Skip to main content

ವಿಸ್ಮಯ ತುಂಬಿದ ಜೀವಜಗತ್ತು 👉 *18*



*ಕೂಗುತ್ತಿದೆ ಕೋಳಿ! ಎದ್ದೇಳಿ, ಎದ್ದೇಳಿ!!*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
     ▪ಕೋಳಿ ಸಾಧಾರಣ ಎಲ್ಲರಿಗೂ ಪರಿಚಯವಿರುವ ಒಂದು ಸಾಕುಪಕ್ಷಿ. ನಮ್ಮ ಹಳೆಯ ತಲೆಮಾರಿನ ಎಲ್ಲಾ ಮನೆಗಳಲ್ಲಿಯೂ ಕೋಳಿ ಸಾಕಾಣೆ ಮಾಮೂಲಾಗಿತ್ತು. ಆದರೆ ಕಾಲ ಬದಲಾದಂತೆ ಈಗಿನ ಈ ಆಧುನಿಕ ಯುಗದಲ್ಲಿ ಮನೆಯಲ್ಲಿ ಕೋಳಿ ಸಾಕುವ ರೂಡಿ ಸಂಪೂರ್ಣವಾಗಿ ಅಳಿದು ಹೋಗಿದೆ.
    ▪ಕೋಳಿ ಬಹಳ ಉತ್ಸಾಹಿ ಮತ್ತು ಚುರುಕಾದ ಒಂದು ಪಕ್ಷಿ. ನಾಯಿಯಂತೆ ಈ ಜೀವಿಗೂ ನಿದ್ದೆ ಬಹಳ ಕಡಿಮೆ. ಒಂದು ದಿನದಲ್ಲಿ ಕೆಲವೇ ಕೆಲವು ನಿಮಿಷಗಳ ನಿದ್ದೆ ದೊರೆತರೆ ಇದಕ್ಕೆ ಸಾಕಾಗುತ್ತದೆ. ಹಗಲು ಹೊತ್ತಿನಲ್ಲಿ ತನ್ನ ಹೊಟ್ಟೆಪಾಡಿಗಾಗಿ ಪರದಾಡುತ್ತಿರುವ ಈ ಜೀವಿ ಸಂಜೆಯಾಗುವಾಗ ಮನೆಯತ್ತ ಬಂದು ತನಗೆ ತಯಾರು ಮಾಡಲ್ಪಟ್ಟ ಗೂಡಿನಲ್ಲಿ ವಾಸಿಸುತ್ತದೆ. ಅದಾಗ್ಯೂ ಹುಂಜ ಕೋಳಿಗಳಿಗೆ ರಾತ್ರಿ ಮನೆಯ ಮಾಡಿನ ಮೇಲೆ, ಮರಗಳ ರೆಂಬೆಗಳ ಮೇಲೆ ಅಂತೆಯೇ ಮೇಲು ಛಾವಣಿ ಇಲ್ಲದ ಕಟ್ಟಡಗಳ ಗೋಡೆಯ ಮೇಲೆ ಕೂರುವುದೆಂದರೆ ಬಹಳ ಇಷ್ಟ. ಆದರೆ ಯವತ್ತೂ ಹುಂಜ ಕೋಳಿಯು ಗೂಡಿಲ್ಲದಿದ್ದರೆ ಬರೀ ನೆಲದಲ್ಲಿ ನಿದ್ರಿಸದು.
  ▪ಕೋಳಿಯು ಗರ್ಭಧಾರಣೆಯಾಗಿ ಬರೀ ಹತ್ತೇ ದಿನದಲ್ಲಿ ಮೊಟ್ಟೆಯಿಡಲು ಶುರುಮಾಡುತ್ತದೆ. ಒಂದು ದಿನದಲ್ಲಿ ಒಂದೇ ಮೊಟ್ಟೆಯಿಡುವುದಾದರೂ ಕೆಲವು ಕೋಳಿಗಳು ಎರಡು ಮೊಟ್ಟೆಯಿಡುತ್ತದೆ. ಇಪ್ಪತ್ತೊಂದು ದಿನಗಳ ಕಾವು ಕೊಡುವಿಕೆಯ ನಂತರ ಹೊರಬರುವ ಮರಿಯು ಬಹಳ ಕೋಮಲ ಮತ್ತು ಮುದ್ದಾಗಿರುತ್ತದೆ. ದಿನಗಳುರುಳಿದಂತೆ ಆ ಕೋಮಲತೆ ಕಡಿಮೆಯಾಗಿ ಸಾಧಾರಣ ರೂಪಕ್ಕೆ ಬರುತ್ತದೆ. ಮಾತ್ರವಲ್ಲ ಹುಟ್ಟಿದ ಕೂಡಲೇ ತನ್ನ ಹೊಟ್ಟೆಪಾಡಿಗೆ ಬೇಕಾದ ಕಸುಬನ್ನು ಕೂಡ ಮಾಡತೊಡಗುತ್ತದೆ.
▪ ಮೊಟ್ಟೆಯಿಂದ ಹೊರಬರುವ ಕೋಳಿಮರಿಯು ತನಗೆ ಜನ್ಮಕೊಟ್ಟ ತನ್ನ ತಾಯಿಯತ್ತ ನೋಡುವುದಿಲ್ಲ. ಈ ಜಗತ್ತಿಗೆ ಕಾಲಿಟ್ಟ ಕೂಡಲೇ ಮೊದಲು ಮಾಡುವ ಕೆಲಸವೇನೆಂದರೆ, ತನ್ನ ಕೊಕ್ಕಿನಿಂದ ಭೂಮಿಯ ಮೆಲೆ ಕುಟ್ಟಿ ತನ್ನ ಸೃಷ್ಟಿಕರ್ತನಾದ ಅಲ್ಲಾಹನು ತನ್ನ ಹಣೆಬರಹದಲ್ಲಿ ತನಗೆ ನಿರ್ಣಯಿಸಿಟ್ಟ ಆಹಾರವನ್ನು ಹುಡುಕುವುದಾಗಿದೆ. ಅದಾಗ್ಯೂ ದನದ ಕರುವೊಂದು ಹುಟ್ಟಿ ಭೂಮಿಗೆ ಬಂದ ಕೂಡಲೇ ಹುಲ್ಲು ಮೇಯಲಿರುವ ಬಯಲನ್ನು‌ ಹುಡುಕಿ ಹೋಗುವುದಿಲ್ಲ. ಕರುವಿನ ತಲೆಯು ಕೋಳಿಮರಿಯಂತೆ ಕೆಳಗೆ ವಾಲದೆ ನೇರವಾಗಿ ತನ್ನ ಆಹಾರವಿರುವ ತಾಯಿಯ ಕೆಚ್ಚಲಿನ ಭಾಗಕ್ಕೆ ತಿರುಗುತ್ತದೆ. ಈ ವಿದ್ಯೆ ಈ ಮೂಖ ಪ್ರಾಣಿಗಳಿಗೆ ಯಾವುದೇ ತರಬೇತಿ ಅಥವಾ ತಾಲೀಮು ಮುಖಾಂತರ ಸಿಗುವುದಲ್ಲ. ವಿಸ್ಮಯ ತುಂಬಿದ ಜೀವಜಗತ್ತಿನ ಒಡೆಯನಾದ ಅಲ್ಲಾಹುನಿಂದ ನೇರವಾಗಿ ದೊರೆಯುವ ವಿದ್ಯೆ.
    ▪ಕೋಳಿಯ ಮೊಟ್ಟೆಯೊಳಗೆ ಬಿಳಿ ಮತ್ತು ಹಳದಿ ಬಣ್ಣದಲ್ಲಿ ಎರಡು ದ್ರಾವಣವಿರುತ್ತದೆ. ಬಿಳಿ ದ್ರಾವಣದಿಂದ ಅಲ್ಲಾಹನು ಕೋಳಿಮರಿಯನ್ನು ಸೃಷ್ಟಿಸಿದ ನಂತರ ಕವಚದಂತಿರುವ ಮೊಟ್ಟೆಯೊಳಗೆ ಜೀವವಿರುವ ಕೋಳಿಮರಿಯು ಮೊಟ್ಟೆಯೊಡೆದು ಹೊರಬರುವ ತನಕ ಗರ್ಭದಲ್ಲಿರುವ ಶಿಶುವಿಗೆ ಋತುರಕ್ತವನ್ನು ಹಾಲು ಆಗಿ ಮಾರ್ಪಡಿಸಿ ಮಗುವಿನ ಹೊಕ್ಕುಳಿನ ಮುಖಾಂತರ ಆಹಾರವಾಗಿ ಕೊಡುವಂತೆ ಈ ಹಳದಿ ಪದಾರ್ಥವನ್ನು ಈ ಕೋಳಿಮರಿಗೆ ಆಹಾರವಾಗಿ ಕೊಡುತ್ತಾನೆ.
▪ವರ್ಷದ ಎಲ್ಲಾ ಸಮಯದಲ್ಲಿಯೂ ಕೋಳಿಯು ಮೊಟ್ಟೆ ಇಡುವುದಾದರೂ ಚಳಿಗಾಲದ ಎರಡು-ಮೂರು ತಿಂಗಳಲ್ಲಿ ಮೊಟ್ಟೆಯಿಡುವುದಿಲ್ಲ. ಒಂದು ಕೋಳಿ ಇಡುವ ಮೊಟ್ಟೆಗಳು ಎಲ್ಲವೂ ಒಂದೇ ಆಕಾರವಾಗಿರುವುದಿಲ್ಲ. ಮೊಟ್ಟೆಯು ಆಕಾರದಲ್ಲಿ ಉದ್ದ ಜಾಸ್ತಿಯಾಗಿದ್ದರೆ ಆ ಮೊಟ್ಟೆಯಿಂದ ಹೊರಬರುವ ಮರಿಯು ಹೆಣ್ಣಾಗಿರುತ್ತದೆ. ಮೊಟ್ಟೆಯು ಉದ್ದ ಕಡಿಮೆಯಾಗಿ ಗುಂಡಾಗಿದ್ದರೆ ಅದರಲ್ಲಿ ಹುಟ್ಟುವ ಮರಿಯು ಗಂಡಾಗಿರುವುದು. ಹೇಂಟೆ ಕೋಳಿಗೆ ಪ್ರಾಯವಾದಾಗ ಇಡುವ ಮೊಟ್ಟೆಯಲ್ಲಿ ಒಳಗಿನ ಹಳದಿ ದ್ರಾವಣ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಅಂತಹಾ ಮೊಟ್ಟೆಯಲ್ಲಿ ಮರಿಯಾಗುವುದಿಲ್ಲ.
