ಕಾರ್ಡೋವಾದ ಹಳ್ರಮಿ ಎಂಬ ವಿಧ್ವಾಂಸರೊಬ್ಬರಿಗೆ ಒಂದು ಗ್ರಂಥದ ಅನಿವಾರ್ಯವಿತ್ತು. ನಗರದ ಎಲ್ಲಾ ಪುಸ್ತಕದಂಗಡಿಗಳನ್ನೂ ವಿಚಾರಿಸಿದರು. ಕೊನೆಗೊಂದು ಪುಸ್ತಕಾಲಯದಲ್ಲಿ ಆ ಪುಸ್ತಕ ಸಿಕ್ಕಿತು. ಆದರೆ ಮತ್ತೊಬ್ಬ ವ್ಯಕ್ತಿ ಆ ಪುಸ್ತಕದ ಬೆಲೆ ಆ ಮೊದಲೇ ನಿಗಧಿಪಡಿಸಿದ್ದರು. ನಿಗಧಿಪಡಿಸಿದ ಬೆಲೆಗಿಂತ ಅಧಿಕ ತಾನು ಕೊಡುತ್ತೇನೆಂದರು ಹಳ್ರಮಿ. ಇನ್ನೊಬ್ಬರು ಮೊದಲೇ ಬೆಲೆ ನಿಗಧಿ ಪಡಿಸಿದ್ದರಿಂದ ಅವರ ಸಮ್ಮತಿ ಪಡೆಯಲು ಪುಸ್ತಕ ವ್ಯಾಪಾರಿ ದೂತನನ್ನು ಕಳುಹಿಸಿದ . ಹಳ್ರಮಿ ಹೇಳಿದ ಬೆಲೆಗೂ ಅಧಿಕ ನಾನು ಕೊಡುತ್ತೇನೆಂದು ದೂತನನ್ನು ಮರಳಿ ಕಳುಹಿಸಿದ ಆ ವ್ಯಕ್ತಿ. ಹಳ್ರಮಿಗೆ ತುರ್ತಾಗಿ ಆ ಗ್ರಂಥದ ಅಗತ್ಯವಿರುವುದರಿಂದ ಆ ವ್ಯಕ್ತಿ ಹೇಳಿದ ಹಣದ ದುಪ್ಪಟ್ಟು ಕೊಡುತ್ತೇನೆಂದರು. ಪುನಃ ದೂತನನ್ನು ಕಳುಹಿಸಿ ವಿಷಯ ಮುಟ್ಟಿಸಿದರು ವ್ಯಾಪಾರಿ. ಆದರೆ ಆ ವ್ಯಕ್ತಿ ಚೌಕಾಶಿಯಿಂದ ಹಿಂಜರಿಯಲಿಲ್ಲ. ಎಷ್ಟೇ ಹಣ ವ್ಯಯಿಸಿದರೂ ಆ ಗ್ರಂಥವನ್ನು ತನ್ನಾಗಿಸಿಕೊಳ್ಳಬೇಕೆಂಬ ಮರ್ಜಿಗೆ ಬಿದ್ದಿದ್ದರು. ಹೀಗೆ ಹಲವು ಬಾರಿ ನಡೆಯಿತು. ಹಳ್ರಮಿ ಹೈರಾಣಾದರು. ಆ ವ್ಯಕ್ತಿಯನ್ನು ಮುಖತಃ ಭೇಟಿಯಾಗಿ ತನ್ನ 'ಅನಿವಾರ್ಯ' ಸ್ಥಿತಿಯನ್ನು ತಿಳಿಸಬೇಕೆಂದರು ಹಳ್ರಮಿ.
