ವಿಸ್ಮಯ ತುಂಬಿದ ಜೀವಜಗತ್ತು 👉 *40*
*▪ಪ್ರವಾದಿ ದಾವೂದ್ (ಅ) ರಿಗೆ ಸವಾಲೊಡ್ಡಿದ ಕಪ್ಪೆ!!▪*
*✒ಯೂಸುಫ್ ನಬ್ಹಾನಿ ಕುಕ್ಕಾಜೆ.*
📞00971 553499119
▪ *ನಿರಂತರ* ಧಾರಾಕಾರವಾಗಿ ಕೆಲವು ದಿನಗಳು ಮಳೆ ಸುರಿದು ನಂತರ ಮಳೆಯ ಪ್ರಮಾಣ ಕಡಿಮೆಯಾಗುವಾಗ ಪ್ರಕೃತಿ ಬದಲಾವಣೆಯಿಂದಾಗಿ ಕೆಲವು ಜಾಗಗಳ ಮಣ್ಣಿನಲ್ಲಿ ಅಲ್ಲಾಹುವಿನ ಖುದ್ರತಿನಲ್ಲಿ ತಾನಾಗಿಯೇ ಸ್ವಾಭಾವಿಕವಾಗಿ ಸೃಷ್ಟಿಯಾಗುವ ಒಂದು ಜೀವಿಯಾಗಿದೆ ಕಪ್ಪೆ. ಅಂತೆಯೇ ನೀರಿನ ಪ್ರಮಾಣ ಕಡಿಮೆಯಾದ ಕಾರಣದಿಂದ ಹರಿದು ಹೋಗದೆ ಕೊಳೆತು ನಿಂತಿರುವ ತೋಡಿನ ನೀರಿನಲ್ಲೂ ಇದರ ಸಂತಾನ ಉತ್ಪಾದನೆ ತಾನಾಗಿಯೇ ಉಂಟಾಗುತ್ತದೆ. ಮಾತ್ರವಲ್ಲ ನಂತರ ಗಂಡು ಹೆಣ್ಣಿನ ಲೈಂಗಿಕ ಸಂಪರ್ಕದಲ್ಲೂ ಇದರ ಸಂತಾನ ಉತ್ಪಾದನೆಯಾಗುತ್ತದೆ.
▪ *ಬಹಳ* ಸಾಧುವಾದ ಈ ಜೀವಿಯ ಶರೀರವನ್ನು ಅಲ್ಲಾಹನು ಗಟ್ಟಿ ಎಲುಬುಗಳಿಲ್ಲದೆ ಸೃಷ್ಟಿಸಿದ್ದಾನೆ. ರಾತ್ರಿ ನಿರಂತರ ಗೊಣಗುತ್ತಿರುವ ಕಪ್ಪೆಯ ಕರ್ಕಶ ಗೊಣಗು (ಕೂಗು) ವಾತಾವರಣ ಶಾಂತವಾಗಿದ್ದರೆ ಎಷ್ಟೋ ಪರ್ಲಾಂಗು ತನಕ ಕೇಳಬಹುದು.
▪ *ಕಪ್ಪೆ* ಕೆಲವೊಮ್ಮೆ ಹೊರಗಿನಿಂದ ಜಿಗಿದು ಮನೆಯೊಳಗೆ ಬರುತ್ತದೆ. ಹಾಗೆ ಮನೆಯೊಳಗೆ ಕಪ್ಪೆ ಬಂದರೆ ಅದು ಅಪಶಕುನ ಮತ್ತು ಆ ಮನೆಗೆ ಏನೋ ಅನಾಹುತ ಬರುತ್ತದೆ ಎಂಬ ಮೂಡನಂಬಿಕೆ ಈಗಲೂ ಕೆಲವರಲ್ಲಿ ಇದೆ. ಆದರೆ ಇಸ್ಲಾಮಿನಲ್ಲಿ ಅದಕ್ಕೆ ಯಾವುದೇ ಪುರಾವೆ ಇಲ್ಲ.