   ▪ಸುಮಾರು ಹತ್ತು-ಹನ್ನೆರಡು ವರ್ಷಗಳ ತನಕ ಬದುಕುವ ಈ ಹೊಟ್ಟೆಬಾಕನಿಗೆ ಎಷ್ಟು ತಿಂದರೂ ಸಾಕಾಗುವುದಿಲ್ಲ. ಬೆಳಗಿನಿಂದ ಸೂರ್ಯಾಸ್ತಮಾನದ ತನಕ ತಿನ್ನುತ್ತಲೇ ಇರುತ್ತದೆ. ತಿನ್ನುವುದರಲ್ಲಿ ಮತ್ತು ಲೈಂಗಿಕ ಕ್ರಿಯೆಯಲ್ಲಿ ಇದಕ್ಕೆ ಯಾವ ಪ್ರಶಸ್ತಿಯನ್ನು ಕೊಟ್ಟರೂ ಸಾಲದು. ಒಂದು ಮನೆಯಲ್ಲಿ ಮೂರು-ನಾಲ್ಕು ಹುಂಜ ಕೋಳಿಗಳಿದ್ದಿರೆ ಹತ್ತಿರದ ಮನೆಯಿಂದ ದಾರಿತಪ್ಪಿ ಆ ಮನೆಗೆ ಒಂದು ಹೇಂಟೆ ಬಂದರೆ ಬಂದ ಹೇಂಟೆಯನ್ನು ಈ ಎಲ್ಲಾ ಹುಂಜಗಳು ಸೇರಿ ಸಾಲಾಗಿ ಒಂದರ ಹಿಂದಿನಿಂದ ಒಂದೊಂದಾಗಿ ಕ್ಯೂ ನಿಂತು ತಮ್ಮ ಲೈಂಗಿಕ ಚಟುವಟಿಕೆಗೆ ಬಳಸುತ್ತದೆ.
  ▪ ಕೆಲವರು ಹುಂಜ ಕೋಳಿಯನ್ನು ಮಾಂಸ ಜಾಸ್ತಿ ಸಿಗಲಿಕ್ಕಾಗಿ ಅದರ ಬೀಜ ಒಡೆಯುವುದುಂಟು. (Castration) ಇಸ್ಲಾಮಿನಲ್ಲಿ ಕೋಳಿ ಸಮೇತ ಯಾವುದೇ ಜೀವಿಯ ಬೀಜ ಒಡೆದು ನಿರ್ವೀರ್ಯ ಮಾಡುವುದು ನಿಷಿದ್ಧವಾಗಿದೆ. ಹುಂಜ ಕೋಳಿಗಳನ್ನು ಪರಸ್ಪರ ಜಗಳವಾಡಿಸುವುದನ್ನು (ಕೋಳಿಕಟ್ಟ) ಮತ್ತು ಬೀಜ ಒಡೆಯುವುದನ್ನು ಪ್ರವಾದಿ ಮುಹಮ್ಮದ್ (ಸ) ರು ವಿರೋಧಿಸಿದ್ದಾರೆ.
    ▪ಕೋಳಿಗೆ ನರಿಯಲ್ಲದ ಬೇರೆ ಯಾವ ವನ್ಯಜೀವಿಯ ಭಯವೂ ಇಲ್ಲ. ಆದರೆ ನರಿಯ ಹೆಸರು ಕೇಳಿದರೆ ಬೆಚ್ಚಿಬೀಳುವ  ಕೋಳಿ, ನರಿಯನ್ನು ಮುಖಾಮುಖಿ ಕಂಡರೆ ಅಥವಾ ಕೋಳಿಯೊಂದು ಮರದ ರೆಂಬೆಯ ಮೇಲಿದ್ದು ನರಿ ಆ ಮರದ ಕೆಳಗಿನಿಂದ ಆ ದಾರಿಯಾಗಿ ಹೋಗುವುದಾದರೆ ಇನ್ನು ಬಚಾವು ಆಗುವುದು ಕಷ್ಟವೆಂದು ತಿಳಿದು ತಾನಾಗಿಯೇ ನರಿಯತ್ತ ಹಾರಿ ತನ್ನ ಜೀವವನ್ನು ಬಲಿ ಕೊಡುತ್ತದೆ.
    ▪ ಹುಂಜ ಕೋಳಿಯನ್ನು ಯಾವತ್ತೂ ದೂಷಿಸಬಾರದು. ಅಂತೆಯೇ ಶಪಿಸುವುದನ್ನೂ ಪ್ರವಾದಿ ಮುಹಮ್ಮದ್ (ಸ) ರು ವಿರೋಧಿಸಿದ್ದಾರೆ.  *"ನೀವು ಹುಂಜ ಕೋಳಿಯ ಕೂಗು ಕೇಳಿದರೆ ಅಲ್ಲಾಹನಲ್ಲಿ ಅವನ ಅನುಗ್ರಹವನ್ನು ಬೇಡಿರಿ. ಯಾಕೆಂದರೆ, ಆ ಕೋಳಿ ಯಾವುದೋ ಮಲಕನ್ನು ಕಂಡಿರಬೇಕು. ಇನ್ನು ಕತ್ತೆ ಕಿರುಚುವುದನ್ನು ಕೇಳಿದರೆ ನೀವು ಅಲ್ಲಾಹನಲ್ಲಿ ಶೈತಾನನಿಂದ ಕಾವಲನ್ನು ಕೇಳಿರಿ. ಯಾಕೆಂದರೆ, ಅದು ಯಾವುದೋ ಶೈತಾನನ್ನು ಕಂಡಿರಬೇಕು."* ಎಂಬ ಪ್ರವಾದಿಯವರ ಹದೀಸನ್ನು ಇಮಾಮ್ ಬುಖಾರಿ ಮತ್ತು ಮುಸ್ಲಿಮ್ ವರದಿ ಮಾಡಿದ್ದಾರೆ.
    ▪ ಹುಂಜ ಕೋಳಿ ಮಲಕನ್ನು ಕಂಡ ಕಾರಣದಿಂದ ಕೂಗುವಾಗ ನೀವು ಅಲ್ಲಾಹುವಿನಲ್ಲಿ ಅವನ ಅನುಗ್ರಹವನ್ನು ಬೇಡಿರೆಂದು ಪ್ರವಾದಿಯವರು ಹೇಳಿದರ ಕಾರಣವೇನು..? ಪ್ರಖ್ಯಾತ ಪಂಡಿತ *ಖಾಝೀ ಇಯಾಳ್* (ರ)ರು ಹೇಳುವುದೇನೆಂದರೆ, ಹುಂಜ ಕೂಗಿದ್ದು ಮಲಕನ್ನು ಕಂಡು ಎಂದಾದರೆ ಅಲ್ಲಿ ಮಲಕುಗಳ ಹಾಜರಾತಿ ಖಚಿತವಾದ್ದರಿಂದ ನೀವು ಪ್ರಾರ್ಥಿಸುವ ಪ್ರಾರ್ಥನೆಗೆ ಅವರು *ಆಮೀನ್* ಹೇಳುತ್ತಾರೆ. ಆಗ ಅದು ಉತ್ತರ ದೊರಕುವ ಪ್ರಾರ್ಥನೆಯಾಗುತ್ತದೆ. ಅಂತೆಯೇ ಕತ್ತೆಯ ಕಿರುಚು ಶೈತಾನನನ್ನು ಕಂಡು ಎಂದಾದರೆ ಅಲ್ಲಿ ಶೈತಾನನ ಹಾಜರಾತಿ ಇರುವುದರಿಂದ ಅವನಿಂದ ಕಾವಲು ಕೇಳುವುದು ಅನಿವಾರ್ಯವಾಗುತ್ತದೆ. ಮಾತ್ರವಲ್ಲ ಅದು ಪಿಶಾಚಿಗೆ ಇಷ್ಟವಿಲ್ಲದ ಒಂದು ಸಂಗತಿ ಕೂಡ ಹೌದು.
    ▪ಒಮ್ಮೆ ಪ್ರವಾದಿ ಮುಹಮ್ಮದ್ (ಸ) ಮತ್ತು ಕೆಲವು ಸಹಾಬಿಗಳು ಒಂದು ಕಡೆ ಕುಳಿತಿರುವಾಗ ಅಲ್ಲಿಗೆ ಬಂದ ಒಂದು ಹುಂಜ  ಬಹಳ ಶಬ್ದದಿಂದ ಕೂಗಿತು. ಕೂಗು ಕೇಳಿದಾಗ ಸಭಿಕರಲ್ಲಿ ಕೆಲವು ಸಹಾಬಿಗಳು ಅದನ್ನು ಶಪಿಸಿದರು. ಇದನ್ನು ಕೇಳಿದ ಪ್ರವಾದಿಯವರು ಹೇಳಿದರು. *"ನೀವು ಯಾವತ್ತೂ ಹುಂಜ ಕೋಳಿಯು ಕೂಗುವಾಗ ಅದನ್ನು ಶಪಿಸಬಾರದು. ಕಾರಣವೇನೆಂದರೆ, ಅದು ಕೂಗುವುದಲ್ಲ. ಹೊರತು ನಮಾಝಿಗೆ  ಅಝಾನ್ ಕರೆಯುವುದಾಗಿದೆ."*
   ▪ *"ಹುಂಜ ಕೋಳಿಯ ಕೂಗು ನಿಮಗೆ ಕೇಳಿದರೆ ನೀವು ಅಲ್ಲಾಹನನ್ನು ಸ್ಮರಿಸಿರಿ. ಯಾಕೆಂದರೆ, ಅದು ಕೂಗುವುದು ಸಾಧಾರಣ ಕೂಗಲ್ಲ. ಅಲ್ಲಾಹುವಿನ ಸಿಂಹಾಸನದ (ಅರ್‌ಷ್) ಕೆಳಗಿರುವ ಒಂದು ಕೋಳಿಯು ಕೂಗುವಾಗ ಆ ಕೂಗು ಈ ಕೋಳಿಗೆ ಕೇಳಿದ ಕಾರಣದಿಂದಾಗಿದೆ"* ಎಂದು ಸಹೀಹಾದ ಬೇರೊಂದು ಹದೀಸಿನಲ್ಲಿ ವರದಿಯಾಗಿದೆ.