ಪುಸ್ತಕದಂಗಡಿಯ ಮಾಲಿಕ ಆ ವ್ಯಕ್ತಿಯ ಬಳಿ ಅವರನ್ನು ಕರೆದುಕೊಂಡೋದ. ಆ ವ್ಯಕ್ತಿಯ ಗಾಂಭೀರ್ಯತೆಯನ್ನು ಕಂಡ ಹಳ್ರಮಿ ವಿಧ್ವಾಂಸನೆಂದು ಭಾವಿಸಿ ಅತ್ಯಂತ ವಿನಮ್ರತೆಯೊಂದಿಗೆ ಮಾತು ಆರಂಭಿಸಿದರು. ಆದರೆ ಆ ವ್ಯಕ್ತಿ ವಿಧ್ವಾಂಸನಾಗಿರಲಿಲ್ಲ, ಹೊರತು ಅಗರ್ಭ ಶ್ರೀಮಂತನಾಗಿದ್ದ. ಹಳ್ರಮಿ ತನ್ನನ್ನು ವಿಧ್ವಾಂಸನಾಗಿ ಭಾವಿಸಿರಬೇಕೆಂದು "ನೀವು ಅನಿಸಿದಂತೆ ನಾನು ವಿಧ್ವಾಂಸನಲ್ಲವೆಂದರು." ಆ ವ್ಯಕ್ತಿ
ಮಾತುಕತೆಯ ನಂತರ ಆ ಗ್ರಂಥ ತನಗೆ ಅನಿವಾರ್ಯತೆಯಿದೆಯೆಂದೂ, ತಾವು ಚೌಕಾಶಿ ನಡೆಸಿದ್ದನ್ನು ರದ್ದು ಮಾಡಬೇಕೆಂದೂ ಹೇಳಿದರು ಹಳ್ರಮಿ. ಆದರೆ ಅದಕ್ಕೆ ಆ ವ್ಯಕ್ತಿ ಸಿದ್ದನಿರಲಿಲ್ಲ
"ಈ ಪುಸ್ತಕದ ಕುರಿತು ನನಗೇನೂ ಗೊತ್ತಿಲ್ಲ. ಈ ಗ್ರಂಥದ ವಿನ್ಯಾಸ ಮತ್ತು ಕೈಬರಹ ನನ್ನನ್ನು ಆಕರ್ಷಿಸಿದೆ ಅಷ್ಟೇ. ನನಗೊಂದು ಗ್ರಂಥಾಲಯವಿದೆ. ಅತ್ಯಂತ ಆಕರ್ಷಕವಾದ ಪುಸ್ತಕಗಳನ್ನು ನಾನದರಲ್ಲಿ ಸಂಗ್ರಹಿಸಿಟ್ಟಿದ್ದೇನೆ. ನನ್ನ ಗೆಳೆಯರ, ಊರ ಪ್ರಮುಖರ ನಡುವೆ ಪ್ರತಿಷ್ಟೆ ಪಡೆಯುವುದಾಗಿದೆ ನನ್ನ ಉದ್ದೇಶ. ಆದ್ದರಿಂದ ಪುಸ್ತಕದ ಬೆಲೆಯನ್ನು ಏರಿಸಲೋ, ಅಥವಾ ಅದನ್ನು ಖರೀದಿಸುವ ಪ್ರಯತ್ನವನ್ನೋ ತಾವು ಮಾಡಬೇಡಿ. ಅದನ್ನು ಎಷ್ಟೇ ಹಣ ನೀಡಿಯಾದರೂ ಖರೀದಿಸುವಷ್ಟು ತಾಕತ್ತು ನನಗಿದೆ. ನಿಮಗೆ ಬೇಕಾದರೆ ನನ್ನ ಗ್ರಂಥಾಲಯದಲ್ಲಿ ಬಂದು ಆ ಪುಸ್ತಕವನ್ನು ಓದಬಹುದು."
ಮಾತು ನಿಲ್ಲಿಸಿ ಬಿಟ್ಟರು ಆ ವ್ಯಕ್ತಿ.
ಅಯ್ಯೋ.. ಹಳ್ರಮಿ ಅಷ್ಟೆಲ್ಲಾ ಬವಣೆ ಬಂದರೂ ಆ ಪುಸ್ತಕವನ್ನು ದುಷ್ಟ ಖರೀದಿಸಲು ಬಿಡಲಿಲ್ಲಲ್ವಾ ಎಂದು ನಿಮಗನಿಸಿದರೆ ಈ ಕಥೆಯ ಸಾರವೇ ಅಪಾರ್ಥವಾಗುತ್ತದೆ. ಪುಸ್ತಕ ಖರೀದಿಸಿ, ಅದನ್ನು ತನ್ನದಾಗಿಸಬೇಕೆಂಬ ಅಂದಿನ ಮುಸ್ಲಿಮರ ಹಪಾಹಪಿಯೇ ಈ ನಿಜಕಥೆಯ ಮರ್ಮ.
ಪಾಕಿಸ್ಥಾನೀ ಚರಿತ್ರೆಗಾರರಾದ ಸರ್ವತ್ ಸೌಲತ್ ಮುಸ್ಲಿಂ ನಾಗರಿಕತೆಯನ್ನು ವಿಶ್ಲೇಶಿಸುವಲ್ಲಿ ಈ ಕಥೆಯನ್ನು ಮನೋಹರವಾಗಿ ಬಿಚ್ಚಿಡುತ್ತಾರೆ. ಪುಸ್ತಕಕ್ಕೆ ಮುಸ್ಲಿಮರು ನೀಡುತ್ತಿದ್ದ ಪ್ರಾಧಾನ್ಯತೆ ಏನೆಂಬುದು ಈ ಕಥೆಯಿಂದ ಮನನವಾಗುತ್ತದೆ.