▪ *ನೀರಿನಲ್ಲೂ* ಮತ್ತು ದಡದಲ್ಲೂ ಬದುಕುವ ಈ ಉಭಯವಾಸಿ ಜೀವಿಗೆ ಬೆಂಕಿಯೆಂದರೆ ಎಲ್ಲಿಲ್ಲದ ಭಯ. ಬೆಂಕಿಯನ್ನು ನೋಡಲು ಸಾಮರ್ಥ್ಯವಿರುವ ಕಣ್ಣು ಕೂಡ ಈ ಜೀವಿಗಿಲ್ಲ. ಆದ್ದರಿಂದ ಬೆಂಕಿಯನ್ನು ಕಾಣುವಾಗಲೇ ಇದರ ಗೊಣಗು ನಿಲ್ಲುತ್ತದೆ. ಕಪ್ಪೆ ನೀರಿನ ಒಳಗೆ ಇರುವಾಗಲೂ, ನೀರಿನಿಂದ ಸಂಪೂರ್ಣ ಹೊರಗಿರುವಾಗಲೂ ಗೊಣಗುವುದಿಲ್ಲ. ಗೊಣಗುವಾಗ ತನ್ನ ಕೆಳಗಿನ ದವಡೆಯನ್ನು ನೀರಿನಲ್ಲಿ ಮುಳುಗಿಸುತ್ತದೆ.
▪ *ಕಪ್ಪೆಯನ್ನು* ಕೊಲ್ಲುವುದನ್ನು ಇಸ್ಲಾಮ್ ಸಂಪೂರ್ಣವಾಗಿ ನಿಷೇಧಿಸಿದೆ. ಯಾಕೆಂದರೆ ಅದರ ಗೊಣಗು (ಕೂಗು) ಅಲ್ಲಾಹುವಿನಿಗೆ ಅದು ಹೇಳುವ *ತಸ್ಬೀಹ್* ಆಗಿದೆ. ಪ್ರಾಣಿ , ಪಕ್ಷಿ, ಮತ್ತು ಇತರ ಮೂಕ ಜೀವಿಗಳಲ್ಲಿ ಅಲ್ಲಾಹುವಿನಿಗೆ ನಿರಂತರ ಗರಿಷ್ಠ ಪ್ರಮಾಣದಲ್ಲಿ *ತಸ್ಬೀಹ್* ಹೇಳುವ ಈ ಜೀವಿಗೆ ಸಮಾನವಾದ ಜೀವಿ ಬೇರೊಂದಿಲ್ಲ.
▪ *ಒಮ್ಮೆ* ಪ್ರವಾದಿ ದಾವೂದ್ (ಅ) ರು ತನ್ನ ಮನೆಯ ಕೈಸಾಲೆಯಲ್ಲಿ (Balcony) ಏಕಾಂಗಿಯಾಗಿ ಕುಳಿತಿರುವಾಗ ಅವರು ಸ್ವಂತ ಮನದಲ್ಲಿ ಹೇಳಿದರು. *"ನಾನು ಒಂದು ದಿನ ಹೇಳುವ ತಸ್ಬೀಹ್ಗೆ ಸಮಾನವಾಗಿ ನನ್ನಷ್ಷು ತಸ್ಬೀಹ್ ಹೇಳುವವರು ಅಲ್ಲಾಹುವಿನ ಸೃಷ್ಟಿಗಳಲ್ಲಿ ಈ ಪ್ರಪಂಚದಲ್ಲಿ ಬಹುಶಃ ಯಾರೂ ಇರಲಿಕ್ಕಿಲ್ಲ"* ಕೂಡಲೇ ತನ್ನ ಮನೆಯ ಮುಂಭಾಗದಲ್ಲಿ ಹರಿಯುವ ಕಾಲುವೆಯಿಂದ ಒಂದು ಕಪ್ಪೆ ದೊಡ್ಡ ಶಭ್ದದಲ್ಲಿ ಹೇಳಿತು. *"ಓ ಪ್ರವಾದಿ ದಾವೂದರೇ, ನೀವು ಅಲ್ಲಾಹುವಿನಿಗೆ ಹೇಳುವ ತಸ್ಬೀಹ್ ಗೆ ಸಮಾನವಾಗಿ ಬೇರೊಂದು ಇಲ್ಲಾಂತ ಜಂಭ ಕೊಚ್ಚುತ್ತೀರಾ..? ನಾನು ಸುಮಾರು ಎಪ್ಪತ್ತು ವರ್ಷಗಳಿಂದ ಒಂದು ನಿಮಿಷವೂ ಬಿಡದೆ ಅಲ್ಲಾಹುವಿನಿಗೆ "ದ್ಸಿಕ್ರ್" ಹೇಳುತ್ತಿದ್ದೇನೆ ಇತ್ತೀಚಿನ ಹತ್ತು ದಿನಗಳಲ್ಲಿ ಒಂದು ಬಿಂದು ನೀರು ಕೂಡ ಕುಡಿಯದೆ ಒಂದು ಪ್ರತ್ಯೇಕ ದ್ಸಿಕ್ರನ್ನು ಹೇಳುತ್ತದ್ದೇನೆ"* ಆಗ ಪ್ರವಾದಿ ದಾವೂದ್ (ಅ) ಕೇಳಿದರು. *"ಅದು ಯಾವ ದ್ಸಿಕ್ರ್ ಅಂತ ನನಗೆ ಹೇಳಿ ಕೊಡುತ್ತಿಯಾ...?"* ಆಗ ಕಪ್ಪೆ *"ಎಲ್ಲಾ ನಾಲಗೆಗಳಿಂದ ನಿರಂತರ ಎಲ್ಲಾ ಜಾಗಗಳಲ್ಲೂ ಎಲ್ಲರ ಪ್ರಶಂಸೆಗೆ ಮತ್ತು ಸ್ತೋತ್ರಗಳಿಗೆ ಅರ್ಹತೆ ಇರುವ ಅಲ್ಲಾಹನ್ನು ನಾನು ಸ್ಮರಿಸುತ್ತೇನೆ."* ಎಂದು ಅರ್ಥ ಬರುವ ಈ ಕೆಳಗಿನ ದ್ಸಿಕ್ರ್ನ್ನು ಹೇಳಿ ಕೊಟ್ಟಿತು.