*▪ಕೋಳಿ ಸಾಕಿಯಾದರೂ ಹಣ ಮಾಡಿ!▪*
    ▪ಮಧ್ಯರಾತ್ರಿ ಸಮಯದಲ್ಲಿ ಅಲ್ಲಾಹುವಿನಿಗೆ *ಝಿಕ್‌ರ್* ಹೇಳುವುದರಲ್ಲಿ ಹುಂಜ ಕೋಳಿಗೆ ಸಮಾನವಾದ ಮೂಕಜೀವಿ ಬೇರೆಯಿಲ್ಲ. ಕೆಲವು ಹುಂಜ ಕೋಳಿಗಳು ಸಹರಿ ಮತ್ತು ಫಜ್‌ರಿನ ಸಮಯದಲ್ಲಿ ಒಂದು ದಿನವೂ ಚಾಚೂ ತಪ್ಪದೆ ಸರಿಯಾದ ಸಮಯದಲ್ಲಿ ಕೂಗುತ್ತಿರುತ್ತದೆ. ಮಾತ್ರವಲ್ಲ, ರಾತ್ರಿಯ ಕಾಲಾವಧಿ ದೀರ್ಘವಾಗುವ ಮತ್ತು ಕಡಿಮೆಯಾಗುವ‌ ಸಂದರ್ಭಗಳಲ್ಲಿ ಅದಕ್ಕೆ ಅನುಸಾರವಾಗಿ ತನ್ನ ಕೂಗಿನ ಸಮಯವನ್ನೂ ಬದಲಾವಣೆ ಮಾಡುತ್ತದೆ. ಅಲ್ಲದೆ ಮತ್ತೆ ಕೆಲವು ಹುಂಜ ಕೋಳಿಗಳು ತಹಜ್ಜುದಿನ ಮತ್ತು ಫಜ್‌ರಿನ ಎರಡು ಕೂಗನ್ನು ನಿದ್ದೆಯಲ್ಲಿರುವವನಿಗೆ ತಹಜ್ಜುದ್ ಅಥವಾ ಫಜ್‌ರೋ ಎಂದು ತಿಳಿಯದೆ ಗಲಿಬಿಲಿಯಾಗದಿರಲೆಂದು ಎರಡು ತರಹದ ಶಬ್ದದಲ್ಲಿ ಕೂಗುತ್ತದೆ. ಇಂತಹಾ ನಂಬಲರ್ಹವಾದ ಕೋಳಿಯ ಕೂಗನ್ನು ಅವಲಂಬಿಸಿ ನಮಾಝಿನ ಸಮಯ ಕೂಡ ದೃಢಪಡಿಸಬಹುದೆಂದು ಇಮಾಮ್ *ರಾಫಿಯೀ* (ರ) ಮತ್ತು ಇಮಾಮ್ *ಖಾಝೀ ಹುಸೈನ್* (ರ) ರಂತಹಾ ಕರ್ಮಶಾಸ್ತ್ರ  ಪಂಡಿತರು ಫತ್ವಾ ಕೊಟ್ಟಿದ್ದಾರೆ.
   ▪ಕೋಳಿಯಲ್ಲಿ ಈ ಒಂದು ಸ್ವಭಾವ ಬಿಟ್ಟರೆ ಬೇರೆ ಯಾವುದೇ ಉತ್ತಮ ಗುಣ ನಡತೆಯಿಲ್ಲ. ಸಾಕು ಪಕ್ಷಿಯಾದ ಈ ಜೀವಿ ಒಂದು ಮನೆಯಲ್ಲಿ ಹುಟ್ಟಿದಂದಿನಿಂದ ಸಾಯುವ ತನಕ ಅಂದರೆ ಸುಮಾರು ಹತ್ತು-ಹನ್ನೆರಡು ವರ್ಷ ವಾಸವಿದ್ದರೂ ಈ ಪಕ್ಷಿಗೆ ಆ ಮನೆಯ ಯಜಮಾನನ ಅಥವಾ ಮನೆಯ ಇತರ ಸದಸ್ಯರ ಪರಿಚಯವಿರುವುದಿಲ್ಲ. ಸಾಕುನಾಯಿ ಅಥವಾ ಸಾಕು ಬೆಕ್ಕೊಂದು ಮನೆಯಲ್ಲಿದ್ದರೆ ಮನೆ ಯಜಮಾನನಿಗೆ ಕೊಡಬೇಕಾದ ಎಲ್ಲಾ ಗೌರವವನ್ನು ಕೊಡುತ್ತದೆ. ಮನೆಯಿಂದ ಎಷ್ಟು ದೂರ ಯಾವ ಜಾಗದಲ್ಲಿ ಕೊಂಡು ಹೋಗಿ ಬಿಟ್ಟರೂ ತನ್ನ ವಾಸ ಸ್ಥಾನವನ್ನು ಹುಡುಕಿ ಬರುತ್ತದೆ. ಕಾಡಿನಿಂದ ಹಿಡಿದು ತಂದ ಪ್ರಾಣಿಯೊಂದನ್ನು ಮನೆಯಲ್ಲಿ ಸಾಕಿ ಒಂದು ವರ್ಷ ‌ಪೂರ್ತಿಯಾಗುವ ಮೊದಲೇ ಅದಕ್ಕೆ ಮನೆಯವರ ಪರಿಚಯವಾಗುತ್ತದೆ. ಮಾತ್ರವಲ್ಲ ಈ ಪ್ರಾಣಿಗಳನ್ನೆಲ್ಲಾ ಒಂದು ನಾಮಕರಣಮಾಡಿ ಕರೆದರೆ ಆ ಕರೆಗೆ ಓಗೊಡುತ್ತದೆ. ಆದರೆ ಕೋಳಿಯೊಂದಕ್ಕೆ ನಾಮಕರಣ ಮಾಡಿ ಕರೆದ ಬಗ್ಗೆ ಇತಿಹಾಸದಲ್ಲಿ ಎಲ್ಲೂ ಪುರಾವೆಯಿಲ್ಲ. ಬರೇ ತಿನ್ನಲಿಕ್ಕೂ ತನ್ನನ್ನು ಇತರರಿಗೆ ತಿನ್ನಿಸಲಿಕ್ಕೂ ಇರುವ ಒಂದು ಜೀವಿಯಿದು. ದಿನಾಲೂ ತಿನ್ನಲು ಧಾನ್ಯಗಳನ್ನು ಹಾಕಿಕೊಡುವ ಮನೆ ಮಾಲಿಕನನ್ನು ಕಾಣುವಾಗಲೂ ಇದಕ್ಕೆ ಯಾವುದೇ ಭಾವ ವ್ಯತ್ಯಾಸವಿಲ್ಲ‌.
▪ ಯಾವತ್ತೂ ಮನೆ ಪರಿಸರ ಬಿಟ್ಟು ಹೋಗದ ಈ ಪಕ್ಷಿ ಅಪ್ಪಿ ತಪ್ಪಿ ಎಲ್ಲಾದರು ಹೋದರೆ ಸಂಜೆಯಾಗುವಾಗ ಗೂಡಿಗೆ ಬರಲಾಗದೆ ಅಲ್ಲೇ ಬಾಕಿಯಾಗುತ್ತದೆ. ಒಂದು ಊರಿನಿಂದ ಒಂದು ಆಡನ್ನು ಖರೀದಿ ಮಾಡಿ ನಮ್ಮ ಮನೆಗೆ ತಂದರೆ ಆ ಅಡಿಗೂ ತನ್ನ ಮೊದಲಿನ ಊರು, ಮಾಲಿಕ, ಮನೆ, ಪರಿಸರದ ಬಗ್ಗೆ ನೆನಪಿರುತ್ತದೆ. ಆ ಕಾರಣದಿಂದ ಅದು ಬಂದ ಪ್ರಾರಂಭದ ದಿನಗಳಲ್ಲಿ ಚೆನ್ನಾಗಿ ಆಹಾರ ಸೇವನೆ ಮಾಡುವುದಿಲ್ಲ. ಆದರೆ ಕೋಳಿಗೆ ಅಂತಹಾ ಯಾವುದೇ ಗುಣ ನಡತೆಯಿಲ್ಲ. ಯಾವ ಊರಿಗೆ ಕೊಂಡು ಹೋಗಿ ಬಿಟ್ಟರೂ ಯಾವುದೇ ಬದಲಾವಣೆಯಿಲ್ಲ. ಬಹಳ ಅತ್ಯಾಶೆಯಿರುವ ಈ ಜೀವಿಗೆ ಒಂದು ಶಿಸ್ತು ಬದ್ಧವಾದ ಕೌಟುಂಬಿಕ ಜೀವನ ಕೂಡ ಇಲ್ಲ. 
