*ಪ್ರವಾದಿ ನೂಹ್ (ಅ) ರ ಹಡಗಿನ ಹಗ್ಗ ಕತ್ತರಿಸಿದ ಇಲಿ*
*✒ಯೂಸುಫ್ ನಬ್ಹಾನಿ ಕುಕ್ಕಾಜೆ.*
📞00971 553499119
▪ತನ್ನ ಭವಿಷ್ಯದ ದಿನಗಳಿಗೆ ಬೇಕಾಗಿ ಆಹಾರ ಪದಾರ್ಥಗಳನ್ನು ಶೇಖರಣೆ ಮಾಡಿಡುವ ಐದು ಜೀವಿಗಳಲ್ಲಿ ಒಂದಾಗಿದೆ ಇಲಿ.
▪ಮನುಷ್ಯ, ಕಾಗೆ, ಇರುವೆ, ಜೇನ್ನೊಣ ಈ ನಾಲ್ಕು ಜೀವಿಗಳು ಕೂಡ ನಾಳಿನ ಬದುಕಿಗೆ ಬೇಕಾದ ಆಹಾರವನ್ನು ಶೇಖರಿಸಿಡುತ್ತದೆ.
▪ಕೇವಲ ಮೂರು ವರ್ಷ ಮಾತ್ರ ಆಯುಷ್ಯವಿರುವ ಈ ಜೀವಿ ತನ್ನ ಮೂರು ವರ್ಷದಲ್ಲಿ ಮುವತ್ತು ವರ್ಷಗಳ ಅನ್ಯಾಯ ಮಾಡುತ್ತದೆ. ಉಪದ್ರವ, ಹಾನಿ, ಅನ್ಯಾಯ ಮಾಡುವ ವಿಷಯದಲ್ಲಿ ಇದಕ್ಕೆ ಸರಿ ಸಮಾನವಾದ ಜೀವಿ ಬೇರೊಂದಿಲ್ಲ. ಎಷ್ಟು ಬೆಲೆಬಾಳುವ ಅಮೂಲ್ಯ ವಸ್ತುವನ್ನಾದರೂ ಯಾವುದೇ ಮುಲಾಜು ಇಲ್ಲದೆ ನಿಮಿಷದಲ್ಲಿ ನಾಶಮಾಡಿ ಬಿಡುತ್ತದೆ.
▪ಪ್ರವಾದಿ ನೂಹ್ (ಅ)ರ ನಿರ್ಮಾಣವಾಗುತ್ತಿದ್ದ ಹಡಗಿನ ಹಲಗೆಗಳನ್ನು ಪರಸ್ಪರ ಜೋಡಿಸುವಲ್ಲಿ ಉಪಯೋಗಿಸಿದ್ದ ಹಗ್ಗಗಳನ್ನು ಕೂಡ ಈ ಅನಾಮಿಕ ಇಲಿ ಕತ್ತರಿಸಿ ಪ್ರವಾದಿ ನೂಹ್ (ಅ) ರಿಗೆ ಅಪಾರ ನಷ್ಟ ಮಾಡಿದ ಒಂದು ಜೀವಿಯಾಗಿದೆ.
▪ಒಂದು ದಿನ ಪ್ರವಾದಿ ಮುಹಮ್ಮದ್ (ಸ) ರು ನಿದ್ರಿಸುತ್ತಿದ್ದ ವೇಳೆ ಏನೋ ಒಂದು ಶಬ್ದ ಕೇಳಿತು. ಎಚ್ಚರವಾಗಿ ನೋಡಿದಾಗ ತನ್ನ ಕೋಣೆಯಲ್ಲಿ ಉರಿಯುತ್ತಿದ್ದ ಎಣ್ಣೆದೀಪದ ಬತ್ತಿ ಕಾಣೂದಿಲ್ಲ. ಆಗ ಒಂದು ಇಲಿ ಆ ದೀಪದ ಬತ್ತಿಯನ್ನು ಉರಿಯುತ್ತಿದ್ದಂತೆಯೇ ಬೇರೊಂದು ಜಾಗಕ್ಕೆ ಕೊಂಡು ಹೋಗುವುದನ್ನು ಪ್ರವಾದಿ (ಸ)ರು ಕಂಡರು. ಪ್ರವಾದಿಯವರ ಮನೆಯನ್ನು ಸಂಪೂರ್ಣ ಬೆಂಕಿಗಾಹುತಿ ಮಾಡುವುದಾಗಿತ್ತು ಈ ಕೆಟ್ಟ ಇಲಿಯ ದುರುದ್ದೇಶ. ಪ್ರವಾದಿವರ್ಯರು ಕೂಡಲೇ ಅದನ್ನು ಕೊಂದು ಬಿಟ್ಟರು.