*يا مسبحا بكل لسان. ومذكورا بكل مكان.*
▪ *ಕಪ್ಪೆಯ* ಬಾಯಿಯಿಂದ ಬಂದ ಈ ಅರ್ಥವತ್ತಾದ ಝಿಕ್ರನ್ನು ಕೇಳಿದಾಗ ಆಶ್ಚರ್ಯಗೊಂಡ ಪ್ರವಾದಿ ದಾವೂದ್ (ಅ) ರು *"ಇಷ್ಟೊಂದು ಅರ್ಥಭರಿತವಾದ ತಸ್ಬೀಹ್ ನನಗೂ ಕೂಡ ಗೊತ್ತಿಲ್ಲದೆ ಹೋಯಿತಲ್ಲವಾ..?"* ಎಂದು ಅವರ ಮನಸ್ಸಿನಲ್ಲೇ ಹೇಳಿದರು.
ಈ ಘಟನೆಯನ್ನು ಪ್ರಖ್ಯಾತ ವಿದ್ವಾಂಸ ಇಮಾಮ್ *ಅಬ್ದುಲ್ಲಾಹಿ ಬಿನ್ ಖುರ್ತುಬಿ* ಯವರು ತನ್ನ *ಕಿತಾಬು ಅಲ್ ಝಾಹಿರ್* ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ.
▪ *ಅಬ್ದುಲ್ಲಾಹಿ* ಬಿನ್ ಉಸ್ಮಾನ್ ಅಲ್ ತಮೀಮಿ (ರ) ಎಂಬ ಸಹಾಬಿ ಹೇಳುತ್ತಾರೆ. *"ಒಮ್ಮೆ ವೈದ್ಯರಾದ ಒಬ್ಬರು ಪ್ರವಾದಿ ಮುಹಮ್ಮದ್ (ಸ) ರ ಸನ್ನಿಧಿಗೆ ಬಂದು ಕೇಳಿದರು. ಪ್ರವಾದಿಯವರೇ, ನಾನೊಬ್ಬ ವೈದ್ಯ. ಚಿಕಿತ್ಸೆ ಮತ್ತು ಔಷಧಿಗೆ ಬೇಕಾಗಿ ನನಗೆ ಆಗಾಗ್ಗೆ ಕಪ್ಪೆಯ ಅಗತ್ಯ ಬರುತ್ತದೆ. ಆದ್ದರಿಂದ ಕಪ್ಪೆಯನ್ನು ಕೊಲ್ಲಬಹುದೇ...?"* ಕಾರುಣ್ಯದ ಹರಿಕಾರ ಪ್ರವಾದಿ (ಸ) ರವರು ಹೇಳಿದರು. *"ಇಲ್ಲ, ಇಲ್ಲ. ಯಾವ ಕಾರಣಕ್ಕೂ ಕೊಲ್ಲಬಾರದು."*
▪ *ನಮ್ಮಲ್ಲಿ* ಕೆಲವರಿಗೆ ಕಪ್ಪೆಯ ಗೊಣಗು ಕೇಳುವಾಗ ಅಲರ್ಜಿಯಾಗುತ್ತದೆ. ಆಗ ಅವರು ಕಪ್ಪೆಯನ್ನು ಶಪಿಸುವುದು ವಾಡಿಕೆ. ಆದರೆ ಯಾವ ಕಾರಣಕ್ಕೂ ಕಪ್ಪೆಯನ್ನು ಶಪಿಸಬಾರದು. *"ನೀವು ಕಪ್ಪೆ ಗೊಣಗುವಾಗ ಯಾವತ್ತೂ ಅದನ್ನು ನಿಂದನೆ ಅಥವಾ ದೂಶಿಸಬಾರದು. ಯಕೆಂದರೆ ಅದರ ಗೊಣಗು ಅಲ್ಲಾಹನಿಗಿರುವ ತಸ್ಬೀಹ್ ಆಗಿದೆ"* ಎಂದು ಸಹಾಬಿ *ಅಬ್ದುಲ್ಲಾಹಿ ಬಿನ್ ಅಮ್ರ್* (ರ) ಹೇಳಿದ್ದನ್ನು ನಾನು ಕೇಳಿದ್ದಾಗಿ ಸಹಾಬಿಯಾದ *ಅಸ್ಅದ್ ಬಿನ್ ಝುರಾರ* (ರ)ರನ್ನು ಉಲ್ಲೇಖಿಸಿ *ಖತಾದ*(ರ)ವರದಿ ಮಾಡಿದ್ದಾರೆ.