   ▪ಪ್ರಖ್ಯಾತ ತಾಬಿಯೀಶ್ರೇಷ್ಠ, ಉಮ್ಮುಲ್ ಮುಅ್‌ಮಿನೀನ್ ಬೀವಿ ಆಯಿಶಾ (ರ) ಸಮೇತ ಹಲವಾರು ಗಣ್ಯ ಸಹಾಬಿಗಳ ಶಿಷ್ಯನಾದ   ಇಮಾಮ್ *ಸಯೀದ್ ಬಿನ್ ಜುಬೈರ್* (ರ) ರ ಮನೆಯಲ್ಲಿ ಒಂದು ಹುಂಜ ಕೋಳಿಯಿತ್ತು. ಇಮಾಮರು ರಾತ್ರಿಯ ತಹಜ್ಜುದ್ ಮತ್ತು ಬೆಳಗಿನ ಫಜ್‌‌ರ್ ನಮಾಝ್ ಮಾಡುತ್ತಿದ್ದದ್ದು ಆ ಕೋಳಿಯ ಕೂಗನ್ನು ಅವಲಂಬಿಸಿಯಾಗಿತ್ತು. ಡಿಜಿಟಲ್  ಗಡಿಯಾರದ ಅಲರಾಮಿನಂತೆ ತಹಜ್ಜುದಿನ ಮತ್ತು ಫಜ‌್‌ರ್ ನಮಾಝಿನ ಸಮಯವಾಗುವಾಗ ಆ ಕೋಳಿ ನಿತ್ಯವೂ ಸರಿಯಾಗಿ ಕೂಗುತ್ತಿತ್ತು. ಆದರೆ ಒಂದು ದಿನ ಏನೋ ಆ ಕೋಳಿಯ ಕಷ್ಟಕಾಲಕ್ಕೆ ಕೂಗಲಿಲ್ಲ. ಆ ಕಾರಣದಿಂದ *ಸಯೀದ್ ಬಿನ್ ಜುಬೈರ್* (ರ) ರಿಗೆ ಆ ರಾತ್ರಿ ನಮಾಝು ಮಾಡಲು ಸಾಧ್ಯವಾಗದೆ ಹೋಯಿತು. ಕೂಡಲೇ  ಅಲ್ಲಾಮಾ ಸಯೀದ್ ಬಿನ್ ಜುಬೈರ್ (ರ) ರು ಕೋಪ ತಡೆಯಲಾಗದೆ ಕೋಳಿಗೆ ಸನ್ನೆ ಮಾಡಿ ಹೇಳಿದರು. *"ನನ್ನ ನಮಝ್‌ ನಿರ್ವಹಣೆಗೆ ಅಡ್ಡಿಯಾದ ಈ ಕೋಳಿಯ ಕೂಗು ಇನ್ನು ಮುಂದಕ್ಕೆ ನನಗೆ ಕೇಳದಿರಲಿ. ಅಲ್ಲಾಹನು ಇದರ ಕೂಗನ್ನು ಈ ದಿನವೇ ಮುಕ್ತಾಯ ಮಾಡಲಿ.*"
   ▪ಸುಬ್‌ಹಾನಲ್ಲಾಹ್.. ನಂತರ ಸಾಯುವ ತನಕ ಆ ಕೋಳಿ ಒಮ್ಮೆಯೂ ಕೂಗಲಿಲ್ಲ..! ಇದನ್ನು ಮನಗಂಡ ಅವರ ತಾಯಿ ಅವರಲ್ಲಿ ಹೇಳಿದರು. *"ನನ್ನ ಕಂದಾ..., ನೀನು ಮುಂದಕ್ಕೆ ಯಾರಿಗೂ ವಿರುದ್ಧವಾಗಿ ದುಆ ಮಾಡಬಾರದು. ಅಲ್ಲಾಹನು ನಿನ್ನ ದುಆಕ್ಕೆ ತತ್ಕ್ಷಣವೇ ಉತ್ತರ ಕೊಡುತ್ತಾನೆ"*
    ▪ ಹಿಜ್‌ರಾ ವರ್ಷ ನಲುವತ್ತಾರರಲ್ಲಿ ಹುಟ್ಟಿ ತೊಂಬತ್ತ ಐದರಲ್ಲಿ  (46-95) ವಫಾತಾದ ಈ ತಾಬಿಈಶ್ರೇಷ್ಠ ಉಮವಿಯ್ಯ ಆಡಳಿತದ ಖಲೀಫನಾಗಿದ್ದ *ಹಜ್ಜಾಜ್ ಬಿನ್ ಯೂಸುಫ್* ಎಂಬ ದುಷ್ಟ ಮುಸ್ಲಿಮ್ ಆಡಳಿತಾಧಿಕಾರಿಯ ಇಂಗಿತಕ್ಕೆ ತಕ್ಕಂತೆ ಕುಣಿಯದಾಗ ಇವರ ತಲೆ ಕಡಿದು ಕೊಂದನು. ಶರೀರದಿಂದ ಬೇರ್ಪಟ್ಟ ತಲೆಯು ನೆಲದಲ್ಲಿ ಉರುಳುತ್ತಿರುವಾಗಲೂ ಆ ಬಾಯಿಯಿಂದ *ಲಾ ಇಲಾಹ ಇಲ್ಲಲ್ಲಾಹ್* ಎಂಬ ಪವಿತ್ರ ದ್ವನಿ ಮೊಳಗುತ್ತಿತ್ತು.!
   ▪ *ಪವಿತ್ರ ಕುರ್‌ಆನ್ ಓದುವವನ ಮಧುರಕಂಠ ಶಬ್ದ , ಮಧ್ಯರಾತ್ರಿ ಅಲ್ಲಾಹುವಿನಲ್ಲಿ ಭಯಭಕ್ತಿಯಿಂದ ಪ್ರಾರ್ಥಿಸುವವನ ಶಬ್ದ , ಅಂತೆಯೇ ಹುಂಜ ಕೋಳಿಯ ಶಬ್ದ* ಈ ಮೂರು ಶಬ್ದಗಳು ಅಲ್ಲಾಹುವಿನಿಗೆ ಬಹಳ ಇಷ್ವ ಎಂಬ ಪ್ರವಾದಿವರ್ಯರು ಹೇಳಿದ ಹದೀಸನ್ನು ಸಹಾಬಿ ವನಿತೆ *ಉಮ್ಮು ಸ‌ಅ್‌ದ್ ಬಿಂತ್ ಝಯಿ‌ದ್ ಬಿನ್ ಸಾಬಿತ್* (ರ) ರಿಂದ ಇಮಾಮ್ ದೈಲಮೀ (ರ) ವರದಿ ಮಾಡಿದ್ದಾರೆ.
  ▪ *"ಜುಟ್ಟಿರುವ ಬಿಳಿ ಬಣ್ಣದ ಹುಂಜ ಕೋಳಿ ನನ್ನ ಮಿತ್ರ. ಅಂತೆಯೇ ನನ್ನ ಮಿತ್ರ ಜಿ‌ಬ್‌ರೀಲ್ (ಅ) ರ ಮಿತ್ರ. ಮತ್ತು ಶೈತಾನನ ಶತ್ರು."* ಎಂದು ಪ್ರವಾದಿ (ಸ) ರು ಹೇಳಿದ್ದಾಗಿ ಸಹಾಬಿ ಅನಸ್ (ರ) ರಿಂದ ಕೆಲವು ಹದೀಸ್ ವರದಿಗಾರರು ವರದಿ ಮಾಡಿದ್ದಾರೆ.
  ▪ ಪ್ರವಾದಿವರ್ಯರ ಬಳಿ ಒಂದು ಬಿಳಿ ಬಣ್ಣದ ಹುಂಜ ಕೋಳಿ ಇತ್ತು. ಅದನ್ನು ಅವರು ಬಹಳ ಆಸಕ್ತಿಯಿಂದ ಸಾಕಣೆ ಮಾಡುತ್ತಿದ್ದರು. ಆ ಕೋಳಿ ಪ್ರವಾದಿಯವರ ಮನೆ ಮತ್ತು ಮಸೀದಿ ಪರಿಸರದಲ್ಲಿ ಸುತ್ತಾಡುತ್ತಿತ್ತು. ಅಂತೆಯೇ ಸಹಾಬಿಗಳೂ ಕೂಡ ಹುಂಜ ಕೋಳಿಯನ್ನು ಸಾಕುತ್ತಿದ್ದರೆಂದೂ ಮಾತ್ರವಲ್ಲ ದೂರದ ಊರುಗಳಿಗೆ ಪ್ರಯಾಣ ಮಾಡುವಾಗ ನಮಾಝಿನ ಸಮಯ ನಿರ್ಣಯಿಸಲು ಹುಂಜ ಕೋಳಿಯನ್ನು ತಮ್ಮೊಂದಿಗೆ ಕೊಂಡು ಹೋಗುತ್ತಿದ್ದರೆಂದೂ ಇಮಾಮ್ *ಮುಹಮ್ಮದ್ ಬಿನ್ ಜರೀರ್ ಅಲ್ ತಿಬ್‌ರೀ* (ರ) ವರದಿ ಮಾಡಿದ್ದಾರೆ.
   ▪ದೊಡ್ಡ ಜುಟ್ಟಿರುವ ಬಿಳಿ ಹುಂಜವು ಮನೆಗೆ ಐಶ್ವರ್ಯವೆಂದೂ (ಬರ್‌ಕತ್) ಆಧ್ಯಾತ್ಮಿಕ ಚಿಕಿತ್ಸಾ ಪಂಡಿತರ ಪೈಕಿ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಅವರ ಅಭಿಪ್ರಾಯದಂತೆ ಅದನ್ನು ದ್ಸಬಹ್ ಮಾಡುವುದರಿಂದ ಮನೆಗೆ ಅನಾಹುತಗಳು ಬರಬಹುದು. ಅದು ಒಳಿತಲ್ಲ.
   ▪ಶ್ರೀಮಂತ ವ್ಯಕ್ತಿಗಳು ಆಡು ಸಾಕಣೆ ಮತ್ತು ಬಡವರು ಕೋಳಿ ಸಾಕಣೆ ಮಾಡಲು ಪ್ರವಾದಿ ಮುಹಮ್ಮದ್ (ಸ) ರು ನಿರ್ದೇಶಿಸಿದ ಹದೀಸನ್ನು ಇಮಾಮ್ *ಬಿನ್ ಮಾಜಃ* ಸಹಾಬಿ ಅಬೂಹುರೈರ (ರ) ನ್ನು ಉಲ್ಲೇಖಿಸಿ ವರದಿ ಮಾಡಿದ್ದಾರೆ.