▪ಮತ್ತೊಮ್ಮೆ ಪ್ರವಾದಿ ಮುಹಮ್ಮದ್ (ಸ)ರು ಒಂದು ಚಾಪೆಯ ಮೇಲೆ ಕುಳಿತಿರುವಾಗ ಒಂದು ಇಲಿ ಎಲ್ಲಿಂದಲೋ ಒಂದು ಉರಿಯುತ್ತಿರುವ ದೀಪವನ್ನು ಕುಳಿತಿರುವ ಚಾಪೆಯ ಮೇಲೆ ತಂದು ಹಾಕಿತು. ಮಾತ್ರವಲ್ಲ ಚಾಪೆಯ ಒಂದು ಸಣ್ಣ ಭಾಗವೂ ಬೆಂಕಿಗಾಹುತಿಯಾಯಿತು.
▪ ಈ ಕಾರಣದಿಂದ ರಾತ್ರಿ ಹೊತ್ತಿನಲ್ಲಿ ಮಲಗುವಾಗ ಯಾವಾಗಲೂ ಉರಿಯುತ್ತಿರುವ ದೀಪ, ಒಲೆಯ ಬೆಂಕಿ ಇತ್ಯಾದಿಗಳನ್ನು ನಂದಿಸಲು ಪ್ರವಾದಿಯವರು ಆಜ್ಞಾಪಿಸಿದರು. ಈ ಘಟನೆ ಇಮಾಮ್ ಅಬೂದಾವೂದ್ (ರ) ರು ವರದಿ ಮಾಡಿದ ಸಹೀಹಾದ ಹದೀಸಿನಲ್ಲಿದೆ.
▪ಇಲಿಯನ್ನು ಕಂಡ ಕಂಡಲ್ಲಿ ಕೊಲ್ಲುವುದು ಸುನ್ನತ್ತಾಗಿದೆ. ಎಷ್ಟರ ತನಕವೆಂದರೆ ಪವಿತ್ರ ಹರಮಿನಲ್ಲೂ ಕೊಲ್ಲುವುದು ಸಮ್ಮತಾರ್ಹ ಮತ್ತು ಸುನ್ನತ್ತಾಗಿದೆ. ಇದು ಇಮಾಂ ಬುಖಾರಿಯವರು ವರದಿ ಮಾಡಿದ ಹದೀಸಿನಲ್ಲಿದೆ.
▪ ಬಾಟಲಿ, ಡಬ್ಬ ಮುಂತಾದ ಬಾಯಿ ಕಿರಿದಾದ ಪಾತ್ರೆಯಲ್ಲಿ ಬೆಣ್ಣೆ, ತುಪ್ಪದಂತಹಾ ಆಹಾರ ಪದಾರ್ಥಗಳನ್ನಿಟ್ಟರೆ ಇಲಿಯ ತಲೆ ಪಾತ್ರೆಯ ಒಳಗೆ ಹೋಗುವುದಿಲ್ಲ ಎಂದಾದರೆ ಈ ಮಹಾ ಖದೀಮ ಏನು ಉಪಾಯ ಹೂಡುತ್ತದೆ ಗೊತ್ತಾ...? ತನ್ನ ಬಾಲವನ್ನು ಅದರಲ್ಲಿ ಮುಳುಗಿಸುತ್ತದೆ. ನಂತರ ಬಾಲವನ್ನು ಹೊರ ತೆಗೆದು ಚೆನ್ನಾಗಿ ಚೀಪುತ್ತದೆ. ಹೀಗೆಯೇ ನಿರಂರತ ಮಾಡುತ್ತಾ, ಮಾಡುತ್ತಾ ಬಾಟಲಿಯಲ್ಲಿ ಒಂದು ಹನಿಯೂ ಇಲ್ಲದಾಗುವ ತನಕ ತನ್ನ ಈ ಹೇಯ ಕೃತ್ಯವನ್ನು ಮಾಡುತ್ತದೆ.