▪ *ಕುರ್ಆನಿನ* "ಹೂದ್" ಅಧ್ಯಾಯದ ಎಳನೇ ಸೂಕ್ತದಲ್ಲಿ ಅಲ್ಲಾಹನು ಹೇಳುತ್ತಾನೆ. *"ಅವನ ಅರ್ಷ್(ಸಿಂಹಾಸನ) ನೀರಿನ ಮೇಲಾಗಿತ್ತು"* ಅಂದರೆ ಅಲ್ಲಾಹನು ಆಕಾಶ, ಭೂಮಿ, ಸೂರ್ಯ, ಚಂದ್ರ, ನಕ್ಷತ್ರ ಇತ್ಯಾದಿಗಳನ್ನು ಸೃಷ್ಟಿಸುವ ಮೊದಲೇ ಅವನ ಸೃಷ್ಟಿಗಳಲ್ಲಿ ಅತಿ ದೊಡ್ಡ ಗಾತ್ರದ ಅವನ *ಅರ್ಷ್* ನ್ನು (ಸಿಂಹಾಸನ) ಸೃಷ್ಟಿಸಿದ್ದ. ಆ ಸಿಂಹಾಸನವನ್ನು ನೀರಿನ ಮೇಲೆ ಇಡಲಾಗಿತ್ತು ಎಂದಾಗಿದೆ ಕುರ್ಆನ್ ವ್ಯಾಖ್ಯಾನಗಾರರ ವ್ಯಾಖ್ಯಾನ. ಗಮನಾರ್ಹ ಸಂಗತಿಯೆಂದರೆ ಆ ಅರ್ಷನ್ನು ಇಡಲಾಗಿದ್ದ ನೀರಿನಲ್ಲೂ ಕಪ್ಪೆಗಳು ಇದ್ದವು ಎಂದು ಕೆಲವು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
▪ *ಅಹಂಕಾರಿ* ನಮ್ರೂದನು ಹಝ್ರತ್ ಇಬ್ರಾಹೀಮ್ (ಅ) ರನ್ನು ಬೆಂಕಿಗೆ ಹಾಕಿದಾಗ ಈ ಸಾಧು ಕಪ್ಪೆಯು ತನ್ನಿಂದಾಗುವಷ್ಟು ನೀರನ್ನು ತನ್ನ ಬಾಯಲ್ಲಿ ತುಂಬಿಸಿ ಆ ಬೆಂಕಿಗೆ ಸುರಿಸುತ್ತಿತ್ತೆಂದು ಕೆಲವು ಉಲಮಾಗಳು ಹೇಳಿದ್ದಾರೆ.
▪ *ಕಪ್ಪೆಯ* ಮಾಂಸವನ್ನು ತಿನ್ನುವುದು ಇಸ್ಲಾಮಿನಲ್ಲಿ ನಿಷಿದ್ದ. ಮಾತ್ರವಲ್ಲ ಇದರ ಮಾಂಸ ತಿಂದ ಕೂಡಲೇ ಅತಿಭೇದಿ (ಜುಲಾಬು) ಶುರುವಾಗುತ್ತದೆ. ಶರೀರದ ಬಣ್ಣ ಬದಲಾಗುತ್ತದೆ. ಮಾನಸಿಕ ಅಸ್ಥಿರತೆ ಉಂಟಾಗುತ್ತದೆ. ಕೆಲವೊಮ್ಮೆ ಮೂರ್ಛೆ ಕೂಡ ಹೋಗುತ್ತದೆ.