   ▪ ಶ್ರೀಮಂತನಾದರೂ ಬಡವನಾದರೂ ಯಾವತ್ತೂ ಯವುದೇ ಕಸಬು ಇಲ್ಲದೆ ಬದುಕಬಾರದೆಂದು ಈ ಪ್ರವಾದಿವಚನ ಸೂಚಿಸುತ್ತದೆ. ಬಡವನೆಂದು ಹೇಳಿ ಅಲೆಮಾರಿಗಳಾಗಿಯೋ ಭಿಕ್ಷೆಬೇಡಿಯೋ ಜೀವನ ಸಾಗಾಟ ಮಾಡಬಾರದಾಗಿ ಇಸ್ಲಾಮ್ ತಾಕೀತು ಮಾಡುತ್ತದೆ. ಬಡವನಾದರೂ ಕನಿಷ್ಠ ಪಕ್ಷ ಸಾಧಾರಣ ಕೈಗೆಟುಕುವ ಕೋಳಿ ಸಾಕಣೆಯಾದರೂ ಮಾಡಬೇಕೆಂದು ಪ್ರವಾದಿಯವರು ನಿರ್ದೇಶಿಸಿದರು. ಇನ್ನು ಶ್ರೀಮಂತನಾದರೂ ಹಣವಿದೆಯೆಂದು ಹೇಳಿ ಮನೆಯಲ್ಲ ಆರಾಮವಾಗಿ ಕೂರುವುದಕ್ಕೂ ಇಸ್ಲಾಮ್ ಉತ್ತೇಜನ ಅಥವಾ ಬೆಂಬಲ ನೀಡುವುದಿಲ್ಲ. ಒಟ್ಟಿನಲ್ಲಿ ಬಡವನಾದರೂ ಶ್ರೀಮಂತನಾದರೂ ಯಾವುದಾದರೊಂದು ಕಸಬು ಅಥವಾ ಉದ್ಯೋಗದಲ್ಲಿ  ಏರ್ಪಡಬೇಕಾಗಿದೆ.
   ▪ಕೋಳಿಯ ಬಗ್ಗೆ ವಿಸ್ಮಯ ಹುಟ್ಟಿಸುವ ಹಲವಾರು ಮಾಹಿತಿಗಳನ್ನು ಓದಿರುವಿರಿ. ಇಲ್ಲಿ ಕೋಳಿಯ ಪಾತ್ರವಿರುವ ಕೆಲವು ನೈಜ ಘಟನೆಗಳನ್ನು, ಕಥೆಗಳನ್ನು, ಹಾಸ್ಯ ಕಥೆಗಳನ್ನು ಓದಿ. ಈ ಬಗ್ಗೆ ಹಲವಾರು ನೈಜ ಘಟನೆಗಳು ಇಸ್ಲಾಮಿನ ಪೌರಾಣಿಕ ಗ್ರಂಥಗಳಲ್ಲಿ ವರದಿಯಾದರೂ ಅಂಕಣವು ಬಹಳ ದೀರ್ಘವಾಗುವುದರಿಂದ ಓದುಗರ ಗಮನವನ್ನು ಈಗ ಆ ಕಡೆ ಸೆಳೆಯುವುದಿಲ್ಲ. ಈ ಸಂಬಂಧ ವರದಿಯಾದ ಎರಡು ರೋಮಾಂಚಕ ಘಟನೆಗಳನ್ನು ಬರುವ *ಮೊಯಿಲಾಂಜಿ ಮಾಸಿಕ* ದಲ್ಲಿ ಪ್ರಕಟ ಮಾಡಲಾಗುವುದು. ಇಂಶಾ ಅಲ್ಲಾಹ್ಃ ಆಗ ಓದುಗರಿಗೆ ಕಳುಹಿಸಿ ಕೊಡಲಾಗುವುದು.
   ▪ಪ್ರವಾದಿವರ್ಯರ (ಸ) ಮಗಳಾದ ಬೀವಿ ರುಖಯ್ಯ (ರ) ನ್ನು ಇಸ್ಲಾಮಿನ ಮೂರನೇ ಖಲೀಫಾ ಹಝ್ರತ್ ಉಸ್ಮಾನ್ ಬಿನ್ ಅಫ್ಪಾನ್ (ರ) ರು ವಿವಾಹವಾಗಿದ್ದರು. ಮಕ್ಕಾದಲ್ಲಿ ಮುಶ್ರಿಕರ ತೊಂದರೆ ಜಾಸ್ತಿಯಾದಾಗ  *ಹಬಷಾ* ದೇಶಕ್ಕೆ (ಇಥಿಯೋಪಿಯಾ) ವಲಸೆ ಹೋದ ಸಹಾಬಿಗಳಲ್ಲಿ ಉಸ್ಮಾನ್ (ರ) ಮತ್ತು  ಪತ್ನಿ ಬೀವಿ ರುಖಯ್ಯ (ರ) ಕೂಡ ಇದ್ದರು. ತುಂಬು ಗರ್ಭಿಣಿಯಾಗಿದ್ದ ಬೀವಿ ರುಖಯ್ಯ (ರ) ರು ಇಥಿಯೋಪಿಯಾ ತಲುಪಿದಾಗ ಒಂದು ಗಂಡು ಮಗುವಿಗೆ ಜನ್ಮ ನೀಡಿದರು. ಮುದ್ದಿನ ಕಂದನಿಗೆ ಅಬ್ದುಲ್ಲಾ ಎಂದು ನಾಮಕರಣ ಮಾಡಿದರು. ಪ್ರವಾದಿ ಮುಹಮ್ಮದ್ (ಸ) ರ ಎರಡು ಪುತ್ರಿಯರನ್ನು ವಿವಾಹವಾದ ಸಹಾಬೀಶ್ರೇಷ್ಠ ಹಝ್ರತ್ ಉಸ್ಮಾನ್ (ರ) ರಿಗೆ ಪ್ರವಾದಿಯವರ ಈ ಎರಡು ಪುತ್ರಿಯರಲ್ಲಿ ಈ ಒಂದು ಗಂಡು ಮಗುವಲ್ಲದೆ ಬೇರೆ ಮಕ್ಕಳಾಗಲಿಲ್ಲ. ಗಮನಾರ್ಹ ಸಂಗತಿಯೆಂದರೆ, ಏಳು ವರ್ಷ ಪ್ರಾಯವಾದಾಗ ಒಮ್ಮೆ ಈ ಕಂದನ ಮುಖಕ್ಕೆ ಮನೆಯಲ್ಲಿ ಸಾಕುತ್ತಿದ್ದ ಹುಂಜ ಕೋಳಿಯೊಂದು ತನ್ನ ಕೊಕ್ಕಿನಿಂದ ಕುಟ್ಟಿತು. ಕುಟ್ಟಿದ ಗಾಯ ವಾಸಿಯಾಗದೆ ಕೊನೆಗೆ ಮುಖವೇ ಬಾತುಹೋಯಿತು. ಅಲ್ಲಾಹುವಿನ ವಿಧಿಯಂತೆ ಈ ಕಾರಣದಿಂದ ಕೊನೆಗೆ ಈ ಮಗು ವಫಾತಾಯಿತು. 
   ▪ಕೋಳಿಯ ಬಗ್ಗೆ ಇತಿಹಾಸದಲ್ಲಿ ಹಾಲವಾರು ಹಾಸ್ಯ ಕತೆಗಳೂ ಇವೆ. ಒಮ್ಮೆ ಹುಂಜ ಕೋಳಿಯೊಂದು ಮುಂಜಾನೆಯ ಸಮಯ ಎತ್ತರವಾದ ಮರದ ರೆಂಬೆಯಲ್ಲಿ ಕುಳಿತಿತ್ತು. ಆ ದಾರಿಯಾಗಿ ಹೋಗುವ ದಾರಿಹೋಕ ನರಿಯೊಂದು ಇದನ್ನು ಕಂಡು ಬಾಯಿಯಲ್ಲಿ ನೀರು ಸುರಿಸುತ್ತಾ ಇದನ್ನು ಇವತ್ತು ಹೇಗಾದರು ಮಾಡಿ ಕಷಾಪು ಮಾಡಬೇಕೆಂದು ಲೆಕ್ಕಹಾಕಿ ಕೋಳಿಯಲ್ಲಿ ಹೇಳಿತು. *"ಹಾಯ್.. ಏನಿದು ಅವಸ್ಥೆ..? ನಮಾಝಿಗೆ ಎಬ್ಬಿಸಲು ಮಾತ್ರ ನೀನು ಕಲಿತದ್ದಾ..? ನಮಾಝು ಮಾಡುವ ರೂಡಿ ಇಲ್ಲವಾ..? ಬಾಂಗ್ ಆಗಿ ಸಮಯ ಎಷ್ಟಾಯಿತು..? ನೋಡು ಈಗ ಮು‌ಅಝ್ಝಿ‌ನ್ ಖಾಮತ್ ಕೂಡ ಕೊಡುತ್ತಾರೆ. ಮರದಿಂದ ಬೇಗ ಕೆಳಗಿಳಿ. ಒಟ್ಟಾಗಿ ಹೋಗಿ ನಮಾಝ್ ಮಾಡಿ ಬರುವ."*
   ▪ಕೋಳಿ ಹೇಳಿತು. *"ನರಿಯಣ್ಣಾ.. ನೀವು ಹೇಳುವುದು ಸರಿ ತಾನೆ. ಆದರೆ ಈಗ ಇಷ್ಟು ಬೇಗ ಹೋಗಿ ಪ್ರಯೋಜನವಿಲ್ಲ. ನೋಡು ಅಲ್ಲಿ ಕೆಳಗೆ ಮರದ ಬುಡಕ್ಕೆ. ಇಮಾಮ್ ಇನ್ನೂ ಎದ್ದೇಳಲಿಲ್ಲ. ಅವರು ನಿದ್ರೆಯಲ್ಲಿದ್ದಾರೆ. ಅವರಿಲ್ಲದೆ ನಮಾಝಿಗೆ ಇಮಾಮತ್ ನಿಲ್ಲುವುದು ಯಾರು..?"*
    ▪ಕೂಡಲೇ ವಂಚಕ ನರಿ ಕೋಳಿ ಕುಳಿತ ಮರದ ಬುಡಕ್ಕೆ ನೋಡಿದಾಗ ಅಲ್ಲಿ ಒಂದು ದೊಡ್ಡ ಬೇಟೆನಾಯಿ ನಿದ್ರಿಸುತ್ತಿತ್ತು. ಇದನ್ನು ಕಂಡದ್ದೇ ತಡ ನರಿ ಅಲ್ಲಿಂದ ಮೆಲ್ಲನೆ ಜಾಗ ಖಾಲಿ ಮಾಡಿತು. ನರಿ ವೇಗವಾಗಿ ಓಡುವುದನ್ನು ಕಂಡ ಕೋಳಿ ನರಿಯಲ್ಲಿ ಕೇಳಿತು. *"ಹಲೋ.. ನರಿಯಣ್ಣಾ.. ಏನಿದು ಓಡುತ್ತಿರುವಿರಿ. ಜಮಾ‌ಅತಿಗೆ ಹೋಗೊದಿಲ್ವಾ..?"* ಕೂಡಲೇ ನರಿ *"ಹಾ.. ಬರ್‌ತೇನೆ.. ನನ್ನ ಉಝು ಹೋಯಿತು. ಈಗ ಉಝು ಮಾಡಿ ಬರುತ್ತೇನೆ"* ಎಂದು ಹೇಳಿ‌ ಪರಾರಿಯಾಯಿತು.
