮನುಷ್ಯನಂತೆ ಗಿಡ, ಮರಗಳಲ್ಲೂ ಜೀವ ಇರುತ್ತದೆ. ಅನಗತ್ಯವಾಗಿ ಅವುಗಳಿಗೆ ನೋವು, ಹಾನಿ ಮಾಡಬಾರದು ಎಂದು ಉಪದೇಶಿಸಿದ್ದರು.
ಇನ್ನೊಂದು ಹದೀಸ್ನಲ್ಲಿ ‘ಮುಸಲ್ಮಾನನೊಬ್ಬ ವಝೂ(ಅಂಗಸ್ನಾನ) ಮಾಡುವಾಗ, ತನ್ನ ಎದುರು ಭೋರ್ಗರೆಯುವಸಮುದ್ರ ಇದ್ದರೂ ಮೂರು ಬಾರಿ ಮಾತ್ರ ಅಂಗಾಂಗಗಳನ್ನು ತೊಳೆಯಬೇಕು’ ಎಂದಿರುವರು. ಇದೇನೆಂದರೆ, ಮುಸ್ಲಿಮನೊಬ್ಬನಿಗೆ ಪ್ರತಿನಿತ್ಯ ಐದು ಹೊತ್ತಿನ ನಮಾಝ್ ಕಡ್ಡಾಯ. ನಮಾಝ್ಗೆ ಮೊದಲು ವಝೂ, ಅಂದರೆ ಕೈ, ಕಾಲು, ಮುಖ ಮತ್ತಿತರ ಅಂಗಾಂಗಳನ್ನು ತೊಳೆದುಕೊಳ್ಳುವುದು ಕೂಡಾ ಕಡ್ಡಾಯ. ಗರಿಷ್ಠ ಮೂರು ಮಾತ್ರ
ವುಝೂ (ಅಂಗಸ್ನಾನ) ಮಾಡಿಕೊಳ್ಳಬೇಕು. ಅಂದರೆ, ಅನಗತ್ಯವಾಗಿ ನೀರನ್ನು ಪೋಲು ಮಾಡಬಾರದು. ನೀರು ಅತ್ಯಮೂಲ್ಯ. ಅದು ಎಲ್ಲರಿಗೂ ಲಭಿಸಬೇಕು. ಮುಂದಿನ ಪೀಳಿಕೆ, ಜೀವ ಜಂತುಗಳಿಗಾಗಿ ಸಂರಕ್ಷಿಸಬೇಕು.
ಪ್ರವಾದಿ ಮುಹಮ್ಮದ್ ಶಾಖಾಹಾರಿ ಅಲ್ಲದಿದ್ದರೂ ಪ್ರಾಣಿ, ಪಕ್ಷಿಗಳ ವಿಚಾರದಲ್ಲಿ ಸೂಕ್ಷ್ಮ ಹಾಗೂ ಸಂವೇದನಾಶೀಲರಾಗಿದ್ದರು. ‘ಯಾರಾದರೊಬ್ಬ ಅನ್ಯಾಯವಾಗಿ ಒಂದು ಗುಬ್ಬಚ್ಚಿಯನ್ನು ಕೊಂದರೂ, ಪರಲೋಕದಲ್ಲಿ ದೇವರ ವಿಚಾರಣೆ ಎದುರಿಸಬೇಕಾಗುತ್ತದೆ’ ಎಂದು ಒಮ್ಮೆ ಎಚ್ಚರಿಸಿರುವರು.
ಪ್ರಾಣಿಗಳನ್ನು ವಧೆ ಮಾಡುವುದಿದ್ದರೂ ಮೃದು ಧೋರಣೆ ಅನುಸರಿಸಬೇಕು. ಪ್ರಾಣಿಗೆ ನೋವಿನ ಅರಿವಾಗದಂತೆ ಅತ್ಯಂತ ಹರಿತ ಚಾಕು ಬಳಸಬೇಕು. ಯಾವ ಕಾರಣಕ್ಕೂ ಪ್ರಾಣಿ ಒದ್ದಾಡಿ ಸಾಯುವಂತೆ ಇಬಾರದು. ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿ ಮುಂದೆ ವಸಬಾರದು ಎಂದು ಪ್ರವಾದಿ ಹೇಳಿರುವರು.
ಪವಿತ್ರ ಕುರ್ಆನ್ನಲ್ಲಿ ಭೂಮಿ, ಆಕಾಶ, ಗಾಳಿ, ನೀರಿನ ಬಗ್ಗೆ ಅನೇಕ ಕಡೆ ಉಲ್ಲೇಖಗಳಿವೆ. ‘ಫಸಾದ್ ಫಿಲ್ ಅರ್ಝ್’ ಅಂದರೆ ‘ಭೂಮಿಯ ಮೇಲೆ ಕ್ಷೋಭೆ’ ಹರಡುವವರ ಬಗ್ಗೆ ಎಚ್ಚರಿಕೆಗಳಿವೆ. 30ನೇ ಅಧ್ಯಾಯ ‘ಅರ್ರೂಮ್’ನ 41ನೇ ವಾಕ್ಯವು ‘ಝಹರುಲ್ ಫಸಾದು ಫಿಲ್ ಬರ್ರಿ ವಲ್ ಬಹ್ರಿ ಬಿಮಾ ಕಸಬತ್ ಐದಿನ್ನಾಸ್’ ಎನ್ನುತ್ತದೆ. ಇದರರ್ಥ ‘ಜನರ ಸ್ವಂತ ಕೈಗಳ ದುಡಿಮೆಯಿಂದ ನೆಲ ಜಲಗಳಲ್ಲಿ ಕ್ಷೋಭೆಯುಂಟಾಗಿದೆ’. ಇದು ಅಭಿವೃದ್ಧಿಯ ಹೆಸರಿನಲ್ಲಿ ಇಂದು ಸ್ವಾರ್ಥ ಸಾಧನೆಗಾಗಿ ಮನುಷ್ಯ ಮಾಡುತ್ತಿರುವ ಪರಿಸರ ನಾಶದ ಮುಖವನ್ನು ತೆರೆದಿಡುತ್ತಿದೆ. ಆದರೆ, ಮನುಷ್ಯ ಈ ಬಗ್ಗೆ ಚಿಂತಿಸುತ್ತಿಲ್ಲ.
- *ಮುಹಮ್ಮದ್ ಆರಿಫ್ ಪಡುಬಿದ್ರಿ*
...................
Comments