ಇಂದಿನಂತೆ ಮುದ್ರಣ ಯಂತ್ರಗಳಿಲ್ಲದಿದ್ದ ಕಾಲವಾಗಿತ್ತದು. ಹಲವು ದಿನಗಳ ಕಾಲ ಕೈಯಿಂದ ಬರೆದು ಸಿದ್ದಪಡಿಸಿದ ಗ್ರಂಥಗಳು. ಇಂಕ್ ಪೆನ್ ಜನ್ಮ ಪಡೆದಿತ್ತಾ..? ಅದೂ ಇಲ್ಲ ಬಿಡಿ. ಕಾಡಿಗೆ ತೆರಳಿ ದ್ರವಿಸಿದ ಎಲುಬು, ಪಕ್ಷಿಗಳ ಗರಿಯನ್ನು ತಂದು ಶಾಯಿಗೆ ಮುಳುಗಿಸಿ ಬರೆಯುತ್ತಿದ್ದರು.! ಆದರೂ ಅರಿವಿಗಾಗಿ ತುಡಿಯುವ ಅವರಿಗೆ ಇದ್ಯಾವುದೂ ಕಷ್ಟವಾಗಿ ಕಾಡುತ್ತಿರಲಿಲ್ಲ. ಮಾರುಕಟ್ಟೆಯಲ್ಲಿ ಒಂದು ಗ್ರಂಥದ ಪ್ರತಿ ಒಂದಕ್ಕಿಂತ ಹೆಚ್ಚು ಲಭಿಸುತ್ತಿರಲಿಲ್ಲ! ಪುಸ್ತಕಗಳಿಗೆ ಮಾರುಕಟ್ಟೆಯಲ್ಲಿ ನಿರ್ಧಿಷ್ಟ ಬೆಲೆಯನ್ನು ನಮೂದುಗೊಳಿಸುತ್ತಿರಲಿಲ್ಲ. ಅತ್ಯಂತ ಬೆಲೆ ಯಾರು ಕೊಟ್ಟರೋ ಅವರಿಗೆ ಗ್ರಂಥವನ್ನು ಪಡೆಯುವ ಅವಕಾಶವಿತ್ತು. ನಿಮಗೊತ್ತಲ್ಲಾ ನಮ್ಮ ಏಲಂ ಪ್ರಕ್ರಿಯೆ..? ಥೇಟ್ ಹಾಗೆಯೇ...
ನಿಮಗೆ ಗೊತ್ತಿರಲಿ. ಮಧ್ಯಯುಗದಲ್ಲಿ ಮುಸ್ಲಿಂ ಸ್ಪೈನ್ನ ಆರ್ಥಿಕ ಆದಾಯವೇ ಪುಸ್ತಕ ವ್ಯಾಪಾರವಾಗಿತ್ತು. ಇದು ಕೇವಲ ಸ್ಪೈನ್ನ ವಿಚಾರ ಮಾತ್ರವಲ್ಲ. ಬಹುತೇಕ ಇಸ್ಲಾಮೀ ರಾಜ್ಯಗಳ ಕಥೆಯೂ ತಥೈವವಾಗಿತ್ತು. ಸಾವಿರಾರು ಮಂದಿಯ ನಿತ್ಯ ಕಸುಬು ಪುಸ್ತಕ ಬರವಣಿಗೆ ಮತ್ತು ವ್ಯಾಪಾರವಾಗಿತ್ತು. ಕೇವಲ ಕಾರ್ಡೋವಾ ಎಂಬ ಸ್ಪೈನ್ನ ಪುಟ್ಟ ನಗರವೊಂದಲ್ಲೇ ಇಪ್ಪತ್ತು ಸಾವಿರಕ್ಕೂ ಅಧಿಕ ಪುಸ್ತಕ ವ್ಯಾಪಾರಿಗಳು ಇದ್ದರೆನ್ನುತ್ತದೆ ಚರಿತ್ರೆ. ಹೀಗೆ ವರ್ತಮಾನದ ಮಸ್ತಿಷ್ಕಕ್ಕೆ ಊಹಿಸಲೂ ಸಾಧ್ಯವಾಗದಂಥ ಸಂಪನ್ನ ಕಾಲವೊಂದು ಮುಸ್ಲಿಂ ಚರಿತ್ರೆಯಲ್ಲಿ ಬಂದು ಹೋಗಿದೆ. ಇಂದು ಪುಸ್ತಕ ಅಂದರೆ ಮೂದಲಿಕೆಯಿಂದ ಕಾಣುವವರ ಪೈಕಿ ಮುಂಚೂಣಿಯಲ್ಲಿರುವವರು ಮುಸ್ಲಿಮರೇ. ಓದು, ಅರಿವು, ಇತಿಹಾಸದ ಜ್ಞಾನದಿಂದ ಮುಸ್ಲಿಮರು ಯಾವಾಗ ವಿಮುಖರಾದರೋ ಅಲ್ಲೇ ಅಧಪತನದ ಶಖೆ ಆರಂಭವಾಯಿತು.
~ಟಿ.ಎಂ ಅನ್ಸಾರ್ ಸಅದಿ ತಂಬಿನಮಕ್ಕಿ
fbpost 06-09-2019
Comments