   ▪ಈ ನೀತಿ ಕಥೆಯನ್ನು ಅಲ್ಲಾಮಾಃ *ಬಿನ್ ಜವ್‌ಝಿ* (ರ) ತನ್ನ *ಅಲ್ ಅಝ್‌ಕಿಯಾಅ್* ಎಂಬ ಗ್ರಂಥದಲ್ಲಿ ಅಂತೆಯೇ ಇಮಾಮ್ ಸಫೂರಿಯವರು ತನ್ನ *ನುಝ್‌ಹತುಲ್ ಮಜಾಲುಸ್* ಎಂಬ ಗ್ರಂಥದಲ್ಲೂ ವಿವರಿಸಿದ್ದಾರೆ.
  ▪ಹುಂಜ ಕೋಳಿಯ ಜುಟ್ಟು ಮತ್ತು ನೆತ್ತಿಗೆ ಚೆನ್ನಾಗಿ ತೆಂಗಿನ ಎಣ್ಣೆ ಸವರಿದರೆ ಆ ಕೋಳಿ ಕೆಲವು ದಿನಗಳ ಕಾಲ ಕೂಗದು..!
   ▪ಪ್ರವಾದಿಯವರು ಕೋಳಿ ಮಾಂಸ ತಿಂದದ್ದಾಗಿ ಹಲವಾರು ಸಹೀಹಾದ ಹದೀಸುಗಳಿಂದ ದೃಢಪಟ್ಟಿದೆ. ಅಲ್ಲದೆ ಪ್ರವಾದಿವರ್ಯರು ಪದಾರ್ಥ ಮಾಡಬಯಸುವ ಕೋಳಿಯನ್ನು ಕೆಲವು ದಿನಗಳ ಮೊದಲೇ ಕಟ್ಟಿಹಾಕಲು ನಮ್ಮಲ್ಲಿ ಹೇಳುತ್ತಿದ್ದರೆಂದು ಸಹಾಬಿ *ಇಬ್‌ನ್ ಉಮರ್* (ರ) ಹೇಳಿದ್ದಾಗಿ ಉಲ್ಲೇಖವಿದೆ. ಕಟ್ಟಿ ಹಾಕುವ ಉದ್ದೇಶ ಏನಾಗಿರಬಹುದೆಂದು ಓದುಗರು ಊಹಿಸಬೇಕಾಗಿದೆ. ಅಂತೆಯೇ ಕಟ್ಟಿಹಾಕಿದ ಕೋಳಿಯನ್ನು ದ್ಸಬಹ್ ಮಾಡುವ ಮೊದಲು ಅದನ್ನು ಶಾರೀರಿಕ ವ್ಯಾಯಾಮಕ್ಕೆ ಒಳಪಡಿಸಿ ಹೆಣಗಿಸುವುದು ಉತ್ತಮವಾಗಿದೆ.
    ▪ಒಮ್ಮೆ ಶೈಖ್ ಅಬ್ದುಲ್ ಖಾದಿರ್ ಜೀಲಾನೀ (ರ) ರ ಹತ್ತಿರ ಒಂದು ಮಹಿಳೆ ತನ್ನ ಮಗನೊಂದಿಗೆ ಬಂದು ಹೇಳಿದರು. *"ನನ್ನ ಮಗನಿಗೆ ನಿಮ್ಮ ಬಗ್ಗೆ ಬಹಳ ಗೌರವ ಮತ್ತು ಹೆಮ್ಮೆಯಿದೆ. ನಿಮ್ಮ ಬಗ್ಗೆ ಅವನು ಹಲವರಿಂದ ಕೇಳಿ ತಿಳಿದಿದ್ದಾನೆ. ಯಾವಾಗಲೂ ನನಗೆ ಶೈಖ್ ಜೀಲಾನಿಯವರ ಶಿಷ್ಯತ್ವ ಸ್ವೀಕರಿಸಿ ಅವರ  ಮುರೀದಾಗಬೇಕೆಂದು ಹೇಳುತ್ತಿದ್ದಾನೆ. ಆದ್ದರಿಂದ ನೀವು ಇವನನ್ನು ನಿಮ್ಮ ಆತ್ಮೀಯ ಸಭೆಯಾದ ದರ್‌ಸಿನಲ್ಲಿ ಒಬ್ಬ ಮುತ‌ಅಲ್ಲಿಮಾಗಿ (ವಿದ್ಯಾರ್ಥಿ) ಸೇರಿಸಿಕೊಳ್ಳಬೇಕು. ಮಾತ್ರವಲ್ಲ ಅವನನ್ನು ನೀವು ಒಳ್ಳೆಯ ಸಂಸ್ಕಾರವಿರುವ ಒಬ್ಬ ವ್ಯಕ್ತಿಯಾಗಿ ಮಾರ್ಪಡಿಸಬೇಕು. ನಾನಿನ್ನು ಅವನ ಬಗ್ಗೆ ಚಿಂತಿಸುವುದೇ ಇಲ್ಲ. ಎಲ್ಲಾ ನಿಮಗೆ ಬಿಟ್ಟು ಬಿಡುತ್ತೇನೆ"*
     ▪ಅಂತೆಯೇ ಹುಡುಗ ಶೈಖ್ ಜೀಲಾನೀ (ರ) ರ ಮಜ್‌ಲಿಸಿನಲ್ಲಿ ಅವರ ತರಬೇತಿಯಲ್ಲಿ ಬೆಳೆಯುತ್ತಿದ್ದ. ತಿಂಗಳುಗಳು ಕಳೆದಾಗ ಒಮ್ಮೆ ಒಂದು ದಿನ ಹುಡುಗನ ತಾಯಿ ತನ್ನ ಮಗನನ್ನು ನೋಡಲು ಶೈಖ್ ಜೀಲಾನೀ (ರ) ರ ಮಜ್‌ಲಿಸಿಗೆ ಬಂದರು. ಬಂದು ನೋಡುವಾಗ ಮಗನ ಶರೀರವೆಲ್ಲಾ ಸೊರಗಿ ಸಣಕಲಾಗಿ ನರಪೇತಾಲನಂತೆ ಕಾಣುತ್ತಿತ್ತು. ಕಂಗಾಲಾದ ಮಗನನ್ನು ನೋಡಿ ತಾಯಿ ಕೇಳಿದಳು. *"ಇಲ್ಲಿ ನಿನ್ನ ಆಹಾರವೇನು ಮಗು...? ನೀನು ಸಂಪೂರ್ಣ ಸಣಕಲಾಗಿರುವಿ. ಏನು ಕಾರಣ..?"* ಮಗ ಹೇಳಿದ. *"ಮೂರು ಹೊತ್ತಿಗೆ ಮೂರು ತುಂಡು ಒಣ ರೊಟ್ಟಿ ಮಾತ್ರ. "*
   ▪ಕುಪಿತೆಯಾದ ಮಹಿಳೆ ಇದನ್ನು ವಿಚಾರಿಸಲು ಕೂಡಲೇ ಶೈಖ್ ಜೀಲಾನೀ (ರ) ರು ಇರುವ ಕೊಠಡಿಗೆ ಹೋದಳು. ಅಲ್ಲಿ ಶೈಖರು ಊಟ ಮಾಡುತ್ತಿದ್ದರು. ಭೋಜನ ಮೇಜಿನಲ್ಲಿ ಒಂದು ಕಡೆ ಹುರಿದ ಕೋಳಿಯಾದರೆ, ಇನ್ನೊಂದೆಡೆ ಮಾಂಸ ತಿಂದು ಮುಗಿಸಿ ಎಸೆದ ಕೋಳಿಯ ಎಲುಬುಗಳು ಇದ್ದವು. ಮೊದಲೇ ಕೋಪಗೊಂಡಿದ್ದ ಮಹಿಳೆಗೆ ಇದನ್ನು ಕಂಡಾಗ ಪಿತ್ತ ನೆತ್ತಿಗೇರಿತು.
    ▪ಮಹಿಳೆ ಶೈಖ್ ಜೀಲಾನಿಯವರಲ್ಲಿ ಕೇಳಿದಳು. *"ಅಲ್ಲಾ ಶೈಖ್‌ರವರೇ.., ನಿಮ್ಮ ಅವಸ್ಥೆಯೇನು..? ನನ್ನ ಮಗ ನೀವು ಒಂದು ದಿನಕ್ಕೆ ಕೊಡುವ ಮೂರು ತುಂಡು ಒಣರೊಟ್ಟಿ ತಿಂದು ಶರೀರವೆಲ್ಲಾ ಸಣಕಲಾಗಿ ಅವನ ಪರಿಚಯ ಕೂಡ ಸಿಗುವುದಿಲ್ಲ. ನೀವಾದರೆ ಇಲ್ಲಿ ಕೋಣೆಯಲ್ಲಿ ಕುಳಿತು ಒಳ್ಳೆಯ ಹುರಿದ ಕೋಳಿಯನ್ನು ಯಾವುದೇ ಮುಲಾಜು ಇಲ್ಲದೆ ಮಜಾ ಆಗಿ ತಿನ್ನುತ್ತಿದ್ದೀರಿ. ಇದು ಯಾವ ನ್ಯಾಯ...?"*
    ▪ಶೈಖ್ ಅಬ್ದುಲ್ ಖಾದಿರ್ ಜೀಲಾನೀ (ರ) ರು ಕೂಡಲೇ ತನ್ನ ಕೈಯನ್ನು ತಿಂದು ಎಸೆದ ಕೋಳಿ ಎಲುಬುಗಳ ಮೇಲೆಯಿಟ್ಟು ಹೇಳಿದರು. *"ಎಲುಬಿಗೆ ಜೀವ ಕೊಡುವ ಅಲ್ಲಾಹುವಿನ ಖುದುರತಿನಲ್ಲಿ ಎದ್ದು ನಿಲ್ಲು"* ಕೂಡಲೇ ತುಂಡು ತುಂಡಾಗಿದ್ದ ಎಲುಬುಗಳು ಜೋಡಣೆಯಾಗಿ ಒಂದು ಜೀವಂತ ಕೋಳಿಯಾಗಿ ಎದ್ದು ನಿಂತು ಕೂಗಲು‌ ಶುರುಮಾಡಿತು.