▪ *ಇದರ* ಬೇರೊಂದು ವಿಶೇಷತೆಯೆಂದರೆ, ಕಲಬೆರಕೆಯಿಲ್ಲದ ಶುದ್ಧ ಶೇಂದಿ ಅಥವಾ ಸಾರಾಯಿ ಇರುವ ಪಾತ್ರೆಗೆ ಬಿದ್ದರೆ ಕೂಡಲೇ ಸಾಯುತ್ತದೆ. ಬಿದ್ದ ಕೂಡಲೇ ಅದರಿಂದ ತೆಗೆದು ಶುದ್ಧ ಸಿಹಿ ನೀರಿರುವ ಪಾತ್ರೆಗೆ ಹಾಕಿದರೆ ಬದುಕುತ್ತದೆ.
▪ *ಮನೆಯ* ಹತ್ತಿರದ ಕೆರೆ, ಹಳ್ಳ, ಕಾಲುವೆ ಇತ್ಯಾದಿ ಸ್ಥಳಗಳಲ್ಲಿ ರಾತ್ರಿ ಕಪ್ಪೆಯ ಗೊಣಗಿನ ತೊಂದರೆ ಇರುವುದಾದರೆ ಒಂದು ಉರಿಯುತ್ತಿರುವ ದೀಪವನ್ನು ಅಲ್ಲಿ ಅಳವಡಿಸಿದರೆ ನಂತರ ಅದರ ತೊಂದರೆ ಇರಲಾರದು.
▪ *ಒಬ್ಬನಿಗೆ* ಕಪ್ಪೆಯ ಮಾಂಸ ತಿನ್ನುವ ಕನಸು ಬಿದ್ದರೆ ಮುಂದಿನ ಕೆಲವು ದಿನಗಳಲ್ಲಿ ಅವನು ಎನೋ ತೊಂದರೆಗೆ ಒಳಗಾಗುವನು ಎಂಬುದರ ನಿಶಾನೆಯಾಗಿದೆ.
▪ *ಒಬ್ಬನು* ಹಲವಾರು ಕಪ್ಪೆಗಳು ಒಂದು ಜಾಗದಲ್ಲಿ ಕುಳಿತಿರುವುದನ್ನು ಕಂಡರೆ ಆ ಕಂಡ ಜಾಗ ಇರುವ ಊರಿಗೆ ಎನೋ ದೊಡ್ಡ ಅನಾಹುತ ಬರಲಿದೆ ಎಂಬುದರ ಸಂಕೇತವಾಗಿದೆ. ಕಾರಣವೇನೆಂದರೆ, ಪ್ರವಾದಿ ಮೂಸಾ (ಅ) ರ ಜನತೆಗೆ ಅಲ್ಲಾಹನು ಹಲವಾರು ಶಿಕ್ಷೆಗಳನ್ನು ಕೊಟ್ಟಿದ್ದನು. ಅದರಲ್ಲಿ ಒಂದು ಶಿಕ್ಷೆ ಕಪ್ಪೆಯ ಮುಖಾಂತರವಾಗಿತ್ತು ಎಂದು ಕುರ್ಆನ್ ಹೇಳುತ್ತದೆ. ಅವರ ಮನೆಯ ಒಳಗಡೆಯೂ, ಹೊರಗೂ, ಅನ್ನದ ಬಟ್ಟಲಲ್ಲೂ, ಹಾಸಿಗೆಯಲ್ಲೂ, ಕುಡಿಯುವ ನೀರಿನಲ್ಲೂ ಮಾತ್ರವಲ್ಲ ಎಲ್ಲಾ ಕಡೆಗಳಲ್ಲೂ ಕಪ್ಪೆಯನ್ನು ಕಳುಹಿಸಿ ಅಲ್ಲಾಹು ಅವರಿಗೆ ಶಿಕ್ಷೆ ಕೊಟ್ಟಿದ್ದನು.
▪ *ಒಟ್ಟಿನಲ್ಲಿ* ಕಪ್ಪೆಯು ಇಸ್ಲಾಮಿನಲ್ಲಿ ಒಳ್ಳೆಯ ಮಾನ್ಯತೆ ಮತ್ತು ಹಲವಾರು ವಿಶೇಷತೆಗಳಿರುವ ಒಂದು ಜೀವಿಯಾಗಿದೆ.
ಸಂಗ್ರಹ : ಇಮಾಮ್ ದುಮೈರಿಯ *ಹಯಾತುಲ್ ಹಯವಾನ್,* ಇಮಾಮ್ ಅಬ್ಷೀಹಿಯ *ಮುಸ್ತತ್ರಫ್,* ಮತ್ತು ಜಾಹಿಳ್ ರ *ಕಿತಾಬುಲ್ ಹಯವಾನ್* ಎಂಬ ಗ್ರಂಥಗಳು.

Comments