ಶಹೀದ್ ಮಿಲ್ಲತ್ ಟಿಪ್ಪು ಸುಲ್ತಾನ್ (ಖ.ಸಿ)ಮಹಾನ್ ದೇಶಪ್ರೇಮಿ
✍🏻ಹಾರಿಸ್ ಪೆರಿಯಪಾದೆ
ಭಾಗ 5
(ಕೊನೆಯ ಭಾಗ)
ಟಿಪ್ಪು ಸುಲ್ತಾನ್ ನ್ಯಾಯ ಬಾಹಿರರೂ' ನೀತಿ ರಹಿತರೂ ಆದ ಬ್ರಿಟಿಷರೊಡನೆ, ಅಸೋಯೆಗಾರ ದೇಶೀಯ ಅರಸರೊಡನೆ, ಸ್ವಾಮಿ ದ್ರೋಹಿಗಳೆಂಬ ತನ್ನ ಸೇವಕರೊಂದಿಗೆ ಹೋರಾಡಬೇಕಾಗಿ ಬಂತು. ಮರಾಠರಾಗಲೀ, ನಿಜಾಮನಾಗಲಿ ಟಿಪ್ಪುವನ್ನು ಯಾವತ್ತೂ ಪರಿಪೂರ್ಣ ಬೆಂಬಲಿಸಿಲ್ಲ.
ಟಿಪ್ಪುವಿನ ತ್ಯಾಗ ಬಲಿದಾನ ಮರೆಯುವಂತಿಲ್ಲ. ಮೈಸೂರಿಗೆ ಅಭಯ ಕೇಂದ್ರವಾಗಿದ್ದ ತಂಜಾವೂರು, ಮದ್ರಾಸು ಈಗ ಬ್ರಿಟಿಷರ ಕೈಗೊಂಬೆ ಕೇಂದ್ರಗಳಾಗಿ ಮಾರ್ಪಟ್ಟಿದೆ. ಮಹಾರಾಣಿ ಲಕ್ಷ್ಮಿಯವರ ಪ್ರತಿನಿಧಿಗಳಾದ ತಿರುಮಲರಾವ್, ನಾರಾಯಣರಾವ್ ಹಾಗೂ ಟಿಪ್ಪುವಿನ ಪ್ರಧಾನಮಂತ್ರಿ ದಿವಾನ್ ಪೂರ್ಣಯ್ಯ ಇವರುಗಳು ಬ್ರಿಟಿಷರ ಪಾದ ಸೇವಕರಂತೆ ನಡೆದುಕೊಂಡರು. ಮೂವರು ಬ್ರಾಹ್ಮಣರು ಅಧಿಕಾರ ಲಾಲಸೆಗಾಗಿ ಸ್ವಾಮಿ ದ್ರೋಹದ ಕೆಲಸವೆಸಗಿದರು. ಬ್ರಿಟಿಷರು ಶ್ರೀರಂಗ ಪಟ್ಟಣದ ಮೇಲೆ ದಂಡೆತ್ತಿ ಬರಲು ಸಹಕರಿಸಿದರು ಮತ್ತು ಇಡೀ ಭಾರತ ಸಾಮ್ರಾಜ್ಯವನ್ನೇ ಬ್ರಿಟಿಷರ ದಾಸ್ಯಕ್ಕೆ ಒಳಪಡಿಸಿದರು.