   ▪ಈ ರೋಮಾಂಚಕ ಬೆಚ್ಚಿಬೀಳುವ ದೃಶ್ಯವನ್ನು ಕಂಡಾಗ ಆ ಮಹಿಳೆ ಇದಕ್ಕೆ ಏನೆಂದು ಉತ್ತರಿಸುವುದೆಂದು ತಿಳಿಯದೆ ತಬ್ಬಿಬ್ಬಾದಳು. ಆಗ ಶೈಖ್ ಜೀಲಾನಿಯವರು ಹೇಳಿದರು. *"ಸಹೋದರೀ... ನಿನ್ನ ಮಗ ಇಲ್ಲಿ  ಬೆಳೆದು ಈ ಪದವಿಗೆ ತಲುಪುವಾಗ ಅವನಿಗೂ ಈ ರೀತಿ ತಿನ್ನಬಹುದು."*
     ▪ ಇಸ್ಲಾಮಿನ ಎರಡನೇ ಖಲೀಫಾ ಹಝ್ರತ್ ಉಮರ್ (ರ) ರು ಒಮ್ಮೆ ಒಂದು ಶುಕ್ರವಾರ ಜುಮುಅ ಖುತುಬಃ ಮಾಡುತ್ತಿರುವ ವೇಳೆ ಒಂದು ನಡುಕ ಹುಟ್ಟಿಸುವ ವಾರ್ತೆಯನ್ನು ಮದೀನಾ ಮಸೀದಿಯಲ್ಲಿ ನಮಾಝಿಗೆ ಹಾಜರಾದ ಜನರ ಗಮನಕ್ಕೆ ತಂದರು. *"ಓ ಮಹನಿಯರೇ, ಒಂದೆರಡು ದಿನಗಳ ಮುಂಚೆ ನನಗೆ ಹುಂಜ ಕೋಳಿಯೊಂದು ಅದರ ಕೊಕ್ಕಿನಿಂದ ಮೂರು ಬಾರಿ ಕುಟ್ಟುವ ಒಂದು ಭಯಾನಕ ಕನಸು ಬಿದ್ದಿದೆ. ನಾನು ಕೂಡಲೇ ಆ ಕನಸಿನ ಬಗ್ಗೆ ಖಲೀಫಾ ಹಝ್ರತ್ ಅಬೂಬಕರ್ ಸಿದ್ದೀಖ್ (ರ) ರ ಪತ್ನಿ ಬೀವಿ ಅಸ್‌ಮಾಃ ಬಿಂತ್ ಉಮಯಿಸ್ (ರ) ರ ಗಮನಕ್ಕೆ ತಂದಾಗ ಅವರು ಕೊಡುವ ವ್ಯಾಖ್ಯಾನವೆಂದರೆ, "ನಾನು ಕೆಲವೇ ದಿನಗಳಲ್ಲಿ ಅರಬಿಯಲ್ಲದ ವ್ಯಕ್ತಿಯೊಬ್ಬನಿಂದ ಹತ್ಯೆಯಾಗುವೆನು." ಈ ವ್ಯಾಖ್ಯಾನ ಸರಿ ಎಂದಾದರೆ ನಾನಿನ್ನು ತುಂಬಾ ಸಮಯ ಬದುಕುವುದು ಕಷ್ಟ."*
   ▪ಖಲೀಫಾ ಉಮರ್ (ರ) ರು ಈ ದುಃಖ ವಾರ್ತೆಯನ್ನು ಒಂದು ಶುಕ್ರವಾರದಂದು ಸಹಾಬಿಗಳ ಗಮನಕ್ಕೆ ತಂದಿದ್ದರೆ ಮುಂದಿನ ಬುಧವಾರ ಮುಂಜಾನೆ ಫಜ್‌ರ್ ನಮಾಝಿನಲ್ಲಿರುವಾಗ ಮಸ್ಜಿದ್ ಅಲ್ ನಬವಿಯ ಒಳಗೆ ನುಸುಳಿ ಬಂದ *ಅಬೂ ಲುಅ್‌ಲುಅ ಫಯ್‌ರೂಸ್* ಎಂಬ ಇರಾನಿ (ಫಾರಿಸಿ) ವಂಶಜನಾದ ಅಗ್ನಿ ಆರಾಧಕನಿಂದ ಭೀಕರ ಚೂರಿ ಇರಿತಕ್ಕೀಡಾದರು. ಮದೀನಾ ಮಸೀದಿಗೆ ದುಮುಕಿದ ಈ ದುಷ್ಟನು ಫಜ್‌ರ್ ನಮಾಝಿನಲ್ಲಿದ್ದವರಲ್ಲಿ ಹದಿಮೂರು ಮಂದಿಯನ್ನು ಗಂಬೀರ ಗಾಯಗೊಳಿಸಿದನು. ಮಾತ್ರವಲ್ಲ ಈ ಗಾಯಗೊಂಡವರಲ್ಲಿ ಒಂಬತ್ತು ಮಂದಿ ವಫಾತಾದರು.
   ▪ತನ್ನ ಶರೀರದ ಆರು‌ ಕಡೆ ಗಂಭಿರ ಇರಿತಕ್ಕೀಡಾದ ಹಝ್ರತ್ ಉಮರ್ (ರ) ರು ನಂತರ ಎರಡು ಮೂರು ದಿನ ಬದುಕಿದ್ದರು. ಆ ವೇಳೆಯಲ್ಲಿ ಪವಿತ್ರ ರೌಲಾ ಶರೀಫಿನ ಪಕ್ಕದಲ್ಲಿ ಬೀವಿ ಆಯಿಶಾ (ರ) ರಿಗೆ ಪ್ರವಾದಿ ಮುಹಮ್ಮದ್ (ಸ) ರು ಕಾದಿರಿಸಿದ್ದ ಜಾಗವನ್ನು ತನ್ನ ಮಗನಾದ ಅಬ್ದುಲ್ಲಾಃ ಬಿನ್ ಉಮರ್ (ರ) ನ್ನು ಬೀವಿ ಆಯಿಶಾ (ರ) ರ ಮನೆಗೆ ಕಳುಹಿಸಿ ಅದು ನನಗೆ ಕೊಡಬೇಕೆಂದು ಆಗ್ರಹ ವ್ಯಕ್ತಪಡಿಸಿದರು. ಉಮರ್ (ರ) ರ ಬೇಡಿಕೆಯನ್ನು ಬೀವಿ‌ ಆಯಿಶಾ (ರ) ಬಹಳ ಸಂತೋಷದಿಂದ ಸ್ವೀಕರಿಸಿದರು. ನಂತರ ಹಝ್ರತ್ ಉಮರ್ (ರ) ರ ಪಾರ್ಥಿವ ಶರೀರವನ್ನು ಅಲ್ಲಿ ದಫನ ಮಾಡಲಾಯಿತು. ಅವರ ವಫಾತಾದ ದಿನದ ಹಗಲು ಸಂಪೂರ್ಣ ಸೂರ್ಯಗ್ರಹಣವಾದಂತೆ ಕಪ್ಪುಆವರಿಸಿತ್ತು.!
▪ಹದಿಹರೆಯದ, ಮೊಟ್ಟೆಯಿಡುವ ಪ್ರಾಯ ತಲುಪಿದ ಹೇಂಟೆ ಕೋಳಿಯ ಮಾಂಸ ಶರೀರಕ್ಕೆ ಬಹಳ ಉತ್ತಮ ಮತ್ತು ಪುಷ್ಟಿಕರವಾಗಿದೆ. ಅದರ ಮಾಂಸ ತಿನ್ನುವುದರಿಂದ ಬುದ್ದಿ ಜಾಸ್ತಿಯಾಗುತ್ತದೆ. ಶಬ್ದದ ಗೊರಸುತನ ನಿವಾರಣೆಯಾಗಿ ಶಬ್ದವು ಚೆನ್ನಾಗುತ್ತದೆ.
  ▪ ಕೆಲವರಿಗೆ ಕೋಳಿಮಾಂಸ ತಿನ್ನುವುದರಿಂದ ಹೊಟ್ಟೆಗೆ ತೊಂದರೆ ಆಗುವುದಾದರೆ ಕೋಳಿಮಾಂಸ ತಿಂದ ಕೂಡಲೇ ಜೇನು ಮಿಶ್ರಿತ ನೀರು ಕುಡಿಯುವುದು ಉತ್ತಮವೆಂದು ಕೆಲವು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ. ಹಾಗೆ ಮಾಡುವುದರಿಂದ ಜಠರ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತದೆ. ಕೋಳಿಮಾಂಸ ಅತಿಯಾಗಿ ಯಾವಾಗಲೂ ತಿನ್ನುವವರಿಗೆ ಸಂಧಿವಾತ, ಮೂಲವ್ಯಾಧಿ ಮುಂತಾದ ಖಾಯಿಲೆಗಳು ಬರುವುದೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರಾದರೂ ಇಮಾಮ್ ದುಮೈರಿಯವರು ಅದನ್ನು ಅಲ್ಲಗಳೆದಿದ್ದಾರೆ.