▪ಆಹಾರ ಪದಾರ್ಥಗಳ ವಾಸನೆಯನ್ನು ಎಷ್ಟೋ ಪರ್ಲಾಂಗು ದೂರದಿಂದ ತಿಳಿಯುವ ಅತೀ ಸೂಕ್ಷ್ಮ ಘ್ರಾಣಶಕ್ತಿ ಈ ಇಲಿಗೆ ಇದೆ. ಇಲಿ ಮತ್ತು ಬೆಕ್ಕಿನ ಮದ್ಯೆ ಯಾವಾಗಲೂ ಹಗೆತನ ಮತ್ತು ವೈರತ್ವವಿರುತ್ತದೆ. ಮಾತ್ರವಲ್ಲ ಬೆಕ್ಕನ್ನು ಕಂಡರೆ ಇಲಿ ಭಯದಿಂದ ಮೂತ್ರ ವಿಸರ್ಜನೆ ಕೂಡ ಮಾಡುತ್ತದೆ.
▪ ಪ್ರವಾದಿ ನೂಹ್ (ಅ)ರ ಹಡಗಿನಲ್ಲಿ ಮನುಷ್ಯರು ಮತ್ತು ಇತರ ಜೀವರಾಶಿಗಳಲ್ಲದೆ ಎಷ್ಟೋ ತಿಂಗಳುಗಳು ತಿನ್ನಲು ಬೇಕಾದ ಅಹಾರ ಸಾಮಾಗ್ರಿಗಳ ಬಂದೋಬಸ್ತು ಕೂಡ ಮಾಡಿದ್ದರು. ಅದರೆ ಈ ಪೋಕರಿ ಇಲಿ ಅಲ್ಲಿಯೂ ತನ್ನ ಸ್ವಭಾವವನ್ನು ಬಿಡಲಿಲ್ಲ. ಅಹಾರ ಪದಾರ್ಥಗಳನ್ನು, ಅವಗಳನ್ನು ಶೇಖರಣೆ ಮಾಡಿಟ್ಟ ಪೊಟ್ಟಣಗಳನ್ನು, ಜನರ ಬಟ್ಟೆಬರೆಗಳನ್ನು, ಬ್ಯಾಗು, ಚೀಲ ಇತ್ಯಾದಿಗಳನ್ನು ಎಲ್ಲವನ್ನೂ ಯಾವುದೇ ಕನಿಕರವಿಲ್ಲದೆ ಕತ್ತರಿಸಿ ಹಾಳು ಮಾಡುತ್ತಿತ್ತು. ಕೊನೆಗೆ ನೂಹ್ (ಅ)ರವರ ಸನ್ನಿಧಿಗೆ ದೂರು ಕೊಡಲಾಯ್ತು. ಆಗ ಇದಕ್ಕೆ ಒಂದು ಪರಿಹಾರ ಬೇಕೆಂದು ಅಲ್ಲಾಹನಲ್ಲಿ ಬೇಡಿದಾಗ ಸೃಷ್ಟಿಸಲ್ಪಟ್ಟ ಮೃಗವಾಗಿದೆ ಬೆಕ್ಕು. ಬೆಕ್ಕನ್ನು ಕಂಡ ಕೂಡಲೇ ಇಲಿಯ ಎಲ್ಲಾ ಪೋಕರಿತನ ನಿಂತು ಹೋಯಿತು. ಮಾತ್ರವಲ್ಲ ಅವಿತು ಕುಳಿತಿತು.
▪ಅಕ್ಕಿಹಿಟ್ಟು ಮತ್ತು ಪಾರಿವಾಳದ ಪಿಟ್ಟೆಯನ್ನು(ಸೆಗಣಿ) ಮಿಶ್ರಣ ಮಾಡಿ ಒಂದು ಕಡೆ ಇಟ್ಟರೆ ಅದನ್ನು ತಿಂದ ಇಲಿಗಳು ನಿಮಿಷದಲ್ಲಿ ಸಾಯುತ್ತದೆ.
▪ಕಡಲ ಈರುಳ್ಳಿಯನ್ನು ಪುಡಿಮಾಡಿ ಇಲಿಯ ಹುತ್ತದ ಸಮೀಪ ಇಡುವುದಾದರೆ ಅದರ ವಾಸನೆಯಿಂದ ಇಲಿಗಳು ಸತ್ತು ಹೋಗುತ್ತದೆ.