ಶ್ರೀರಂಗಪಟ್ಟಣದ ಕೋಟೆಯನ್ನು ಶತ್ರುಗಳು ಮುತ್ತಿ ಆವರಿಸಿದಾಗ ತನ್ನ ಸ್ವಂತ ಅಧಿಕಾರಿಗಳೇ ಸ್ವಾಮಿ ದ್ರೋಹಿಗಳಾಗಿ ಬ್ರಿಟಿಷರು ಕೋಟೆಯೊಳಗೆ ನುಗ್ಗಲು ಅವಕಾಶ ಕಲ್ಪಿಸಿದರು. ಆಗ ಟಿಪ್ಪು ಸುಲ್ತಾನರು "ಅಯ್ಯೋ ತಾವೇನು ಮಾಡಿದ್ದೇವೆಂದು ಈ ದ್ರೋಹಿಗಳಿಗೆ ಅರ್ಥವಾಗುವುದಿಲ್ಲ ಒಂದು ದಿನ ಬರಲಿದೆ ಆಗ ಅವರ ಮಕ್ಕಳು ಮರಿಗಳು ಒಂದು ತುಂಡು ರೊಟ್ಟಿ ಒಂದು ಉಳ್ಳಾಗಡ್ಡೆಗೆ ಸಹ ಗತಿಯಿಲ್ಲದೆ ಉಪವಾಸದಿಂದ ನರಳುತ್ತಾರೆ ಎಂದು ಭವಿಷ್ಯ ನುಡಿದಂತೆ ನುಡಿದರು. ಮುಂದೆ ಹಾಗೆಯೇ ನಡೆಯಿತು.
ಪೇಶ್ವೆ ಬಾಜಿರಾಯನು ಟಿಪ್ಪುವಿಗೆ ನೆರವೀಯದಿದ್ದರೂ ಟಿಪ್ಪು ಸುಲ್ತಾನರು ರಣರಂಗದಲ್ಲಿ ಹುತಾತ್ಮರಾದ ಸುದ್ದಿ ತಿಳಿದಾಗ ದಿಷ್ಮೂಡರಾದರು! ಪೂರ್ವ ಭಾರತವೆಲ್ಲ ಬ್ರಿಟಿಷರ ಕೈ ವಶವಾಯಿತು. ಅವರ ಪ್ರಭುತ್ವ ಬಲ ವೃದ್ಧಿಸಿತು. ಮುಂದಿನ ಬಲಿ ಪುಣೆಯಾಗಲಿದೆ" ಎಂದು ಹೃದಯ ವೇದನೆಯಿಂದ ಅಲವತ್ತುಗೊಂಡಿದ್ದ. ಕೆಲವೇ ವರುಷಗಳಲ್ಲಿ ಮರಾಠರ ಪತನವಾಯಿತು
ಭಾರತ ಸಂಪೂರ್ಣ ಬ್ರಿಟಿಷರ ದಾಸ್ಯಕ್ಕೆ ಈಡಾಯಿತು.
ಮೈಸೂರು ಸಾಮ್ರಾಜ್ಯದಲ್ಲಿ ಊಳಿಗಮಾನ್ಯ ಪದ್ಧತಿಯನ್ನು ಹೊಡೆದೋಡಿಸಿದ ಪ್ರಥಮ ಭೂ ಸುಧಾರಕ ಟಿಪ್ಪು ಸುಲ್ತಾನ್ ಭೂಮಾಲೀಕ ಸವರ್ಣೀಯರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಭಾರತ ದೇಶಕ್ಕಾಗಿ ಹೋರಾಡಿದ ಧೀರ ದೇಶಾಭಿಮಾನಿಯ ದೇಶಪ್ರೇಮ ಇಂದು ಪ್ರಶ್ನಿಸಲ್ಪಡುತ್ತದೆ. ಟಿಪ್ಪುವನ್ನು ಮತಾಂಧನಾಗಿ ಚಿತ್ರಿಸಲು ಹೋಗಿ ಸೋಲೊಪ್ಪುವುದನ್ನು ನಾವು ಕಾಣುತ್ತೇವೆ. ಈ ಇತಿಹಾಸದ ಅತ್ಯಾಚಾರಿಗಳು ಟಿಪ್ಪು-ಹೈದರ್ ಈ ನಾಡಿಗೆ ಸಲ್ಲಿಸಿದ ಸೇವೆ ತ್ಯಾಗ ಬಲಿದಾನ ಗಳಿಗೆ ಋಣ ಸಲ್ಲಿಸದ ಪಾಪಿಷ್ಟ ಪಿಂಡಗಳಾಗಿದ್ದಾರೆ.
*(ಮುಗಿಯಿತು)*
*✍🏻ಹಾರಿಸ್ ಪೆರಿಯಪಾದೆ*
Comments