   ▪ಚಳಿಜ್ವರ ಮತ್ತು ಶೀತಜ್ವರ ಇರುವ ಸಂದರ್ಭಗಳಲ್ಲಿ ಹುಂಜ ಕೋಳಿಯನ್ನು ಸುಟ್ಟು ತಿನ್ನುವುದಾದರೆ ಜ್ವರವು ಬೆಟ್ಟ ಹತ್ತುತ್ತದೆ. ಅಂತೆಯೇ ಚಳಿಗಾಲ ಮತ್ತು ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಸಂದರ್ಭಗಳಲ್ಲಿ ನಮ್ಮ ಶರೀರದ ತೇವಾಂಶ ಜಾಸ್ತಿಯಾಗುವುದರಿಂದ ಹುಂಜ ಕೋಳಿಯ ಮಾಂಸ ತಿನ್ನುವುದರಿಂದ ಶರೀರದ ಸಮತೋಲನವನ್ನು
ಕಾಪಾಡುತ್ತದೆ.
    ▪ಕೋಳಿ ಮೊಟ್ಟೆಯು ಶರೀರಕ್ಕೆ ಬಹಳ ಪುಷ್ಟಿಕರ ಆಹಾರವಾಗಿದೆ. ಆದರೂ ಯಾವಾಗಲೂ ಜಾಸ್ತಿಯಾಗಿ ಮೊಟ್ಟೆ ತಿನ್ನುವುದರಿಂದ ಚರ್ಮದಲ್ಲಿ ಕಪ್ಪು ಮಚ್ಚೆಗಳು ಬೀಳುತ್ತದೆ.
   ▪ಮೊಟ್ಟೆಯಲ್ಲಿರುವ ಎರಡು ದ್ರಾವಣದಲ್ಲಿ ಬಿಳಿಯು ಶರೀರಕ್ಕೆ ತಂಪು ಮತ್ತು ಹಳದಿಯು ಉಷ್ಣವಾಗಿದೆ. ಆದ್ದರಿಂದ ಮೊಟ್ಟೆ ತಿನ್ನುವಾಗ ಸಾಧ್ಯವಾದಷ್ಟು ಹಳದಿಯನ್ನು ತ್ಯಜಿಸುವುದು ಉತ್ತಮವೆಂದು ವೈದ್ಯಶಾಸ್ತ್ರ ಪಂಡಿತರಾದ *ಬಯಾರಿಖ್* ರಂತಹಾ ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
  ▪ಹುಂಜ ಕೋಳಿಯ ಮಾಂಸದಲ್ಲಿ ಉಷ್ಣಾಂಶ ಇರುವಷ್ಟು ಜಾಸ್ತಿ ಹೇಂಟೆ ಕೋಳಿಯಲ್ಲಿ ಇರುವುದಿಲ್ಲ.
  ▪ವಿಷ ಕಡಿದ ಜಾಗಕ್ಕೆ ಹುಂಜ ಕೋಳಿಯ ರಕ್ತವನ್ನು ಲೇಪಿಸಿದರೆ ಒಳ್ಳೆಯ ಫಲ ಕಾಣುತ್ತದೆ.
   ▪ಒಬ್ಬನನ್ನು ಹುಂಜ ಕೋಳಿಯೊಂದು ತನ್ನ ಕೊಕ್ಕಿನಿಂದ ಕುಟ್ಟುವ ಕನಸು ಕಂಡರೆ ಅವನು ಅಪರಿಚಿತನಿಂದ ಹತ್ಯೆಗೀಡಾಗುವನು ಎಂಬುದರ ನಿಶಾನೆಯಾಗಿದೆ.
▪ಒಬ್ಬನು ಹುಂಜ ಕೋಳಿಯನ್ನು ಖರೀದಿಸಿದ ಕನಸು ಬಿದ್ದರೆ ಅವನಿಗೆ ಒಂದು ಗಂಡು ಮಗು ಹುಟ್ಟುವುದರ ಸಂಕೇತವಾಗಿದೆ.
  ▪ಮಹಿಳೆಯೊಬ್ಬಳಿಗೆ ಹೇಂಟೆ ಕೋಳಿಯ ಕನಸು ಬಿದ್ದರೆ ಅವಳಿಗೆ ಮುಂದಕ್ಕೆ ತುಂಬಾ ಮಕ್ಕಳಾಗುವುದು ಎಂಬುದರ ಸೂಚನೆಯಾಗಿದೆ.
  ▪ರೋಗಿಯೊಬ್ಬನು ಹೇಂಟೆ ಕೋಳಿಯನ್ನು ಕನಸಿನಲ್ಲಿ ಕಂಡರೆ ಅವನ ಖಾಯಿಲೆ ವಾಸಿಯಾಗುವ ನಿಶಾನೆಯಾಗಿದೆ.
  ▪ಹುಂಜ ಕೋಳಿಯೊಂದು ತನ್ನ ಮನೆಯೊಳಗೆ ಬಂದು ಧಾನ್ಯ ಹೆಕ್ಕಿ ತಿನ್ನುವ ಕನಸು ಬಿದ್ದರೆ ಆ ಮನೆಯಿಂದ ಏನಾದರು ವಸ್ತು ಕಳ್ಳರಿಂದ ಕದ್ದು ಹೋಗಲಿದೆ ಎಂಬುದರ ನಿಶಾನೆಯಾಗಿದೆ.
  ▪ಒಮ್ಮೆ ಒಬ್ಬ ವ್ಯಕ್ತಿ ‌ತಾಬಿಯೀ ನಾಯಕ ಮತ್ತು ಕನಸು ವ್ಯಾಖ್ಯಾನದ ಮಹಾಪಿತ ಅಲ್ಲಾಮಾಃ *ಮುಹಮ್ಮದ್ ಬಿನ್ ಸೀರೀನ್* (ರ) ರ ಬಳಿ ಬಂದು ಹೇಳಿದ. *"ನನಗೆ ನಿನ್ನೆ ರಾತ್ರಿ ಹುಂಜ ಕೋಳಿಯೊಂದು ನನ್ನ ಮನೆಯೊಳಗೆ ನುಗ್ಗಿ  ಗೋಧಿ ಧಾನ್ಯಗಳನ್ನು ತನ್ನ ಕೊಕ್ಕಿನಿಂದ ಹೆಕ್ಕಿ ತಿನ್ನುವ ಕನಸು ಬಿದ್ದಿದೆ."*
  ▪ಅಲ್ಲಾಮಾಃ ಬಿನ್ ಸೀರೀನ್ (ರ) ರು ಹೇಳಿದರು. *"ನೀನೀಗ ಇಲ್ಲಿಂದ ಹೋಗು. ಕೆಲವೇ ದಿನಗಳಲ್ಲಿ ನಿಮ್ಮ ಮನೆಯಿಂದ ಏನಾದರು ಕಳ್ಳತನವಾಗಿ ಹೋಗುವುದು. ಆಗ ಈ ಕಡೆ ಬಾ.*"
  ▪ಮೂರು-ನಾಲ್ಕು ದಿನಗಳ ನಂತರ ಈ ವ್ಯಕ್ತಿ ಇಮಾಮ್ ಬಿನ್ ಸೀನರತ್ತ ಬಂದು ಹೇಳಿದ. *"ಇಮಾಮರೇ... ನೀವು ಹೇಳಿದಂತೆಯೇ ನಿನ್ನೆ ಮನೆಯಿಂದ ಒಂದು ಕಂಬಳಿ ಕಳವಾಗಿದೆ."* ಇಮಾಮ್ ಬಿನ್ ಸೀರೀನ್ (ರ) ರು ಹೇಳಿದರು. *"ಗಾಬರಿಗೊಳ್ಳಬೇಡ. ಮಸೀದಿಯ ಬಾಂಗು ಕರೆಯುವ ಮು‌ಅಝ್ಝಿ‌ನ್‌ರನ್ನು(ಮುಕ್ರಿಕ) ವಿಚಾರಣೆ ಮಾಡಿ ನೋಡು. ಅವರು ಕಳ್ಳತನ ಮಾಡಿದ್ದಾರೆ."* ಸುಬ್‌ಹಾನಲ್ಲಾಃ.. ವಿಚಾರಣೆ ಮಾಡಿದಾಗ ಸಂಗತಿ ಬಿನ್ ಸೀರೀನರು ಹೇಳಿದ ಹಾಗೆಯೇ ಆಗಿತ್ತು...!   
    ▪ಕೋಳಿ ಇಸ್ಲಾಮಿನ ನಾಲ್ಕು ಮಝ್‌ಹಬ್‌ಗಳಲ್ಲೂ ಭಕ್ಷ್ಯಯೋಗ್ಯವಾಗಿದೆ.
ಸೂಚನೆ: ಕೋಳಿ ಬಗ್ಗೆ ಬರೆದ ಈ  ಮೂರು ಅಂಕಣವು ನಾವಿವತ್ತು ಸಾಧಾರಣವಾಗಿ ತಿನ್ನುವ *ಬೋಯಿಲರ್ ಫಾರ್ಮ್ ಕೋಳಿ* ಯಾಗಿ ಯಾವುದೇ ಸಂಭಂದವಿಲ್ಲೆಂದು ಓದುಗರು ತಿಳಿಯಬೇಕಾಗಿ ವಿನಂತಿ.
▪ಸಂಗ್ರಹ: ಇಮಾಮ್ ದುಮೈರಿಯ *ಹಯಾತುಲ್ ಹಯವಾನ್,* ಇಮಾಮ್ ಅಬ್‌ಶೀಹಿಯ *ಮುಸ್‌ತತ್‌ರಫ್,* ಇಮಾಮ್ ಖಲ್ಲೀಖಾನರ *ವಫಯ್ಯಾತುಲ್ ಅ‌ಅ್‌ಯಾನ್,* ಅಲ್ಲಾಮಾಃ ಬಿನ್ ಸೀರೀನ್‌ರ *ತಫ್‌ಸೀರುಲ್ ಅಹ್‌ಲಾಮ್* ಮತ್ತು ತತ್ವಜ್ಞಾನಿ ಜಾಹಿಳ್‌ರ *ಕಿತಾಬುಲ್ ಹಯವಾನ್* ಎಂಬ ಗ್ರಂಥಗಳು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...