▪ಇನ್ನು ಮನೆಯಲ್ಲಿ ಅಥವಾ ಇತರ ಜಾಗದಲ್ಲಿ ಇಲಿಗಳ ವಿಪರೀತ ಕಾಟವಿದ್ದು ಯಾವ ಉಪಚಾರವೂ ಫಲಕಾರಿಯಾಗದಿದ್ದಲ್ಲಿ ಜೀರಿಗೆ, ಬಾದಾಮು ಮತ್ತು ಸೋಡಾಪುಡಿ ಈ ಮೂರನ್ನು ಮಿಶ್ರಣ ಮಾಡಿ ಕೆಲವು ದಿನಗಳ ಕಾಲ ಹೊಗೆ ಹಿಡಿದರೆ ಇಲಿಗಳ ವಿಳಾಸವೇ ಇರಲಿಕ್ಕಿಲ್ಲ.
▪ತನ್ನ ಮನೆಯಲ್ಲಿರುವ ಇಲಿಗಳು ಮನೆಯಿಂದ ಹೊರಹೋಗುವ ದೃಶ್ಯವನ್ನು ಕನಸು ಕಂಡರೆ ಆ ಮನೆಯಲ್ಲಿ *"ನಿಅ್ಮತ್ "* ಮತ್ತು *"ಬರಕತ್"* (ಸಮೃದ್ಧಿ ಮತ್ತು ಐಶ್ವರ್ಯ) ಕಡಿಮೆಯಾಗುವುದರ ಸೂಚನೆಯಾಗಿದೆ.
▪ಒಬ್ಬನು ತನ್ನ ಮನೆಯಲ್ಲಿ ತುಂಬಾ ಇಲಿಗಳು ವಾಸವಿರುವುದನ್ನು ಕನಸು ಕಂಡರೆ ಆ ಮನೆಯಲ್ಲಿ ಅನ್ನಹಾರದಲ್ಲಿ ಸಮೃದ್ಧಿ ಉಂಟಾಗುವುದರ ನಿಶಾನೆಯಾಗಿದೆ. ( ಯಾಕೆಂದರೆ, ಅನ್ನ ಪಾನೀಯ ಇರುವಲ್ಲೇ ಇಲಿಗಳು ಇರುತ್ತದೆ)
▪ಮನೆಯಲ್ಲಿ ಇಲಿಗಳು ಅತ್ತಿತ್ತ ಓಡಿ ಆಟ ಆಡುವ ದೃಶ್ಯವನ್ನು ಕಂಡರೆ ಆ ಮನೆಯಲ್ಲಿ ನೆಮ್ಮದಿ, ಆರಾಮ, ಸಂತೋಷ ಇರುವುದರ ಸಂಕೇತವಾಗಿದೆ.( ಯಾಕೆಂದರೆ, ಆಟ ಆಡುವುದು ಹೊಟ್ಟೆ ತುಂಬಿ ಮನಸ್ಸಿಗೆ ನೆಮ್ಮದಿ ಇರುವಾಗ ಮಾತ್ರ)
▪ಇಲಿಯು ಅವನು ಉಟ್ಟ ಉಡುಪನ್ನು ಕಚ್ಚುವ ಅಥವಾ ಕತ್ತರಿಸುವ ಕನಸು ಕಂಡರೆ ಅವನ ಇಹಲೋಕದ ದಿನಗಳು ಮುಗಿಯುವುದರ ನಿಶಾನೆಯಾಗಿದೆ.
▪ಇಲಿಯನ್ನು ತಿನ್ನುವುದು ಇಸ್ಲಾಮಿನಲ್ಲಿ ನಿಷಿದ್ಧ.
▪ಸಂಗ್ರಹ: ಇಮಾಮ್ ದುಮೈರಿಯ *ಹಯಾತುಲ್ ಹಯವಾನ್* ಇಮಾಮ್ ಅಶ್ಬೀಹಿಯ *ಅಲ್ ಮುಸ್ತತ್ರಫ್* ಇಮಾಮ್ ನಾಬುಲ್ಸಿಯ *ತಅ್ತೀರುಲ್ ಅನಾಂ ಫೀ ತಅ್ಬೀರಿಲ್ ಮನಾಂ* ಎಂಬ ಗ್ರಂಥ.
Comments